ADVERTISEMENT

ಕೊಡಗು ರಾಜ್ಯದ ಗತ ಇತಿಹಾಸ ದಾಖಲಿಸಿದ ತೀರ್ಪು: ಎನ್.ಯು.ನಾಚಪ್ಪ

ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 6:16 IST
Last Updated 13 ಮಾರ್ಚ್ 2024, 6:16 IST
ಎನ್‌.ಯು.ನಾಚಪ್ಪ
ಎನ್‌.ಯು.ನಾಚಪ್ಪ   

ಮಡಿಕೇರಿ: ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯ ರದ್ದತಿಯ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠವು ಹಿಂದಿನ ಕೊಡಗು ರಾಜ್ಯದ ಗತ ಇತಿಹಾಸವನ್ನು ದಾಖಲಿಸಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠವು 2023ರ ಡಿ.11ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಕುರಿತು ಮಹತ್ವದ ತೀರ್ಪು ನೀಡಿತು. ಇದರಲ್ಲಿ ಕೂರ್ಗ್ ರಾಜ್ಯವನ್ನು ಹೊರತುಪಡಿಸಿ ಎಲ್ಲಾ ‘ಸಿ’ ರಾಜ್ಯಗಳು ಅದರ ಹಣಕಾಸಿನ ನೆರವಿಗಾಗಿ ಕೇಂದ್ರದ ಮೇಲೆ ಹೆಚ್ಚು ಅವಲಂಬಿತವಾಗಿವೆ. ಅದರ ಹೊರತಾಗಿಯೂ ತ್ರಿಪುರಾ, ದೆಹಲಿ, ಹಿಮಾಚಲ ಮತ್ತು ಮಣಿಪುರದ ಭಾಗ ‘ಸಿ’ ರಾಜ್ಯತ್ವದ ಸ್ಥಾನಮಾನವನ್ನು ಉಳಿಸಿಕೊಂಡಿವೆ ಮತ್ತು ನಂತರ ಭಾರತದ ಇತರ ಪ್ರಮುಖ ಪ್ರಾಂತೀಯ ರಾಜ್ಯಗಳಿಗೆ ಸಮಾನವಾಗಿ ಪ್ರಮುಖ ರಾಜ್ಯಗಳಾಗಿ ಬಡ್ತಿ ನೀಡಲಾಯಿತು ಎಂದು ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕೊಡವ ತಾಯ್ನಾಡಿನ ಹಿಂದಿನ ಕೂರ್ಗ್ ರಾಜ್ಯವು ಭಾರತದ 6 ‘ಸಿ’ ರಾಜ್ಯಗಳಲ್ಲಿ ಕೇಂದ್ರ ಅಥವಾ ಭಾರತೀಯ ಒಕ್ಕೂಟದ ಆರ್ಥಿಕ ಅವಲಂಬನೆ ಮತ್ತು ಸಹಾಯವಿಲ್ಲದೆ ಸ್ವಂತವಾಗಿ ಆಡಳಿತ ನಡೆಸುವ ಸಾಮರ್ಥ್ಯವನ್ನು ಹೊಂದಿರುವ ಏಕೈಕ ‘ಸಿ’ ರಾಜ್ಯವಾಗಿತ್ತು ಎಂದು ಸಾಂವಿಧಾನಿಕ ಪೀಠವು ಗಮನಿಸಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಇದು 1956ರವರೆಗೆ ಆಳ್ವಿಕೆ ನಡೆಸಿದ ಕೊಡಗು ‘ಸಿ’ ರಾಜ್ಯದ ಕಲ್ಯಾಣ ರಾಜ್ಯ ಆಡಳಿತದ ಹೆಮ್ಮೆಯ ಹೆಗ್ಗುರುತಿನ ಸ್ಮರಣೆಯಾಗಿದೆ ಎಂದು ಅವರು ಹೇಳಿದ್ದಾರೆ.

ವಿಪರ್ಯಾಸವೆಂದರೆ, ಹೆಚ್ಚು ಅವಲಂಬಿತ ರಾಜ್ಯಗಳನ್ನು ಸ್ವತಂತ್ರ ರಾಜ್ಯಗಳಾಗಿ ಮಾಡಲಾಯಿತು. ಏಕೈಕ ಸ್ವಾವಲಂಬನೆ, ಸ್ವಾಭಿಮಾನಿ ಮತ್ತು ಸ್ವತಂತ್ರ ರಾಜ್ಯವಾದ ಕೂರ್ಗ್ ಕರ್ನಾಟಕ ರಾಜ್ಯಕ್ಕೆ ಕೇವಲ ಜಿಲ್ಲೆಯಾಗಿ ಅಧೀನವಾಯಿತು. ಇದೊಂದು 20ನೇ ಶತಮಾನದ ಬಹುದೊಡ್ಡ ಭೂ ರಾಜಕೀಯ ಉತ್ಪಾತವಾಗಿದೆ ಎಂದು ನಾಚಪ್ಪ ಆರೋಪಿಸಿದ್ದಾರೆ.

ಸಂವಿಧಾನದ ಆರ್ಟಿಕಲ್ 244 ಆರ್/ಡಬ್ಲ್ಯೂ 6ನೇ ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಲಡಾಖ್ ಹಾಗೂ ಲೇಹ್ ಬೌದ್ಧ ಸ್ವಾಯತ್ತ ಮಂಡಳಿಗಳು ಮತ್ತು ಪ್ರದೇಶಗಳ ಸಾಲಿನಲ್ಲಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯನ್ನು ಸೃಷ್ಟಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.