
ಸುಂಟಿಕೊಪ್ಪ: ಇಲ್ಲಿನ ಸಂತ ಅಂತೋಣಿ ದೇವಾಲಯದ ವತಿಯಿಂದ ಭಾನುವಾರ ಮಿಷನ್ ಸಂಡೆ ಕಾರ್ಯಕ್ರಮ ನಡೆಯಿತು. ಧರ್ಮಗುರುಗಳಾದ ವಿಜಯಕುಮಾರ್ ಅವರ ನೇತೃತ್ವದಲ್ಲಿ ವಾರದ ಪ್ರಾರ್ಥನೆ ನಡೆದ ನಂತರ ಮಿಷನ್ ಸಂಡೆಗೆ( ಫನ್ ಫೇರ್) ಚಾಲನೆ ನೀಡಲಾಯಿತು.
ಸುಂಟಿಕೊಪ್ಪ ಚರ್ಚಿಗೆ ಸಂಬಂಧಿಸಿದ ಕ್ರೈಸ್ತರು ಸಂತ ಮೇರಿ ಆಂಗ್ಲ ಮಾದ್ಯಮ ಶಾಲೆಯ ಆವರಣದಲ್ಲಿ ವಿವಿಧ ಬಗೆಯ ತಿಂಡಿ, ತಿನಿಸುಗಳು, ಊಟೋಪಚಾರಗಳು, ತರಕಾರಿಗಳ ಮಾರಾಟ ಮತ್ತು ಮಕ್ಕಳಿಗೆ ಆಟೋಟಗಳನ್ನು ಏರ್ಪಡಿಸಲಾಗಿತ್ತು.
ಬಿರಿಯಾನಿ, ಕೋಳಿ ಮಾಂಸ, ನೂಲುಪುಟ್ಟು, ಪರೋಟ ಖರೀದಿಯಲ್ಲಿ ಜನರು ಹೆಚ್ಚು ತೊಡಗಿದ್ದರು. ತರಕಾರಿ, ಐಸ್ ಕ್ರೀಮ್ ಖರೀದಿಸುವಂತೆ ಗ್ರಾಹಕರ ಓಲೈಸಿ ವ್ಯಾಪಾರ ಮಾಡಿ ಸಂತೋಷಗೊಂಡರು.
ಜ್ಯೂಸ್ ಬಾಟಲಿಗೆ ರಿಂಗ್ ಹಾಕುವುದು, ಗ್ಲಾಸ್ಗಳಿಗೆ ಚೆಂಡು ಎಸೆಯುವುದು, ಮಕ್ಕಳ ಲಕ್ಕಿ ಲಾಟರಿ ಮನರಂಜನೆ ನೀಡಿದವು. ಕ್ರೈಸ್ತರಿಗಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದರೂ ವಿವಿಧ ಸಮುದಾಯದ ಮಕ್ಕಳು, ಪೋಷಕರು ವಸ್ತುಗಳನ್ನು ಖರೀದಿಸಲು ಆಗಮಿಸಿದ್ದರು.
‘ಇದನ್ನು ಪ್ರತಿವರ್ಷವು ಬಹು ಸಂತೋಷದಿಂದಲೇ ಆಚರಿಸಿಕೊಂಡು ಬರುತ್ತಿದ್ದೇವೆ. ಎಲ್ಲ ಸಮುದಾಯದವರು ಖರೀದಿಗೆ ಬಂದು ನಮಗೆ ಸಹಕಾರ ನೀಡುತ್ತಿರುವುದು ಸಂತೋಷ ತಂದಿದೆ. ನಮ್ಮ ಚರ್ಚ್ಗೆ ಸೇರಿದ ಭಕ್ತರು ವಿವಿಧ ವ್ಯಾಪಾರವನ್ನು ಮಾಡುತ್ತಾರೆ. ವ್ಯಾಪಾರದಲ್ಲಿ ಬಂದ ಆದಾಯವನ್ನು ವ್ಯಾಪಾರಸ್ಥರು ಇಟ್ಟುಕೊಳ್ಳದೇ ಎಲ್ಲ ಹಣವನ್ನು ಒಟ್ಟುಗೂಡಿಸಿ ಚಿಕಿತ್ಸೆ ಅವಶ್ಯ ಇರುವವರಿಗೆ, ಅಂಗವಿಕಲರು ಅನಾರೋಗ್ಯಕ್ಕೆ ತುತ್ತದಾಗ ಅವರ ಚಿಕಿತ್ಸೆಗೆ, ಅಂಗವಿಕಲರ, ಕಡುಬಡವರ ಶ್ರೇಯೋಭಿವೃದ್ಧಿಗೆ ವಿನಿಯೋಗಿಸುತ್ತಾರೆ’ ಎಂದು ಧರ್ಮಗುರು ವಿಜಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸಂತ ಮೇರಿ ಶಾಲೆಯ ಮುಖ್ಯೋಪಾಧ್ಯಾಯರಾದ ಸೆಲ್ವರಾಜ್, ವಿನ್ಸೆಂಟ್, ಪಿ.ಎಫ್. ಸಬಾಸ್ಟೀನ್, ಜೇಸ್ ದಾಸ್, ಚರ್ಚಿನ ಪದಾಧಿಕಾರಿಗಳು, ಕ್ರೈಸ್ತ ಸಮೂದಾಯದ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.