ಸುಂಟಿಕೊಪ್ಪ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಶನಿವಾರವೂ ಭಾರಿ ಗಾಳಿ ಮಳೆ ಮುಂದುವರೆದಿದ್ದು, ಪರಿಣಾಮ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.
ಸಮೀಪದ ಬಾಳೆಕಾಡು- ಗದ್ದೆಹಳ್ಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರವೂ ಮತ್ತೆರಡು ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಕೂಡಲೇ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಅಶೋಕ್ ಹಾಗೂ ಸ್ಥಳೀಯರು ಮರಗಳನ್ನು ಕತ್ತರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮರಗಳು ಬಿದ್ದ ಪರಿಣಾಮ ಕಿ.ಮೀ.ಗಟ್ಟಲೇ ವಾಹನಗಳು ಸಾಲಾಗಿ ನಿಂತಿದ್ದವು.
ಸಮೀಪದ ಕೆದಕಲ್ ನ ಏಳನೇ ಮೈಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದ ಬೃಹದಾಕಾರದ ಮರವನ್ನು ನಿವಾಸಿಗಳು ತೆರವು ಮಾಡಿದರು. ಕುಂಬೂರುವಿನ ಪ್ರವೀಣ್ ಅವರ ಆಟೊ ರಿಕ್ಷಾದ ಮೇಲೆ ಮರ ಬಿದ್ದ ಪರಿಣಾಮ ಇಬ್ಬರಿಗೆ ಗಾಯವಾಗಿದೆ.
ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಪ್ರವೀಣ್ ಅವರನ್ನು ಮೈಸೂರು ಹಾಗೂ ಪ್ರಯಾಣಿಕರಾದ ಧನ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಆಟೊ ರಿಕ್ಷಾ ಜಖಂಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.