ADVERTISEMENT

ಅ.17ರಂದು ಕಾವೇರಿಗೆ ತೀರ್ಥೋದ್ಭವ ಸಂಭ್ರಮ

ಈ ವರ್ಷ ಬೆಳಿಗ್ಗೆ 7.03ಕ್ಕೆ ಭಕ್ತರಿಗೆ ಒಲಿಯುವ ಕಾವೇರಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 15:27 IST
Last Updated 22 ಸೆಪ್ಟೆಂಬರ್ 2020, 15:27 IST
ತಲಕಾವೇರಿ
ತಲಕಾವೇರಿ    

ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಳವಾದ ತಲಕಾವೇರಿಯಲ್ಲಿ ಅ.17ರ ಶನಿವಾರ ತೀರ್ಥೋದ್ಭವ ನಡೆಯಲಿದೆ. ಈ ವರ್ಷ ಬೆಳಿಗ್ಗೆ 7.03ಕ್ಕೆ ಸಲ್ಲುವ ಕನ್ಯಾ ಲಗ್ನದಲ್ಲಿ ಕಾವೇರಿ, ತೀರ್ಥರೂಪಿಣಿ ಆಗಿ ಭಕ್ತರಿಗೆ ಒಲಿಯಲಿದ್ದಾಳೆ.

ಪ್ರತಿ ವರ್ಷ ತೀರ್ಥೋದ್ಭವದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಮೈಸೂರು, ಮಂಡ್ಯ ಸೇರಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಮಿಳುನಾಡು–ಕೇರಳ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಿದ್ದರು. ಆದರೆ, ಈ ವರ್ಷ ಕೋವಿಡ್ ಕಾರಣದಿಂದ ಭಕ್ತರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ.

ತೀರ್ಥೋದ್ಭವ ನಡೆದ ಬಳಿಕ ಕಾವೇರಿ ತೀರ್ಥವನ್ನು ಪವಿತ್ರ ಕುಂಡಿಕೆಯಿಂದ ಕೊಂಡೊಯ್ದು ಕೊಡಗಿನ ಮನೆ ಮನೆಗೆ ವಿತರಿಸುವ ಸಂಪ್ರದಾಯವೂ ಇದೆ.

ADVERTISEMENT

ಸೆ. 26ರಂದು ಬೆಳಿಗ್ಗೆ 8.31ಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಭಾಗಮಂಡಲದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ಚಾಲನೆ ದೊರೆಯಲಿದೆ.

ಅ.4ರಂದು ಬೆಳಿಗ್ಗೆ 10.33ರ ವೃಶ್ಚಿಕ ಲಗ್ನದಲ್ಲಿ ಆಜ್ಞಾ ಮುಹೂರ್ತ, 14ರಂದು ಬೆಳಿಗ್ಗೆ 11.45ಕ್ಕೆ ಅಕ್ಷಯ ಪಾತ್ರೆ ಇರಿಸುವುದು, ಅದೇ ದಿನ ಸಂಜೆ 5.15ರ ಮೀನಾ ಲಗ್ನದಲ್ಲಿ ಕಾಣಿಕೆ ಡಬ್ಬಿಯಿಡುವ ಧಾರ್ಮಿಕ ಕಾರ್ಯಗಳು ಕ್ಷೇತ್ರದಲ್ಲಿ ನಡೆಯಲಿವೆ ಎಂದು ಭಗಂಡೇಶ್ವರ – ತಲಕಾವೇರಿ ದೇವಾಲಯ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.