ADVERTISEMENT

ಶನಿವಾರಸಂತೆ: ಪಟ್ಟಣದತ್ತ ಮುಖ ಮಾಡಿದ ಕಾಡಾನೆಗಳು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2022, 5:16 IST
Last Updated 28 ಡಿಸೆಂಬರ್ 2022, 5:16 IST
ಶನಿವಾರಸಂತೆಯ ಕಾವೇರಿ ರಸ್ತೆಯಲ್ಲಿ ಬೆಳೆಗಾರರಾದ ರೇಣುಕಾಚಂದ್ರಶೇಖರ್ ಅವರ ಮನೆಯ ಹಿತ್ತಲಿನಲ್ಲಿದ್ದ ಬಾಳೆ ಗಿಡಗಳನ್ನು ಕಾಡಾನೆಗಳು ನಾಶಪಡಿಸಿವೆ
ಶನಿವಾರಸಂತೆಯ ಕಾವೇರಿ ರಸ್ತೆಯಲ್ಲಿ ಬೆಳೆಗಾರರಾದ ರೇಣುಕಾಚಂದ್ರಶೇಖರ್ ಅವರ ಮನೆಯ ಹಿತ್ತಲಿನಲ್ಲಿದ್ದ ಬಾಳೆ ಗಿಡಗಳನ್ನು ಕಾಡಾನೆಗಳು ನಾಶಪಡಿಸಿವೆ   

ಶನಿವಾರಸಂತೆ: ಹೋಬಳಿಯಾದ್ಯಂತ ಹಳ್ಳಿಗಳಲ್ಲಿ ರೈತರ ಗದ್ದೆ- ತೋಟಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿದ್ದ ಕಾಡಾನೆಗಳ ಹಿಂಡು ಇದೀಗ ಪಟ್ಟಣದತ್ತ ಮೊಗ ಮಾಡಿವೆ. ರಾತ್ರಿ, ಮುಂಜಾನೆ ದಾಳಿಯಿಟ್ಟು ಮನೆಯಂಗಳ ಹಾಗೂ ಹಿತ್ತಲಿನಲ್ಲಿರುವ ಬೆಳೆಗಳನ್ನು ಎಳೆದು ಹಾಕಿ ತಿಂದು, ತುಳಿದು ಹಾನಿಪಡಿಸುತ್ತಿದ್ದು ಜನತೆ ಭಯಭೀತರಾಗಿದ್ದಾರೆ.

ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಗ್ರಾಮದ ಪ್ರಗತಿಪರ ರೈತ ಚಂದ್ರಶೇಖರ್ ಅವರ 3 ಎಕರೆ ಗದ್ದೆಗೆ ಸೋಮವಾರ ಬೆಳಗಿನ ಜಾವ ಲಗ್ಗೆ ಹಾಕಿದ 3 ಕಾಡಾನೆಗಳು ಕೊಯ್ಲು ಮಾಡಿ ಒಂದೆಡೆ ರಾಶಿ ಮಾಡಿದ್ದ ಭತ್ತದ ತೆನೆಗಳನ್ನು ಚೆಲ್ಲಾಪಿಲ್ಲಿ ಮಾಡಿ, ತಿಂದು ತುಳಿದು ಹಾಕಿ ನಾಶಪಡಿಸಿವೆ.

‘ಅಂದಾಜು 15 ಕ್ವಿಂಟಲ್ ಭತ್ತ ನಾಶವಾಗಿದೆ’ ಎಂದು ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.

ADVERTISEMENT

ಪಂಚಾಯಿತಿ ವ್ಯಾಪ್ತಿಯ ಬಿಳಾಹದಲ್ಲಿ 3 ಕಾಡಾನೆಗಳು ಹಾಗೂ ಅಪ್ಪಶೆಟ್ಟಳ್ಳಿಯಲ್ಲಿ 9 ಕಾಡಾನೆಗಳು ಸಂಚರಿಸುತ್ತಿವೆ ಎಂದು ರೈತರು ತಿಳಿಸಿದ್ದಾರೆ.

ಈಚೆಗೆ ಪಟ್ಟಣದ ಕಾವೇರಿ ರಸ್ತೆಯಲ್ಲಿ ರಾತ್ತಿ ವೇಳೆ ಸಂಚರಿಸಿದ 3 ಕಾಡಾನೆಗಳು ರೇಣುಕಾ ಚಂದ್ರಶೇಖರ್ ಅವರ ಮನೆಯ ಹಿತ್ತಲಿನಲ್ಲಿ ಬಾಳೆ ಗಿಡವನ್ನು ಎಳೆದು ಹಾಕಿ ನಾಶಪಡಿಸಿವೆ. ನಿತ್ಯ ಬೆಳಿಗ್ಗೆ ಇದೇ ರಸ್ತೆಯಲ್ಲಿ ವಾಯುವಿಹಾರ, ಜಾಗಿಂಗ್ ಮಾಡುತ್ತಿದ್ದವರು ಆನೆಗಳ ಭಯದಿಂದ ವಾಯು ವಿಹಾರವನ್ನೂ ನಿಲ್ಲಿಸಿದ್ದಾರೆ.

ಅಕಾಲಿಕ ಮಳೆಯಿಂದ ಬೆಳೆ ಹಾನಿಯಿಂದ ತತ್ತರಿಸಿರುವ ರೈತರು, ಬೆಳೆಗಾರರು ಮತ್ತೆ ಆರಂಭವಾಗಿರುವ ಕಾಡಾನೆಗಳ ದಾಂದಲೆಗೆ ಕಂಗಾಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.