ವಿರಾಜಪೇಟೆ: ಶ್ರೀಕೃಷ್ಣ ಜನ್ಮಾಷ್ಟಮಿಯು ದೇಶದ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಮಹತ್ವ ಪಡೆದುಕೊಂಡಿದೆ ಎಂದು ಶಿಕ್ಷಕ ವಿ.ಟಿ. ವೆಂಕಟೇಶ್ ಅಭಿಪ್ರಾಯಪಟ್ಟರು.
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪಟ್ಟಣದ ಅಪ್ಪಯ್ಯ ಸ್ವಾಮಿ ರಸ್ತೆಯ ಬಾಲಾಂಜನೇಯ ದೇವಾಸ್ಥಾನದ ಸಭಾಂಗಣದಲ್ಲಿ ನಾಟ್ಯ ಮಯೂರಿ ನೃತ್ಯ ಶಾಲೆಯವತಿಯಿಂದ ಈಚೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕದಳಿ ವೇದಿಕೆಯ ತಾಲ್ಲೂಕು ಅಧ್ಯಕ್ಷೆ ರಜಿತಾ ಕಾರ್ಯಪ್ಪ ಮಾತನಾಡಿ, ‘ವಿದ್ಯಾರ್ಥಿಗಳು ರಾಮಾಯಣ, ಮಹಾಭಾರತದಂತಹ ಕಾವ್ಯಗಳನ್ನು ಹೆಚ್ಚಾಗಿ ಓದಿ ಅದರಲ್ಲಿರುವ ಸಾರವನ್ನು ತಿಳಿದು ಜ್ಞಾನ ಹೆಚ್ಚಿಸಿಕೊಳ್ಳಬೇಕು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವ ವಿಚಾರಗಳು ಹಾಗೂ ಕೃಷ್ಣನ ಬದುಕಿನ ಕಥೆಗಳು ನಮ್ಮ ಜೀವನಕ್ಕೂ ಪ್ರೇರಣೆಯಾಗಲಿವೆ. ಪೋಷಕರು ತಮ್ಮ ಮಕ್ಕಳಿಗೆ ವಿದ್ಯೆಯೊಂದಿಗೆ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಿಕೊಡಬೇಕು. ಜೊತೆಗೆ ನಾಯಕತ್ವದ ಗುಣಗಳನ್ನು ಗಳಿಸಲು ಸ್ಪರ್ಧೆಗಳು ಬಹು ಸಹಕಾರಿಯಾಗಿವೆ’ ಎಂದರು.
ದಕ್ಷಿಣ ಕೊಡಗು ಲೇಖಕಿಯರ ಮತ್ತು ಕಲಾವಿದರ ಬಳಗದ ಅಧ್ಯಕ್ಷೆ ಪುಷ್ಪಲತಾ ಶಿವಪ್ಪ ಮಾತನಾಡಿದರು.
ಬಾಲಾಂಜನೇಯ ದೇವಸ್ಥಾನದ ಧರ್ಮದರ್ಶಿ ಬಾಬಾ ಶಂಕರ್ ಅವರು ಮಾತನಾಡಿ, ‘ಪ್ರತಿಯೊಬ್ಬರೂ ನಮ್ಮ ಆಚಾರ ವಿಚಾರ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಮೊಬೈಲ್ನಿಂದ ದೂರ ಉಳಿಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಟ್ಯ ಮಯೂರಿ ನೃತ್ಯ ಶಾಲೆಯ ಶಿಕ್ಷಕಿ ವಿದುಷಿ ಪ್ರೇಮಾಂಜಲಿ ಆಚಾರ್ಯ ಮಾತನಾಡಿ, ‘ಜಾತಿ, ಮತ, ಭೇದವಿಲ್ಲದೆ ಜಗತ್ತಿನಾದ್ಯಂತ ಕೃಷ್ಣನನ್ನು ಇಂದು ಆರಾಧಿಸಲಾಗುತ್ತಿದೆ’ ಎಂದರು.
ಸ್ಪರ್ಧೆಯಲ್ಲಿ ವಿಜೇತರಾದ ಹಾಗೂ ಭಾಗವಹಿಸಿದ ಎಲ್ಲ ಮಕ್ಕಳಿಗೂ ಬಹುಮಾನ ವಿತರಿಸಿಸಲಾಯಿತು. ವೇದಿಕೆಯಲ್ಲಿ ಸಾಹಿತಿ ಸೋಮೆಯಂಡ ಕೌಶಲ್ಯ, ಟ್ರಸ್ಟಿಗಳಾದ ದೀಪಕ್ ಹಾಗೂ ಕೌಶಲ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.