ಕುಶಾಲನಗರ: ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದ ಬಳಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಗಿರಿಜನರು ಭಾನುವಾರ ಅಲ್ಲಿಯೇ ಪ್ರತಿಭಟನೆ ನಡೆಸಿದರು.
ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿತ್ಯ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡಲು ಜಾಗದ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಬ್ಯಾಡಗೊಟ್ಟದಲ್ಲಿ ಜಾಗ ಪರಿಶೀಲಿಸಿ
ನೂತನ ಕಸ ವಿಲೇವಾರಿ ಘಟಕ ಸ್ಥಾಪನೆಗೆ ₹ 5 ಲಕ್ಷ ಮಂಜೂರು ಮಾಡಿದ್ದಾರೆ. ಇದೀಗ ಗುತ್ತಿಗೆದಾರರು ಕಾಮಗಾರಿ ಕೈಗೊಳ್ಳುತ್ತಿರುವಾಗ ಅಲ್ಲಿನ ನಿವಾಸಿಗಳು ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಮಾತನಾಡಿ, ‘ಇಲ್ಲಿ 350ಕ್ಕೂ ಅಧಿಕ ಗಿರಿಜನ ಕುಟುಂಬಗಳು ಅತ್ಯಂತ ಸಂಕಷ್ಟಕರ ಜೀವನ ನಡೆಸುತ್ತಿದ್ದು, ಜೊತೆಗೆ ಅನೇಕ ಮಂದಿ ಅನಾರೋಗ್ಯದಿಂದಬಳಲುತ್ತಿದ್ದಾರೆ. ಕೊರೊನಾ ಆತಂಕ ಜನರನ್ನು ಕಾಡುತ್ತಿದೆ. ಪುನರ್ವಸತಿ ಕೇಂದ್ರದ ಜನರಿಗೆ ಸೂಕ್ತ ಚಿಕಿತ್ಸೆಯ ಕೂಡಾ ಲಭಿಸುತ್ತಿಲ್ಲ. ಅಲ್ಲದೇ ಸಂಬಂಧಪಟ್ಟ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಮೂಲ ಸೌಲಭ್ಯಗಳ ಜೊತೆಗೆ ಅವರ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸುತ್ತಿಲ್ಲ’ ಎಂದು ದೂರಿದರು.
‘ಗಿರಿಜನರ ವಸತಿ ಸಮುಚ್ಚಯ ಪಕ್ಕದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಮುಂದಾಗಿ ಪರಿಸರವನ್ನು ಹಾಳು ಮಾಡಲು ಗ್ರಾಮ ಪಂಚಾಯಿತಿ ಮುಂದಾಗಿದೆ. ಆದ್ದರಿಂದ ಘಟಕ ಸ್ಥಾಪನೆಯನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.
ಗಿರಿಜನ ಮುಖಂಡ ಶಂಕರ ಮಾತನಾಡಿ, ‘ಕಸ ವಿಲೇವಾರಿ ಘಟಕದಿಂದ ಗಿರಿಜನರಿಗೆ ತೊಂದರೆ ಉಂಟಾಗಲಿದೆ ನಮ್ಮನ್ನು ದಿಡ್ಡಳ್ಳಿಯಿಂದ ಒಕ್ಕಲೆಬ್ಬಿಸಿದ ರೀತಿಯಲ್ಲಿ ಇಲ್ಲಿಂದಲೂ ಓಡಿಸುವ ಹುನ್ನಾರ ನಡೆಯುತ್ತಿದೆ’ ಎಂದು ದೂರಿದರು.
ಈ ಸಂದರ್ಭ ಐಎನ್ಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಪಿ. ಹಮೀದ್ ಸೇರಿದಂತೆ ನೂರಾರು ಗಿರಿಜನರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.