ಸೋಮವಾರಪೇಟೆ: ತಾಲ್ಲೂಕಿನ ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ಅನುದಾನ ಒದಗಿಸುವುದರೊಂದಿಗೆ, ಮೂಲಸೌಲಭ್ಯ ಕಲ್ಪಿಸುವುದಾಗಿ ಶಾಸಕ ಮಂತರ್ ಗೌಡ ತಿಳಿಸಿದರು.
ತಾಲ್ಲೂಕಿನ ವಿವಿಧ ಸುಗ್ಗಿಕಟ್ಟೆಗಳಿಗೆ ಭೇಟಿ ನೀಡಿದ ಶಾಸಕ ಮಂತರ್ ಗೌಡ ಅವರು, ಇದರೊಂದಿಗೆ ಗ್ರಾಮೀಣ ಭಾಗಗಳಲ್ಲಿ ಆಗಬೇಕಿರುವ ರಸ್ತೆ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.
ಪಟ್ಟಣ ಹೊಂದಿಕೊಂಡಂತಿರುವ ಚೌಡ್ಲು ಗ್ರಾಮದ ಸುಗ್ಗಿ ಕಟ್ಟೆಗೆ ಭೇಟಿ ನೀಡಿದ ಶಾಸಕರು, ಸುಗ್ಗಿ ಕಟ್ಟೆಯ ಸುತ್ತಲೂ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಗ್ಯಾಲರಿ ನಿರ್ಮಾಣ, ನೆಲಕ್ಕೆ ಇಂಟರ್ ಲಾಕ್ ಸೇರಿದಂತೆ ಇನ್ನಿತರ ಕಾಮಗಾರಿ ಕೈಗೊಳ್ಳಲು ಶಾಸಕರ ನಿಧಿಯಿಂದ ₹10 ಲಕ್ಷ ಅನುದಾನ ಒದಗಿಸುವುದಾಗಿ ತಿಳಿಸಿದರು.
ಗ್ರಾಮದ ಈಶ್ವರ ಹಾಗೂ ಚೌಡ್ಲಯ್ಯ-ಮೂಡ್ಲಯ್ಯ ದೇವಾಲಯಗಳ ಅಭಿವೃದ್ಧಿಗೆ ತಲಾ ₹5 ಲಕ್ಷದಂತೆ ಒಟ್ಟು ₹10 ಲಕ್ಷ ಅನುದಾನ ನೀಡುವುದಾಗಿ ಇದೇ ಸಂದರ್ಭ ಭರವಸೆ ನೀಡಿದರು. ಪಟ್ಟಣದ ಚನ್ನಬಸಪ್ಪ ಸಭಾಂಗಣದಿಂದ ಚೌಡ್ಲು ಗ್ರಾಮ ಸಂಪರ್ಕ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಲು ಈಗಾಗಲೇ ₹50 ಲಕ್ಷ ಅನುದಾನ ನೀಡಲಾಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕರು ತಿಳಿಸಿದರು.
ಗ್ರಾಮಾಧ್ಯಕ್ಷ ಬನ್ನಳ್ಳಿ ಸತೀಶ್ ಮಾತನಾಡಿ, ಗ್ರಾಮದ ಸಮುದಾಯ ಭವನದ ಅಡುಗೆ ಮನೆ, ತಡೆಗೋಡೆ, ಚೌಡ್ಲು-ಕಲ್ಕಂದೂರು ಸಂಪರ್ಕ ರಸ್ತೆಗೆ ಅನುದಾನ ಒದಗಿಸುವಂತೆ ಮನವಿ ಮಾಡಿದರು. ಶೀಘ್ರವೇ ಯೋಜನಾ ಪಟ್ಟಿ ತಯಾರಿಸಿ ಕಾಮಗಾರಿ ಆರಂಭಿಸುವಂತೆ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾರಾಯಣಮೂರ್ತಿ ಅವರಿಗೆ ಶಾಸಕ ಡಾ. ಮಂತರ್ ಗೌಡ ಸೂಚಿಸಿದರು.
ಪ್ರಮುಖರಾದ ಚೇತನ್, ಬನ್ನಳ್ಳಿ ಗೋಪಾಲ್, ಯೋಗೇಂದ್ರ, ಗಿರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ವಿ.ಎ. ಲಾರೆನ್ಸ್, ಕಾಂಗ್ರೆಸ್ ಶಿಕ್ಷಕರ ಘಟಕದ ಅಧ್ಯಕ್ಷ ಸೋಮಶೇಖರ್, ಕಿರಣ್ ಉದಯಶಂಕರ್, ಗ್ರಾ.ಪಂ. ಸದಸ್ಯ ಎಸ್.ಐ. ಚೇತನ್ ಇದ್ದರು.
ಹಾನಗಲ್ಲು ಶೆಟ್ಟಳ್ಳಿ ಸುಗ್ಗಿ ಕಟ್ಟೆಗೆ ಭೇಟಿ ನೀಡಿದ ಶಾಸಕರು ಸಬ್ಬಮ್ಮ ದೇವರ ಸುಗ್ಗಿ ಬನದ ಅಭಿವೃದ್ಧಿಗೆ ₹10 ಲಕ್ಷ ಅನುದಾನ ಒದಗಿಸುವುದಾಗಿ ತಿಳಿಸಿದರು. ನಂತರ ತಲ್ತರೆಶೆಟ್ಟಳ್ಳಿ ಸುಗ್ಗಿಕಟ್ಟೆ, ಕುಮಾರಳ್ಳಿ, ನಗರಳ್ಳಿ, ತೋಳೂರುಶೆಟ್ಟಳ್ಳಿ ಸುಗ್ಗಿ ಕಟ್ಟೆಗಳಿಗೆ ಭೇಟಿ ನೀಡಿ ಆಗಬೇಕಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು, ಅನುದಾನ ಒದಗಿಸುವ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.