ADVERTISEMENT

ನೂರಾರು ಮಕ್ಕಳ ಊಟಕ್ಕೆ ಕತ್ತರಿ

ಮಡಿಕೇರಿ ತಾ.ಪಂ ಪ್ರಗತಿ ಪರಿಶೀಲನೆ ಸಭೆ: ಅಕ್ಷರ ದಾಸೋಹ ಅಧಿಕಾರಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 14:05 IST
Last Updated 10 ಫೆಬ್ರುವರಿ 2020, 14:05 IST
ಮಡಿಕೇರಿ ತಾ.ಪಂ ಕಚೇರಿಯಲ್ಲಿ ಸೋಮವಾರ ತಾ.ಪಂ ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್ ಅಧ್ಯಕ್ಷತೆಯಲ್ಲಿ ಮಾಸಿಕ ಪ್ರಗತಿ ಪರಿಶೀಲನೆ ಸಭೆ ನಡೆಯಿತು
ಮಡಿಕೇರಿ ತಾ.ಪಂ ಕಚೇರಿಯಲ್ಲಿ ಸೋಮವಾರ ತಾ.ಪಂ ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್ ಅಧ್ಯಕ್ಷತೆಯಲ್ಲಿ ಮಾಸಿಕ ಪ್ರಗತಿ ಪರಿಶೀಲನೆ ಸಭೆ ನಡೆಯಿತು   

ಮಡಿಕೇರಿ: ಅಕ್ಕಿ ಕಡಿತಗೊಳಿಸಿರುವ ವಿಚಾರವು ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆ ನಡೆದು, ಅಕ್ಷರ ದಾಸೋಹ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲಾಯಿತು.

ಹಿಂದಿನ ಅಧಿಕಾರಿ ಸಮರ್ಪಕವಾಗಿ ಕಡತ ವಿಲೇವಾರಿ ಮಾಡಿಲ್ಲ. ಹೀಗಾಗಿ 1,400 ಕ್ವಿಂಟಲ್ ಅಕ್ಕಿ ಪೂರೈಕೆ ಆಗಿಲ್ಲ ಎಂದು ಹಾಲಿ ಅಧಿಕಾರಿ ಮೋಹನ್ ಸಭೆಯಲ್ಲಿ ಪ್ರಸ್ತಾಪಿಸಿದರು.

ಈ ಯಡವಟ್ಟಿನಿಂದ ಜಿಲ್ಲೆಯ ಸಾವಿರ ಶಾಲೆಗೆ ಪೂರೈಕೆಯಾಗುತ್ತಿರುವ ಅಕ್ಕಿಗೆ ಕತ್ತರಿ ಬಿದ್ದಿದೆ. ಈ ಬಗ್ಗೆ ಸಭೆಯಲ್ಲಿ ಸದಸ್ಯರು ಗರಂಆದರು.

ADVERTISEMENT

ತಾ.ಪಂ ಇಒ ಲಕ್ಷ್ಮಿ ಮಾತನಾಡಿ, ಸಭೆಯಲ್ಲಿ ಮೇಲಾಧಿಕಾರಿಗಳನ್ನು ದೂರಬಾರದು. ನನ್ನ ಗಮನಕ್ಕೆ ವಿಷಯ ತರಬಹುದಿತ್ತು. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ. ನಿಮ್ಮ ಒಳಜಗಳ ಬದಿಗೊತ್ತಿ ಮಕ್ಕಳ ಹಿತದೃಷ್ಟಿಯಿಂದ ಚಿಂತನೆ ನಡೆಸಿ ಎಂದು ಖಡಕ್ ಆಗಿ ಸೂಚಿಸಿದರು.

ಅನುದಾನ ಸದ್ಬಳಕೆಮಾಡಿ

ಆರ್ಥಿಕ ವರ್ಷ ಮುಕ್ತಾಯಗೊಳ್ಳುವ ಮುನ್ನ ಇಲಾಖೆಗಳಿಗೆ ಸರ್ಕಾರದಿಂದ ದೊರೆತಿರುವ ಅನುದಾನ ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಾ.ಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಸೂಚಿಸಿದರು.

ತಾಲ್ಲೂಕಿನ 100 ಶಾಲೆಗಳ ಆವರಣದಲ್ಲಿ ಪೌಷ್ಟಿಕಾಂಶಯುಕ್ತತರಕಾರಿ, ಸೊಪ್ಪು ಬೆಳೆಯುವ ಗುರಿ ಇದ್ದು ಬೆಳೆಯಲು ಬೇಕಾದ ಬೀಜ, ಗಿಡಗಳನ್ನು ಇಲಾಖೆ ವಿತರಿಸಲಿದೆ. ಶಿಕ್ಷಣ ಇಲಾಖೆ ಸೂಕ್ತ ವ್ಯವಸ್ಥೆಗಳ ಶಾಲೆಗಳ ಪಟ್ಟಿ ನೀಡುವಂತೆ ಲಕ್ಷ್ಮೀ ಸೂಚಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿ ಮಾತನಾಡಿ, ಪ್ರಸಕ್ತ ಸಾಲಿನ ಎಸ್ಸೆಸ್ಸೆಯಲ್ಸಿ ಪರೀಕ್ಷೆ ಈಗಾಗಲೇ ವಿಶೇಷ ತರಗತಿ ನಡೆಸಲಾಗುತ್ತಿದ್ದು, ಕೊಡಗು ವಿಕಸನ ಸಂಸ್ಥೆ ಮೂಲಕ ಖ್ಯಾತ ವಾಗ್ಮಿ ಅರ್ಜುನ್ ದೇವಯ್ಯ ಅವರಿಂದ ಪರೀಕ್ಷೆ ಭಯ ಹೋಗಲಾಡಿಸುವ ಬಗ್ಗೆ ತರಬೇತಿ ನೀಡಲಾಗುತ್ತಿದೆ. ನೆರೆ ಪರಿಹಾರದಲ್ಲಿ ಬಿಡುಗಡೆಯಾದ ಅನುದಾನವನ್ನು 52 ಶಾಲೆಗಳಿಗೆ ತಲಾ ₹ 1.50 ಲಕ್ಷದಂತೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ನರೇಗಾ ಯೋಜನೆ ಮೂಲಕ ಅನುದಾನ ಬಿಡುಗಡೆಗೊಳ್ಳುವಸಾಧ್ಯತೆ ಇದ್ದು, ಶೌಚಾಲಯ ಸಮಸ್ಯೆ ಎದುರಿಸುತ್ತಿರುವ ಶಾಲೆಗಳ ಪಟ್ಟಿ ಮತ್ತು ಕ್ರಿಯಾಯೋಜನೆ ತಯಾರಿಸುವಂತೆ ಸೂಚಿಸಿದರು.

ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್, ಸಂಪೂರ್ಣ ಹಾಳಾಗಿರುವ ಶೌಚಾಲಯವನ್ನು ತೆರವು ಮಾಡಿ ನೂತನ ಶೌಚಾಲಯ ನಿರ್ಮಿಸಬೇಕು. ಬೇತು ಸರ್ಕಾರಿ ಶಾಲೆಯ ತರಗತಿ ಸಮಯದಲ್ಲಿ ಪಾತ್ರೆ ತೊಳೆಸುತ್ತಿದ್ದಾರೆ. ಈ ಬಗ್ಗೆಯೂ ಕ್ರಮ ವಹಿಸುವಂತೆ ಅವರು ಸೂಚಿಸಿದರು.

ಸಾಮಾಜಿಕ ನ್ಯಾಯಾ ಸ್ಥಾಯಿ ಸಮಿತಿ ಅಧ್ಯಕ್ಷ ಕೊಡಪಾಲ ಗಣಪತಿ ಮಾತನಾಡಿ, ಇಲಾಖೆಗಳಲ್ಲಿರುವ ಸಿಬ್ಬಂದಿ ಸಮಸ್ಯೆ ಹೋಗಲಾಡಿಸುವತ್ತ ಕ್ರಮ ಕೈಗೊಳ್ಳಬೇಕು. ಜನಪ್ರತಿನಿಧಿಗಳ ಮೂಲಕ ಸರ್ಕಾರದ ಗಮನ ಸೆಳೆಯಬೇಕು. ಈ ನಿಟ್ಟಿನಲ್ಲಿ ತಾ.ಪಂ ನಿರ್ಣಯ ಕೈಗೊಳ್ಳಬೇಕೆಂದುಕೋರಿದರು.

ತಾ.ಪಂ ಉಪಾಧ್ಯಕ್ಷ ಸಂತು ಸುಬ್ರಮಣಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.