
ಮಡಿಕೇರಿ: ಕಾರ್ತಿಕ ಹುಣ್ಣಿಮೆ ಪ್ರಯುಕ್ತ ಇಲ್ಲಿನ ಓಂಕಾರೇಶ್ವರ ದೇವಾಲಯದಲ್ಲಿ ಬುಧವಾರ ರಾತ್ರಿ ನಡೆದ ತೆಪ್ಪೋತ್ಸವವನ್ನು ಹಲವು ಭಕ್ತರು ಕಣ್ತುಂಬಿಕೊಂಡರು.
ದೇವಸ್ಥಾನ ವ್ಯವಸ್ಥಾಪನಾ ವತಿಯಿಂದ ಸಂಜೆ 6 ಗಂಟೆಗೆ ನಡೆದ ಮಹಾಪೂಜೆಯ ನಂತರ 6.30ಕ್ಕೆ ದೇವಾಲಯದ ವತಿಯಿಂದ ತೆಪ್ಪೋತ್ಸವ, ಪಲ್ಲಕ್ಕಿ ಉತ್ಸವ, ದಟ್ಟೋತ್ಸವಗಳು ಶ್ರದ್ಧಾಭಕ್ತಿಯಿಂದ ನಡೆದವು.
ಹಲವು ಮಂದಿ ಭಕ್ತರು ಈ ದೇವತಾ ಕಾರ್ಯದಲ್ಲಿ ಭಾಗಿಯಾದರು. ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಇದ್ದರು.
ಶಾಂತಿಪೂಜೆ
ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ 49ನೇ ವರ್ಷದ ದಸರಾ ಮಹೋತ್ಸವದ ಶೋಭಾಯಾತ್ರೆಯಲ್ಲಿದ್ದ ಮೂರ್ತಿಗಳ ಶಾಂತಿಪೂಜೆ ಶ್ರದ್ಧಾಭಕ್ತಿಯಿಂದ ದೇವಾಲಯದ ಆವರಣದಲ್ಲಿ ನೆರವೇರಿತು. ಶಾಂತಿಪೂಜೆಯ ಜೊತೆಗೆ, ರಂಗಪೂಜೆ ಮತ್ತು ದೀಪಾರಾಧನೆಗಳು ನಡೆದವು.
ಸಮಿತಿಯ 150 ಮಂದಿಗೆ, ಸಹಕಾರ ನೀಡಿದ ದಾನಿಗಳಿಗೆ, ಪೂಜಾ ಲೈಟಿಂಗ್ ನಜೀರ್ ಮತ್ತು ತಂಡ, ಫೋಕಸಿಂಗ್ ವಿಭಾಗದ ಲೋಕೇಶ್, ಟ್ರಾಕ್ಟರ್ ಸೆಟ್ಟಿಂಗ್ನ ನವೀನ್ ಅವರಿಗೆ ಸನ್ಮಾನ ಮಾಡಲಾಯಿತು.
ಕೋಟೆ ಗಣಪತಿ ದಸರಾ ಮಂಟಪ ಸಮಿತಿ ಅಧ್ಯಕ್ಷ ವಿಘ್ನೇಶ್, ದಸರಾ ದಶಮಂಟಪ ಸಮಿತಿ ಅಧ್ಯಕ್ಷ ಹರೀಶ್, ನಗರಸಭೆ ಸದಸ್ಯೆ ಸವಿತಾ ರಾಕೇಶ್, ಹಿರಿಯರಾದ ರಘುನಾಥರಾವ್, ಉದ್ಯಮಿ ಶರಣ್ ಪೂಣಚ್ಚ, ವೇಣು ಹಾಗೂ ಸಮಿತಿ ಸದಸ್ಯರು ಭಾಗವಹಿಸಿದ್ದರು.
ಕಾರ್ತೀಕ ಹುಣ್ಣಿಮೆಯ ಪ್ರಯುಕ್ತ ಕೋದಂಡರಾಮ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಸಂಜೆಯ ನಂತರ ಮಹಿಳೆಯರು ದೇವರ ಭಜನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.