ADVERTISEMENT

ಇ– ಖಾತೆಗೆ ಮನವಿ, ಸಹಕಾರದ ಭರವಸೆ ನೀಡಿದ ಉಪವಿಭಾಗಾಧಿಕಾರಿ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ವಾರ್ಷಿಕ ಮಹಾಸಭೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 4:12 IST
Last Updated 10 ಡಿಸೆಂಬರ್ 2025, 4:12 IST
ಸಭೆಯಲ್ಲಿ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಮಾತನಾಡಿದರು
ಸಭೆಯಲ್ಲಿ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಮಾತನಾಡಿದರು   

ಮಡಿಕೇರಿ: ಇಲ್ಲಿನ ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ಭವನ ಸಭಾಂಗಣದಲ್ಲಿ ಮಂಗಳವಾರ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಹಲವು ವಿಷಯಗಳು ಚರ್ಚೆಗೆ ಬಂದವು.

ಮುಖ್ಯವಾಗಿ, ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಅವರು, ರಾಜ್ಯ ಸಂಸ್ಥೆಯಿಂದ ತರಬೇತಿ ಭವನ ಕಟ್ಟಲು ₹ 2 ಕೋಟಿ ಅನುದಾನ ಬಿಡುಗಡೆಯಾಗಲಿದ್ದು ಅದಕ್ಕೆ ಜಾಗದ ಇ– ಖಾತೆಯನ್ನು ಮಾಡಿಸಿಕೊಡುವಂತೆ ಉಪವಿಭಾಗಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ಜೊತೆಗೆ, ಡಿ. 27ರಿಂದ ಬೆಳಗಾವಿಯಲ್ಲಿ ನಡೆಯುವ ರಾಜ್ಯ ಜಾಂಬೂರಿಯ ಬಗ್ಗೆ ತಿಳಿಸಿದರು. ಮತ್ತು ಕುಶಾಲನಗರ ಘಟಕವು ಉತ್ತಮ ಸ್ಥಳೀಯ ಸಂಸ್ಥೆ ಎಂಬ ಗೌರವಕ್ಕೆ ಪಾತ್ರವಾಗಿದೆ ಎಂದರು.

ಮಾತನಾಡಿದ ಉಪ ವಿಭಾಗಧಿಕಾರಿ ನಿತಿನ್ ಚಕ್ಕಿ ಅವರು, ‘ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯುವುದು ಒಳ್ಳೆಯದು’ ಎಂದು ಸಲಹೆ ನೀಡಿದರು. 

ADVERTISEMENT

ಸಂಪಾಜೆ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಧನಂಜಯ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಎಲ್ಲಾ ಕಾರ್ಯಕ್ರಮ ಮಾಡಲು ಖಾಸಗಿ ಶಾಲೆಗಳನ್ನು ಅವಲಂಬಿಸಬೇಕಿದೆ’ ಎಂದರು.

‘2023-2024ನೇ ಸಾಲಿನಲ್ಲಿ ಉತ್ತಮ ಸ್ಥಳಿಯ ಸಂಸ್ಥೆ ಎಂದು ರಾಜ್ಯ ಸಂಸ್ಥೆಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್ ಸಿಂಧ್ಯ ಅವರಿಂದ ಪ್ರಶಸ್ತಿ ಪತ್ರವನ್ನು ಪಡೆದುಕೊಂಡಿರುತ್ತೇವೆ’ ಎಂದು ತಿಳಿಸಿದರು.

ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದ್ದು. ಮುಂದಿನ ದಿನಗಳಲ್ಲಿ ಪಿ.ಪಿ.ಟಿ ಮೂಲಕ ತೋರಿಸಬೇಕು ಎಂದು ಸೋಮವಾರಪೇಟೆ ಸ್ಥಳೀಯ ಸಂಸ್ಥೆಯ ಗೈಡ್ ಕ್ಯಾಪ್ಟನ್ ಚಂದ್ರಕಲಾ ಸಲಹೆ ನೀಡಿದರು.

ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ.ಪ್ರವೀಣ್ ದೇವರಗುಂಡ ಮಾತನಾಡಿ, ‘ಕುಶಾಲನಗರದಲ್ಲಿ ಅತ್ಯುತ್ತಮ ರ್‍ಯಾಲಿ ಮಾಡಿದ್ದೇವೆ’ ಎಂದು ಹೇಳಿದರು.

ಅಂಕೂರ್ ಶಾಲೆಯ ಸ್ಕೌಟ್ ಮಾಸ್ಟರ್ ಮತ್ತು ವಿಧ್ಯಾರ್ಥಿಗಳು ಲಕ್ನೋದಲ್ಲಿ ನಡೆದ ಜಾಂಬೂರಿಯಲ್ಲಿ ಭಾಗವಹಿಸಿದ್ದ ಅಲ್ಲಿಯ ಅನುಭವವನ್ನು ತಿಳಿಸಿದರು.

ಇದಕ್ಕೂ ಮುನ್ನ ಪ್ರಾಸ್ತವಿಕವಾಗಿ ಜಿಲ್ಲಾ ಸ್ಕೌಟ್ ಆಯುಕ್ತ ಜಿಮ್ಮಿ ಸಿಕ್ವೇರಾ ಮಾತನಾಡಿದರು.

ಹಿಂದಿನ ಸಾಲಿನ ವರದಿಯನ್ನು ಜಿಲ್ಲಾ ಕಾರ್ಯದರ್ಶಿ ಎಂ.ಎಂ ವಸಂತಿ ಮಂಡಿಸಿದರು. 2024-2025ನೇ ಸಾಲಿನ ವಾರ್ಷಿಕ ಚಟುವಟಿಕೆಯ ಕಾರ್ಯಕ್ರಮವನ್ನು ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ ಮಂಡಿಸಿದರು. 2025-2026ನೇ ಸಾಲಿನ ಕಾರ್ಯಯೋಜನೆ ಬಗ್ಗೆ ಕುಶಾಲನಗರ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಗಣೇಶ್ ಪ್ರಸ್ತಾಪಿಸಿದರು.  2024-2025 ನೇ ಸಾಲಿನ ಲೆಕ್ಕಪತ್ರ ಆಡಿಟ್ ವರದಿಯನ್ನು, 2025-2026ನೇ ಆಯವ್ಯಯವನ್ನು ಜಿಲ್ಲಾ ಸಂಸ್ಥೆಯ ಖಜಾಂಜಿಯವರಾದ ಟಿ.ಎಂ.ಮುದ್ದಯ್ಯ ಮಂಡಿಸಿದರು. 

ನಿಧನರಾದ ಸೋಮವಾರಪೇಟೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್, ಸಾವಿತ್ರಿ, ಗೈಡ್ ವಿಭಾಗದ ಸಂಘಟಕರಾಗಿದ್ದ ಜಾನಕಿ ವೇಣುಗೋಪಾಲ್ ಅವರಿಗೆ ಸಂತಾಪ ಸೂಚಿಸಲಾಯಿತು. ಸಾವಿತ್ರಿ ಅವರ ಪ್ರಯತ್ನದ ಫಲವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಲ್ಲಿ ತೆರೆದ ಬಾವಿಯ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿದ್ದನ್ನು ಸ್ಮರಿಸಲಾಯಿತು.

ಗೈಡ್ ಆಯುಕ್ತರಾದ ಹಾಗೂ ಹಿರಿಯ ಕಲಾವಿದೆ ರಾಣಿಮಾಚಯ್ಯ, ಸ್ಥಾನಿಕ ಆಯುಕ್ತ ಎಚ್.ಆರ್.ಮುತ್ತಪ್ಪ, ಗೈಡ್ ಸಹಾಯಕ ಆಯುಕ್ತರಾದ ಸುಲೋಚನಾ, ಸಂಪಾಜೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಉಷಾರಾಣಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.