ADVERTISEMENT

ಯುವಜನರಿಗೆ ಕೊಡವ ಸಂಸ್ಕೃತಿ ಕಲಿಸಿ: ಮಾಳೇಟಿರ ಅಭಿಮನ್ಯುಕುಮಾರ್

ಕೈಲ್ ಮುಹೂರ್ತ ಸಂತೋಷ ಕೂಟದಲ್ಲಿ ಮಾಳೇಟಿರ ಅಭಿಮನ್ಯುಕುಮಾರ್

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 5:06 IST
Last Updated 30 ಸೆಪ್ಟೆಂಬರ್ 2024, 5:06 IST
ಸೋಮವಾರಪೇಟೆ ಕೊಡವ ಸಮಾಜದಲ್ಲಿ ನಡೆದ ಕೈಲ್ ಮುಹೂರ್ತ ಸಂತೋಷಕೂಟದ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿದರು.
ಸೋಮವಾರಪೇಟೆ ಕೊಡವ ಸಮಾಜದಲ್ಲಿ ನಡೆದ ಕೈಲ್ ಮುಹೂರ್ತ ಸಂತೋಷಕೂಟದ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿದರು.   

ಸೋಮವಾರಪೇಟೆ: ‘ಕೊಡವ ಸಂಸ್ಕೃತಿ ಆಚಾರ ವಿಚಾರ ಪಾಲಿಸಿ, ನಮ್ಮ ಯುವ ಜನಾಂಗಕ್ಕೂ ಕಲಿಸದಿದ್ದಲ್ಲಿ, ಅವುಗಳು ನಾಶವಾಗುತ್ತವೆ’ ಎಂದು ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ಹೇಳಿದರು.

ಸ್ಥಳೀಯ ಕೊಡವ ಸಮಾಜ ಸಭಾಂಗಣದಲ್ಲಿ, ಸಮಾಜದಿಂದ ಭಾನುವಾರ ಆಯೋಜಿಸಿದ್ದ ಕೈಲ್ ಮುಹೂರ್ತ ಸಂತೋಷಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕೊಡವ ಸಂಸ್ಕೃತಿ ಪ್ರತೀಕವಾಗಿರುವ ಹಬ್ಬಗಳ ಆಚರಣೆ ಮೂಲಕ ಸಮುದಾಯ ಒಂದಾಗಬೇಕು. ನಮ್ಮ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೂ ತಿಳಿಹೇಳಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

 ‘ಸಮಾಜಕ್ಕೆ ಒಳಪಟ್ಟಿರುವ ಚೌಡ್ಲು ಗ್ರಾಮದ ಜಾಗದಲ್ಲಿ ಮುಂದಿನ ದಿನಗಳಲ್ಲಿ ಭವನ ನಿರ್ಮಾಣಕ್ಕೆ ತೀರ್ಮಾನಿಸಲಾಗಿದ್ದು, ಇದಕ್ಕೆ ಸಮುದಾಯ ಬಾಂಧವರು ಸಹಕಾರ ನೀಡಬೇಕಾಗಿದೆ. ಡಿಸೆಂಬರ್ 24 ಹಾಗೂ 25ರಂದು ಸಮಾಜದ ಸಭಾಂಗಣದಲ್ಲಿ ಅದ್ದೂರಿಯಾಗಿ ಸುವರ್ಣ ಮಹೋತ್ಸವ ನಡೆಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಸ್ಫರ್ಧೆಗಳು ನಡೆಯಲಿವೆ. ವಿವಿಧ ಕ್ಷೇತ್ರಗಳ ಸಾಧಕರು, ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕೊಡವ ಪೋಷಕರಿಗೆ ಸನ್ಮಾನ, ಇದುವರೆಗೂ ಸಮಾಜ ಬೆಳೆದು ಬಂದ ರೀತಿ, ಸಾಧನೆ ಹಾಗೂ ಬರಹಗಾರರ ಕಥೆ, ಕವನ, ಲೇಖನಗಳನ್ನೊಳಗೊಂಡ ಸ್ಮರಣ ಸಂಚಿಕೆ ಹೊರತರಲಾಗುವುದು’ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಕೆ.ನಾಚಪ್ಪ ಮಾತನಾಡಿ,‘ಕೊಡವ ಸಮುದಾಯದ ಯುವ ಜನಾಂಗ ವಿದ್ಯಾಭ್ಯಾಸಕ್ಕೆ ಹೆಚ್ಚು ಆಸಕ್ತಿ ತೋರಬೇಕು. ಕೇವಲ ಕಂಪೆನಿ ಉದ್ಯೋಗಕ್ಕೆ ಸೀಮಿತವಾಗದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆ ತೋರಲು ಪೋಷಕರು ಸಹಕರಿಸಬೇಕು’ ಎಂದರು. 

‘ಭಾರತೀಯ ಸೈನ್ಯದಲ್ಲಿ ಕೊಡವ ಸೈನಿಕರಿಗೆ ವಿಶೇಷ ಗೌರವವಿದೆ. ವೀರ ಪರಂಪರೆ ಹೊಂದಿರುವ ಕೊಡವ ಸಂಸ್ಕೃತಿ ಉಳಿಯಬೇಕು. ನಮ್ಮ ಪೂರ್ವಿಕರು ನಮಗೆ ಉಳಿಸಿಕೊಟ್ಟಿರುವ ಜಾಗವನ್ನು ಯಾವುದೇ ಸಂದರ್ಭದಲ್ಲೂ ಹೊರಗಿನವರಿಗೆ ಮಾರಾಟ ಮಾಡದೆ, ಅದನ್ನು ಉಳಿಸಿ ಬೆಳೆಸಬೇಕು’ ಎಂದರು.

ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಬೊಳಂದಂಡ ಕುಟ್ಟಪ್ಪ, ಕಾರ್ಯದರ್ಶಿ ಕೊಚ್ಚೆರ ಅನಿಲ್ ಉಪಸ್ಥಿತರಿದ್ದರು. ಮಲ್ಲಾಜಿರ ಸುನು ಕಿಶೋರ್, ಹಂಚೆಟ್ಟಿರ ಸಾರಿಕ ತಮ್ಮಯ್ಯ, ಪೋರೆರ ಖುಷಿ, ಅಜ್ಜಮಕ್ಕಡ ಅಕ್ಷಿತಾ ಕಾರ್ಯಪ್ಪ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಸದಸ್ಯರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆದವು.

ಸೋಮವಾರಪೇಟೆ ಕೊಡವ ಸಮಾಜದಲ್ಲಿ ನಡೆದ ಕೈಲ್ ಮುಹೂರ್ತ ಸಂತೋಷಕೂಟದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಮಾಜದ ಸದಸ್ಯರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.