ವಿರಾಜಪೇಟೆ: ಪರಿಸರ ದಿನಾಚರಣೆ ಹಾಗೂ ಇನ್ನಿತರ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ಕಾಳಜಿವಹಿಸಿದಾಗ ಮಾತ್ರ ನೆಟ್ಟ ಗಿಡ ಬೆಳೆದು ಮರವಾಗಲು ಸಾಧ್ಯ ಎಂದು ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರರಾದ ಶ್ರೀಧರ್ ನೆಲ್ಲಿತ್ತಾಯ ಹೇಳಿದರು.
ವಿರಾಜಪೇಟೆಯ ಶನೀಶ್ವರ ಭಕ್ತ ಜನ ಮಂಡಳಿಯ ಸಂಸ್ಥಾಪಕ ದಿವಂಗತ ವಿ.ಜಿ ಕೃಷ್ಣಸ್ವಾಮಿ ಅವರ 23 ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಮಂಡಳಿ ವ ಗೋಣಿಕೊಪ್ಪಲಿನ ಮಾದರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ಗಿಡ ನಾಟಿ, ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗಿಡ ನೆಡುವಾಗ ಇರುವಲ್ಲಿನ ಶ್ರದ್ಧೆ ಆ ಗಿಡ ಹಾಳಾಗದಂತೆ ಬೆಳೆದು ಕಾಪಾಡಿಕೊಳ್ಳುವಲ್ಲಿಯೂ ಇರಬೇಕು ಎಂದರು.
ಶಾಲೆಯ ಮುಖ್ಯಶಿಕ್ಷಕ ಕುಮಾರ್ ಎಚ್.ಕೆ ಅವರು ಮಾತನಾಡಿ ಮಕ್ಕಳು ಪರಿಸರದ ಬಗ್ಗೆ ಸದಾ ತೀವ್ರವಾದ ಕಾಳಜಿ ಬೆಳೆಸಿಕೊಳ್ಳಬೇಕು. ಕೊಡಗು ಜಿಲ್ಲೆಯ ಪರಿಸರ, ಇಲ್ಲಿನ ಗಾಳಿ ಎಲ್ಲವೂ ಶುದ್ಧವಾಗಿದ್ದು, ಇದನ್ನು ಉಳಿಸಿ ಬೆಳೆಸುವ ಕಡೆಗೆ ವಿದ್ಯಾರ್ಥಿಗಳು ಗಮನಕೊಡಬೇಕು ಎಂದರು.
ಶನೀಶ್ವರ ಭಕ್ತ ಜನ ಮಂಡಳಿಯ ಅಧ್ಯಕ್ಷ ಯುವರಾಜ ಕೃಷ್ಣ ಹಾಗೂ ಹಿರಿಯ ಪತ್ರಕರ್ತ ಟಿ.ಎಲ್.ಶ್ರೀನಿವಾಸ್ ಹಾಗೂ ಅವರು ಈ ಸಂದರ್ಭ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಗೋಣಿಕೊಪ್ಪಲಿನ ಉದ್ಯಮಿ ಜೋಸೆಫ್ ಅಂಥೋನಿ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷೆ ಶಾಂತಿ ಕೆ.ಆರ್, ವಿರಾಜಪೇಟೆ ಬಾಲಾಂಜನೇಯ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಬಾಬಾಶಂಕರ್ ಉಪಸ್ಥಿತರಿದ್ದರು.
ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಚಿತ್ರ ಕಲಾವಿದ ಸತೀಶ್ ಕಾರ್ಯನಿರ್ವಹಿಸಿದರು. ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಶನೀಶ್ವರ ಭಕ್ತ ಜನ ಮಂಡಳಿ ವತಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.