
ಸುಂಟಿಕೊಪ್ಪ: ಇಲ್ಲಿಗೆ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರೂರು ಗ್ರಾಮದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು, ಆತಂಕ ಮೂಡಿಸಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿ ಹೆಜ್ಜೆ ಗುರುತು ಪತ್ತೆಯಾಗಿರುವ ಸ್ಥಳ ಜಿಲ್ಲಾ ಕೇಂದ್ರ ಮಡಿಕೇರಿಗೆ ಕೇವಲ 12 ಕಿ.ಮೀ ದೂರದಲ್ಲಿದ್ದು, ಆತಂಕ ಮತ್ತಷ್ಟು ಹೆಚ್ಚಿದೆ.
ಸಮೀಪದ 7ನೇ ಹೊಸಕೋಟೆ, ಕೆದಕಲ್, ಹೊರೂರು, ಕೊಡಗರಹಳ್ಳಿ ಕಂಬಿಬಾಣೆ ಚಿಕ್ಲಿಹೊಳೆ ಭಾಗಗಳಲ್ಲಿ ತೋಟದ ಮಾಲೀಕರು, ಕಾರ್ಮಿಕರು ತೋಟಗಳಲ್ಲಿ ಕೆಲಸ ಮಾಡಲು ಭಯ ಪಡುವಂತಾಗಿದೆ.
ಈಗಾಗಲೇ ಈ ವ್ಯಾಪ್ತಿಯಲ್ಲಿ ದಿನನಿತ್ಯ ಆನೆಗಳ ಸಂಚಾರ ಮತ್ತು ಹಾವಳಿ ನಿರಂತರವಾಗಿದೆ. ಇದೀಗ ಹುಲಿ ಸಂಚಾರದ ಹೆಜ್ಜೆ ಗುರುತುಗಳೂ ಪತ್ತೆಯಾಗಿರುವುದು ಜನರಲ್ಲಿ ತಲ್ಲಣ ಸೃಷ್ಟಿಸಿದೆ. ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆಯು ಕೂಡಲೇ ಎಚ್ಚೆತುಕೊಳ್ಳಬೇಕಿದೆ.
ಕೊಡಗರಹಳ್ಳಿ ಕೆದಕಲ್, ಹೊರೂರು, ಮೋದೂರು, ಕಂಬಿಬಾಣೆ, ಚಿಕ್ಲಿಹೊಳೆ, 7ನೇ ಹೊಸಕೋಟೆ ಭಾಗಗಳಲ್ಲಿ ಶಾಲೆಗಳಿದ್ದು, ಮಕ್ಕಳು ವಿದ್ಯಾಭ್ಯಾಸಕ್ಕಾಗಿ ವಿವಿಧ ಭಾಗಗಳಿಂದ ಆಗಮಿಸಿ ಶಿಕ್ಷಣ ಪಡೆಯುತ್ತಿದ್ದಾರೆ. ಇದೀಗ ಶಾಲೆಗಳಿಗೆ ಕಳುಹಿಸಲು ಪೋಷಕರು ಆತಂಕಗೊಂಡಿದ್ದಾರೆ.
ಈ ಬಗ್ಗೆ ಸಂಸದರು, ಶಾಸಕರು, ಉಸ್ತುವಾರಿ ಸಚಿವರು, ಇಲಾಖೆಯ ನೋಡಲ್ ಅಧಿಕಾರಿ, ಉಸ್ತುವಾರಿ ಕಾರ್ಯದರ್ಶಿ ಈ ಸಮಸ್ಯೆ ಕುರಿತು ಅದ್ಯತೆ ಮೇರೆಗೆ ಪ್ರಮುಖವಾಗಿ ಗಂಭೀರವಾದ ಚರ್ಚೆಗಳು ನಡೆಸಬೇಕಾದ ತುರ್ತು ಅವಶ್ಯಕತೆ ಇದೆ ಎಂದು ಕೃಷಿಕರಾದ ಬಿ.ಸಿ.ದಿನೇಶ್, ತಿಮ್ಮಪ್ಪ, ದೇವಿಪ್ರಸಾದ್ ಇತರರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.