ಕುಶಾಲನಗರ: ಶುಂಠಿ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಲು ಲಘು ಪೋಷಕಾಂಶಗಳು ಸಹಕಾರಿ ಎಂದು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ವೀರೇಂದ್ರ ಕುಮಾರ್ ತಿಳಿಸಿದರು.
ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಹಾಗೂ ಪ್ರಗತಿಪರ ರೈತ ಒಕ್ಕೂಟದಿಂದ ತೊರೆನೂರು ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಶುಂಠಿ ಕೃಷಿ ಕ್ಷೇತ್ರೋತ್ಸವ ಹಾಗೂ ರೈತರಿಗೆ ಶುಂಠಿ ಬೆಳೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೈತರು ಕೃಷಿ ವಿಜ್ಞಾನ ಕೇಂದ್ರದಿಂದ ಕೈಗೊಳ್ಳುವ ಪ್ರಾತ್ಯಕ್ಷಿಕೆ, ತರಬೇತಿಗಳಲ್ಲಿ ಪಾಲ್ಗೊಂಡು ಕೃಷಿಯಲ್ಲಿ ನಾವಿನ್ಯತೆಯನ್ನು ಅಳವಡಿಸಿಕೊಂಡು ಹೆಚ್ಚು ಲಾಭಗಳಿಸಬೇಕು. ಯಾವುದೇ ಬೆಳೆಯಲ್ಲಿ ಸಮಸ್ಯೆ ಉದ್ಭವಿಸಿದರೂ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ ನೆರವು ಪಡೆಯಬಹುದು ಎಂದರು.
ಕುಶಾಲನಗರ ತಾಲ್ಲೂಕಿನಲ್ಲಿ ಕಳೆದ ನವೆಂಬರ್, ಡಿಸೆಂಬರ್ನಲ್ಲಿ ಶುಂಠಿ ಬೆಳೆಗೆ ಬೆಂಕಿರೋಗ ಕಾಣಿಸಿಕೊಂಡಿದ್ದು, ಈ ಅವಧಿಯಲ್ಲಿ ಹೆಚ್ಚಿನ ಇಬ್ಬನಿ ಹಾಗೂ ಸಾರಜನಕ ಗೊಬ್ಬರ ಬಳಕೆಯಿಂದ ಈ ರೋಗ ಕಾಣಿಸಿಕೊಂಡಿದೆ ಎಂದರು.
ಶುಂಠಿ ಬೆಳೆಯಲ್ಲಿ ಇಳುವರಿಯನ್ನು ಹೆಚ್ಚಿಸಲು ಜಿಂಜರ್ ವಿಶೇಷ ಲಘು ಪೋಷಕಾಂಶಗಳಿದ್ದು, ಅವುಗಳನ್ನು ಬಳಸುವುದರಿಂದ ಶುಂಠಿ ಬೆಳೆಯಲ್ಲಿನ ರೋಗ ನಿಯಂತ್ರಣದೊಂದಿಗೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿಜ್ಞಾನ ಕೇಂದ್ರದ ವಿಷಯ ತಜ್ಞ ಬಿ. ಪ್ರಭಾಕರ್ ಮಾತನಾಡಿ, ರೈತರು ಬೆಳೆಗಳಿಗೆ ಮುಖ್ಯ ಪೋಷಕಾಂಶಗಳನ್ನು ಮಾತ್ರ ನೀಡುತ್ತಿದ್ದು, ಲಘು ಪೋಷಕಾಂಶಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಕ್ಯಾಲಿಕಟ್ನಲ್ಲಿರುವ ಭಾರತೀಯ ಸಾಂಬಾರು ಸಂಶೋಧನಾ ಸಂಸ್ಥೆಯವರು ಜಿಂಜರ್ ಸ್ಪೆಷಲ್ ಲಘು ಪೋಷಕಾಂಶವನ್ನು ಪರಿಚಯಿಸಿದ್ದು, ರೈತರು ಶುಂಠಿ ನಾಟಿ ಮಾಡಿದ 45 ದಿನಗಳ ಅಂತರದಲ್ಲಿ ನಾಲ್ಕು ಹಂತಗಳಲ್ಲಿ ಆರು ತಿಂಗಳವರೆಗೆ ಪ್ರತಿ ಲೀಟರ್ ನೀರಿಗೆ 5 ಗ್ರಾಂ ನಂತೆ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು ಎಂದು ಸಲಹೆ ನೀಡಿದರು.
ಶುಂಠಿ ಬೆಳೆಯಲ್ಲಿ ಜಿಂಜರ್ ಸ್ಪೆಷಲ್ ಸಿಂಪಡಣೆ ಮಾಡುವುದರಿಂದ ಮರಿ ಕಂದುಗಳು ಜಾಸ್ತಿಯಾಗಿ, ಶುಂಠಿಯ ಗೆಡ್ಡೆಯ ಗಾತ್ರ ಹೆಚ್ಚಾಗುತ್ತದೆ. ಅಲ್ಲದೇ ಉತ್ತಮ ಗುಣಮಟ್ಟದ ಗೆಡ್ಡೆಗಳನ್ನು ಪಡೆಯಬಹುದಾಗಿದೆ ಎಂದರು.
ಈ ಸಂದರ್ಭ ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಬಿ.ಜಗದೀಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಕೆ.ವಸಂತ, ಶಿರಂಗಾಲ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬಸವರಾಜು, ತಾಲ್ಲೂಕು ತಾಳೆ ಬೆಳೆ ಕ್ಷೇತ್ರ ಸಹಾಯಕ ಎಂ.ಕೆ.ಶಶಿಧರ್, ಸೋಮವಾರಪೇಟೆ ರೈತ ಉತ್ಪಾದಕರ ಕಂಪನಿ ನಿರ್ದೇಶಕ ಎಚ್.ಪಿ.ಮಂಜುನಾಥ್, ಎಚ್.ಎಸ್.ಸುಂದರ,
ಪ್ರಗತಿಪರ ರೈತರಾದ ಚಂದ್ರಶೇಖರ್,ಟಿ.ಜೆ.ಶೇಷಪ್ಪ, ಮಹೇಶ್ ಮರೂರು, ಟಿ.ಸಿ.ರಘನಾಥ, ಶುಂಠಿ ವ್ಯಾಪಾರಿ ಮಲ್ಲಿಕಾರ್ಜುನ, ನಿವೃತ್ತ ಸೈನಿಕ ಎಂ.ಎಸ್.ಶ್ರೀಧರ್ ಮುಖಂಡರಾದ ಡಿ.ಆರ್.ಶ್ರೀನಿವಾಸ್ ಮಣಜೂರು ಪಾಲ್ಗೊಂಡಿದ್ದರು.
ನಂತರ ನಡೆದ ಸಂವಾದದಲ್ಲಿ ಶುಂಠಿ ಬೆಳೆಗೆ ಮಹಾಮಾರಿ, ಗೆಡ್ಡೆ ಕೊಳೆರೋಗ ಹಾಗೂ ಮಣ್ಣಿನ ಫಲವತ್ತತೆ, ರೋಗ ನಿಯಂತ್ರಣ, ಔಷಧಗಳ ಬಳಕೆ ಕುರಿತು ವಿಜ್ಞಾನಿಗಳು ರೈತರಿಗೆ ಜಾಗೃತಿ ಮೂಡಿಸಿದರು. ಇದೇ ಸಂದರ್ಭ ವಿಜ್ಞಾನಿಗಳು ಹಾಗೂ ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.