ಕಾಡಾನೆಯೊಂದು ಹಲಸಿನ ಹಣ್ಣನ್ನು ತಿನ್ನುತ್ತಿರುವುದು
ಮಡಿಕೇರಿ: ಕೊಡಗು ಜಿಲ್ಲೆಯ ಬಹುತೇಕ ತೋಟಗಳಲ್ಲಿ ಈಗ ಹಲಸಿನ ಘಮಲು ಹೊರಸೂಸುತ್ತಿದೆ. ಇದರ ಸುವಾಸನೆಗೆ ಮಾರು ಹೋಗಿರುವ ಕಾಡಾನೆಗಳು ಹೆಚ್ಚಿನ ಸಂಖ್ಯೆಯಲ್ಲಿ ತೋಟಗಳತ್ತ ಬರುತ್ತಿವೆ.
ಹಲಸಿನ ಹಣ್ಣಿನ ಘಮಲಿನ ಗುಂಗನ್ನೇ ಹಿಡಿಯುವ ಕಾಡಾನೆಗಳು ಹಲಸನ್ನು ಅರಸಿ ನಾಡಿನತ್ತ ಹೆಜ್ಜೆ ಹಾಕುತ್ತಿವೆ. ಇವುಗಳ ಪ್ರತಿ ಹೆಜ್ಜೆಗೂ ತೋಟದಲ್ಲಿರುವ ಫಲಸು ನಾಶವಾಗುವ ಆತಂಕ ರೈತರದ್ದಾಗಿದೆ.
ಈ ಬಾರಿ ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಲಸಿನ ಹಣ್ಣುಗಳು ಮರಗಳಲ್ಲಿ ಬಂದಿವೆ. ಇತ್ತೀಚಿನ ದಿನಗಳಲ್ಲಿ ಸುರಿದ ಮಳೆಯಿಂದ ಹಾಗೂ ಇತರೆ ಕಾರಣಗಳಿಂದ ಹಲಸಿನ ಹಣ್ಣುಗಳು ಮರಗಳಲ್ಲಿ ಹಿಗ್ಗುತ್ತಲೇ ಇವೆ. ಇದು ಆನೆಗಳನ್ನು ಸೆಳೆಯಲು ಬಹು ಮುಖ್ಯವಾದ ಕಾರಣ ಎನಿಸಿವೆ.
ಕೆಲವು ತೋಟಗಳಲ್ಲಿ ಬೆಳೆಗಾರರು ಹಲಸಿನ ಕಾಯಿಗಳನ್ನೇ ಕಿತ್ತೆಸೆತ್ತಿದ್ದಾರೆ. ಈ ಮೂಲಕ ಕಾಡಾನೆಗಳ ತಮ್ಮ ತೋಟಗಳತ್ತ ಬಾರದಿರಲಿ ಎಂಬುದು ಅವರು ಆಶಯ. ಆದರೆ, ಅಕ್ಕಪಕ್ಕ ಅಥವಾ ಮುಂದಿನ ತೋಟಗಳಲ್ಲಿರುವ ಹಸಲಿನ ಘಮಲು ಕಾಡಾನೆಗಳನ್ನು ಸೆಳೆಯುತ್ತಿವೆ. ಇದರಿಂದ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ ಎಂದು ಅರಣ್ಯ ಅಧಿಕಾರಿಗಳೇ ಹೇಳುತ್ತಾರೆ.
ಕಾಡಿನೊಳಗೆ ತೇಗ ಮತ್ತಿತ್ತರೇ ಹಣ್ಣು ಬಿಡದ ಮರಗಳನ್ನು ಹಾಕುವುದಕ್ಕಿಂತ ಹಲಸಿನ ಮರಗಳನ್ನು ಹಾಕಿದರೆ ಕಾಡಾನೆಗಳು ತೋಟಗಳತ್ತ ಬರುವುದು ನಿಲ್ಲುತ್ತದೆ. ಇಲ್ಲವೇ ಕಡಿಮೆಯಾಗುತ್ತದೆ ಎಂಬುದು ರೈತರ ಅಭಿಪ್ರಾಯ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾಡಾನೆಗಳ ನಿಯಂತ್ರಿಸಲು ರೈತರು, ಬೆಳೆಗಾರರು, ಕಾರ್ಮಿಕರು ಪ್ರಯತ್ನ ಪಡದೇ ನೇರವಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡುತ್ತಾರೆ.
ಕಳೆದರಡು ವರ್ಷಗಳ ಹಿಂದೆ ಶನಿವಾರಸಂತೆ ಭಾಗದಲ್ಲಿ ಕೆಲವು ರೈತರು ಕಾಡಾನೆಗಳ ಕಾಟಕ್ಕೆ ರೋಸಿ ಹೋಗಿ ಕಾಫಿ ತೋಟಗಳಲ್ಲಿರುವ ಹಲಸಿನ ಮರಗಳಲ್ಲಿದ್ದ ಹಲಸಿನ ಹಣ್ಣುಗಳನ್ನು ದಾವಣಗೆರೆ, ಶಿವಮೊಗ್ಗ, ಬೆಂಗಳೂರು ಹಾಗೂ ತಮಿಳುನಾಡಿನ ಮಾರಾಟಗಾರರಿಗೆ ಉಚಿತವಾಗಿಯೂ ಕೊಟ್ಟಿದ್ದರು. ಮತ್ತೆ ಕೆಲವರು ನಾಶಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.