ಮಡಿಕೇರಿ: ‘ಮಧುಮೇಹಿಗಳಿಗೆ ವರದಾನ’ ಎನಿಸಿದ ಭತ್ತದ ತಳಿ ಆರ್.ಎನ್.ಆರ್-15048ರ ಬಿತ್ತನೆ ಬೀಜಗಳು ಈಗ ಕೊಡಗಿನಲ್ಲೂ ಲಭ್ಯವಿದೆ.
‘ತೆಲಂಗಾಣ ಸೋನಾ’ ಎಂದು ಕರೆಯಲಾಗುವ 2015ರಲ್ಲಿ ತೆಲಂಗಾಣ ರಾಜ್ಯ ಕೃಷಿ ವಿಶ್ವವಿದ್ಯಾನಿಲಯವು ಬಿಡುಗಡೆ ಮಾಡಿದ ಈ ಸುಧಾರಿತ ಭತ್ತದ ತಳಿಯಲ್ಲಿ ಇತರೆ ಭತ್ತದ ತಳಿಗಳಿಗೆ ಹೋಲಿಸಿದರೆ ಶರ್ಕರಪಿಷ್ಟ ಶೇ 50ರಷ್ಟು ಕಡಿಮೆ ಇದೆ ಮತ್ತು ಶೇ 5ರಷ್ಟು ಹೆಚ್ಚಿನ ಪ್ರಮಾಣದ ಪ್ರೊಟೀನ್ನನ್ನು ಒಳಗೊಂಡಿದೆ. ಆದ್ದರಿಂದ ಇದು ಮಧುಮೇಹದಿಂದ ಬಳಲುತ್ತಿರುವವರು ಸೇವಿಸಬಹುದು ಎಂದು ತಜ್ಞರು ಹೇಳುತ್ತಾರೆ.
ಜೊತೆಗೆ ಈ ಭತ್ತದ ತಳಿಯು ಅನೇಕ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದೆ. ಈಗ ಈ ತಳಿ ಕೊಡಗಿನಲ್ಲಿ ಲಭ್ಯವಿದೆ.
ಈಗಾಗಲೇ ಈ ಭತ್ತದ ತಳಿಯ ಬೀಜವನ್ನು ಕೃಷಿ ಇಲಾಖೆಯು ಸುಮಾರು 600 ಕ್ವಿಂಟಲ್ನಷ್ಟು ರೈತರಿಗೆ ವಿತರಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ 200 ಹೆಕ್ಟೇರ್ಗಳ ಪ್ರಾತ್ಯಕ್ಷಿಕೆಯನ್ನು ಇಲಾಖೆ ಕೈಗೆತ್ತಿಕೊಂಡಿದೆ. ಇಷ್ಟು ಪ್ರದೇಶದ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ, ರಾಸಾನಿಯಕ ಗೊಬ್ಬರ, ಔಷಧಿಗಳೂ, ಬಿತ್ತನೆಯ ಕ್ರಮ, ತಾಂತ್ರಿಕತೆ ಬಗ್ಗೆ ಮಾಹಿತಿ ನೀಡಲಾಗಿದೆ. ಯಂತ್ರೋಪಕರಣಗಳನ್ನು ಬಳಸಿ ಈ ತಳಿಯ ಭತ್ತ ನಾಟಿ ಪ್ರಾತ್ಯಾಕ್ಷಿಕೆ ಕೈಗೊಳ್ಳಲಾಗುತ್ತಿದೆ.
ಕೃಷಿ ಇಲಾಖೆ ಈಗ ಹೋಬಳಿ ಮಟ್ಟದಲ್ಲಿ ಇರುವ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಈ ಆರ್.ಎನ್.ಆರ್ ಭತ್ತದ ತಳಿಯನ್ನು ಲಭ್ಯವಿರುವಂತೆ ವ್ಯವಸ್ಥೆ ಮಾಡಿದೆ. ರಾಷ್ಟ್ರೀಯ ಆಹಾರ ಭದ್ರತೆ ಯೋಜನೆ ಮೂಲಕ ಜಿಲ್ಲೆಯ ರೈತರು ಈ ತಳಿಯನ್ನು ಬೆಳೆಯುವಂತೆ ಪ್ರೋತ್ಸಾಹಿಸುತ್ತಿದೆ.
ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಕೂಡ ಈ ತಳಿಯ ಬಗ್ಗೆ ರೈತರಿಗೆ ಮಾಹಿತಿ ನೀಡಲಾರಂಭಿಸಿದೆ. ಈ ವರ್ಷ ಈಗಾಗಲೇ ಪೋನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಪ್ರವೀಣ್ ಎಂಬುವವರು 13 ಎಕರೆ ಪಾಳು ಬಿದ್ದಿರುವ ಭತ್ತದ ಗದ್ದೆಯನ್ನು ಗುತ್ತಿಗೆಗೆ ಪಡೆದು ಆರ್.ಎನ್.ಆರ್ ಭತ್ತದ ತಳಿಯನ್ನು ನಾಟಿ ಮಾಡಿದ್ದಾರೆ ಮತ್ತು ಇತರ ಕೆಲವು ರೈತರು ರೈತ ಸಂಪರ್ಕ ಕೇಂದ್ರಗಳಿಂದ ಖರೀದಿಸಿ ನಾಟಿಯನ್ನು ಮಾಡುತ್ತಿದ್ದಾರೆ.
ಈ ತಳಿಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದ್ದಲ್ಲಿ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.
ಕ್ಷೀಣಿಸುತ್ತಿರುವ ಭತ್ತದ ಕೃಷಿ
ಭತ್ತವು ಕೊಡಗು ಜಿಲ್ಲೆಯ ಬಹು ಮುಖ್ಯ ಬೆಳೆ ಮತ್ತು ಅನ್ನವು ಇಲ್ಲಿನ ಜನರ ಬಹುಮುಖ್ಯ ಆಹಾರ. ಅಧಿಕ ಮಳೆ ಬೀಳುವ ಈ ಪ್ರದೇಶದಲ್ಲಿ ಭತ್ತದ ಬೆಳೆಯನ್ನು ಪರಂಪರಗತವಾಗಿ ಸಾಂಪ್ರದಾಯಿಕವಾಗಿ ಮಡಿಕೇರಿ, ಪೊನ್ನಂಪೇಟೆ, ವಿರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕುಗಳಲ್ಲಿ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ದಶಕಗಳ ಹಿಂದೆ ‘ಅನ್ನದ ಬಟ್ಟಲು’ ಎಂದೇ ಕರೆಯುತ್ತಿದ್ದ ಜಿಲ್ಲೆಯು ದಿನ ಕಳೆದಂತೆ ಹಲವು ಕಾರಣಗಳಿಂದ ಭತ್ತದ ಬೆಳೆಯಲ್ಲಿ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು ಭತ್ತ ಬೆಳೆಯುವ ಪ್ರದೇಶವು ಗಣನೀಯವಾಗಿ ಕ್ಷೀಣಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ರೈತರು ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲು ಆಸಕ್ತಿ ಹೊಂದುತ್ತಿದ್ದು, ಭತ್ತವನ್ನು ಬೆಳೆಯುವ ಪ್ರದೇಶವು ಕಡಿಮೆಯಾಗುತ್ತಿದೆ. ಇಳುವರಿಯಲ್ಲಿ ಕೂಡ ಇಳಿಮುಖವಾಗಿರುವುದು ಕಂಡು ಬಂದಿದೆ. ಇಂತಹ ಸಂದರ್ಭದಲ್ಲಿ ಕೃಷಿಕರು ಧೃತಿಗೆಡದೇ, ಭತ್ತದ ಕೃಷಿಯನ್ನು ವಾಣಿಜ್ಯ ದೃಷ್ಠಿಯಿಂದ ನೋಡದೆ ತಮ್ಮಲ್ಲಿರುವ ಭತ್ತ ಬೆಳೆಯುವ ಪ್ರದೇಶದಲ್ಲಿ ತಮ್ಮ ಮನೆಯ ಆಹಾರ ಸುಭದ್ರತೆಗಾದರು ಭತ್ತವನ್ನು ಬೆಳೆಸಿಕೊಂಡು, ಸೂಕ್ಷ್ಮ ಪರಿಸರವಾದ ಕೊಡಗಿನ ಪ್ರಾಕೃತಿಕ ಹಾಗೂ ಸಾಮಾಜಿಕ ಆರ್ಥಿಕ ಸಮತೋಲನವನ್ನು ಕಾಪಾಡಿಕೊಂಡು ಹೋಗಬೇಕಿದೆ.
ಹೆಚ್ಚಿನ ಮಾಹಿತಿಗಾಗಿ ಗೋಣಿಕೊಪ್ಪಲುವಿನ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರವನ್ನು ಹಾಗೂ ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದು.
ಈ ತಳಿಯ ಪ್ರಮುಖ ಗುಣಲಕ್ಷಣಗಳು
* ಇದು ಮುಖ್ಯವಾಗಿ ಬೆಂಕಿ ರೋಗವನ್ನು ತಡೆದುಕೊಂಡು ಬೆಳೆಯುವ ತಳಿಯಾಗಿದೆ
* ಇದು ಕಟಾವಿಗೆ 120ರಿಂದ 125 ದಿನಗಳಲ್ಲಿ (ಅಲ್ಪಾವದಿ) ಬರುತ್ತದೆ. ಇದನ್ನು ಮುಂಗಾರು ಮತ್ತು ಹಿಂಗಾರುವಿನಲ್ಲಿಯೂ ಕೂಡ ಬೆಳೆಯಬಹುದು.
* ಇದರಲ್ಲಿ ಮುಖ್ಯವಾಗಿ ಗ್ಲೈಸಮಿಕ್ ಇಂಡೆಕ್ಸ್ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ನಿಧಾನವಾಗಿ ಜೀರ್ಣವಾಗುತ್ತದೆ. ಇದರಿಂದ ಬೇಗನೆ ಹಸಿವಾಗುವುದಿಲ್ಲವಾದ್ದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಬೇಗನೆ ಹೆಚ್ಚಾಗುವುದಿಲ್ಲ.
* ಬೇರೆಯ ಭತ್ತದ ತಳಿಗಳಿಗೆ ಹೋಲಿಸಿದರೆ ಶರ್ಕರಪಿಷ್ಟ ಶೇ 50ರಷ್ಟು ಕಡಿಮೆ ಇದೆ ಮತ್ತು ಶೇ 5ರಷ್ಟು ಹೆಚ್ಚಿನ ಪ್ರಮಾಣದ ಪ್ರೊಟೀನ್ನನ್ನು ಒಳಗೊಂಡಿದೆ. ಆದ್ದರಿಂದ ಇದು ಮಧುಮೇಹದಿಂದ ಬಳಲುತ್ತಿರುವವರು ಸೇವಿಸಬಹುದು
* ಈ ತಳಿಯ 100 ಕೆಜಿ ಭತ್ತವನ್ನು ಮಿಲ್ಲಿಗೆ ಕೊಟ್ಟರೆ ಅದರಲ್ಲಿ ಸರಾಸರಿ 67 ಕೆಜಿಯಷ್ಟು ಅಕ್ಕಿ ಸಿಗುತ್ತದೆ.
* ಈ ತಳಿಯೂ ಸೋನಾ ಮಸೂರಿ ಅಕ್ಕಿಯಂತೆ ಇರುವುದರಿಂದ ಊಟಕ್ಕೆ ಹೇಳಿ ಮಾಡಿಸಿದಂತಿದೆ.
* ಈ ತಳಿಯನ್ನು ತಡವಾಗಿಯೂ ಅಂದರೆ ಆಗಸ್ಟ್ ತಿಂಗಳಲ್ಲಿ ನಾಟಿ ಮಾಡಬಹುದು. ಇದರ ಸರಾಸರಿ ಇಳುವರಿ ಪ್ರತೀ ಎಕರೆ ಕೊಡಗಿನಲ್ಲಿ 15 ರಿಂದ 20 ಕ್ವಿಂಟಾಲ್ ತೆಗೆಯಬಹುದು.
(ಮಾಹಿತಿ: ಗೋಣಿಕೊಪ್ಪಲುವಿನ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ)
ಸಬ್ಸಿಡಿ ದರದಲ್ಲಿ ಲಭ್ಯ
ಕರ್ನಾಟಕ ರಾಜ್ಯ ಬೀಜ ನಿಗಮ ರಾಜ್ಯ ಬೀಜ ಪ್ರಮಾಣ ಸಂಸ್ಥೆ ಬೆಳವಣಿಗೆ ಹಂತದಲ್ಲೇ ನೋಡಿ ಬಿತ್ತನೆ ಬೀಜವನ್ನಾಗಿಸಿ ರೈತರಿಗೆ ಬೆಳೆಯುವುದಕ್ಕೆ ಕೊಡುತ್ತಾರೆ. ಇದು ಸಬ್ಸಿಡಿ ದರದಲ್ಲಿ ಲಭ್ಯವಿದೆ. ಅಲ್ಪಾವಧಿ ತಳಿಯಾಗಿರುವುದರಿಂದ ತಡವಾಗಿ ಬಿತ್ತನೆ ಮಾಡಿದರೂ 120 ದಿನಗಳಲ್ಲೆ ಕಟಾವಿಗೆ ಬರುತ್ತದೆ. ಈ ಭತ್ತ ಸಣ್ಣದಾಗಿದ್ದು ಇಳುವರಿಯೂ ಉತ್ತಮವಾಗಿದೆ. ಈಗಾಗಲೇ 600 ಕ್ವಿಂಟಲ್ನಷ್ಟು ಬೀಜ ಈಗ ವಿತರಣೆಯಾಗಿದೆ. ಇನ್ನೂ ದಾಸ್ತಾನು ಇದೆ ಚಂದ್ರಶೇಖರ್ ಕೃಷಿ ಇಲಾಖೆಯ ಜಂಟಿ ನಿರ್ದೇಶಕ. *** ಮಧುಮೇಹದಿಂದ ಸೇವಿಸಬಹುದು ಈ ತಳಿಯಲ್ಲಿ ಗ್ಲೈಸಮಿಕ್ ಇಂಡೆಕ್ಸ್ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ನಿಧಾನವಾಗಿ ಜೀರ್ಣವಾಗುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ಉಪಯೋಗಿಸಬಹುದು. ಜೊತೆಗೆ ಈ ತಳಿ ಬೆಂಕಿ ರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದೆ. ಶರ್ಕರಪಿಷ್ಠವೂ ಕಡಿಮೆ ಇದ್ದು ಪ್ರೋಟಿನ್ ಹೆಚ್ಚಿರುತ್ತದೆ ಡಾ.ಕೆ.ವಿ.ವೀರೇಂದ್ರಕುಮಾರ್ ವಿಜ್ಞಾನಿಗಳು
(ಸಸ್ಯ ಸಂರಕ್ಷಣೆ) ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.