ಕಾಡಾನೆಗಳಿಂದ ಬೆಳೆ ನಾಶ ಹುಲಿ, ಚಿರತೆ ಹಾವಳಿಗೆ ಜಾನುವಾರು ಬಲಿ | ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲ: ರೈತರ ಆಕ್ರೋಶ
ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕಿನ ಬಿ.ಶೆಟ್ಟಿಗೇರಿ, ಬೇಗೂರು, ಈಚೂರು, ಕುಂದ, ಹಳ್ಳಿಗಟ್ಟು ಭಾಗದಲ್ಲಿ ಕಾಡಾನೆಗಳ ಹಾವಳಿ ಅತಿಯಾಗಿದೆ ಎಂದು ಆರೋಪಿಸಿ ಕೃಷಿಕರು ಹಾಗೂ ಕಾಫಿಬೆಳೆಗಾರರು ಸೋಮವಾರ ಪೊನ್ನಂಪೇಟೆ ವಲಯ ಅರಣ್ಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕುಂದ, ಬೇಗೂರಿನ ಬರಪೊಳೆ ಭಾಗದಿಂದ ಬರುವ ಕಾಡಾನೆಗಳು ಬೆಳೆಯನ್ನೆಲ್ಲ ತಿಂದು ನಾಶಪಡಿಸುತ್ತಿವೆ. ಅಲ್ಲದೆ ಹುಲಿ, ಚಿರತೆಗಳ ಹಾವಳಿಯಿಂದಲೂ ಜಾನುವಾರುಗಳು ಬಲಿಯಾಗುತ್ತಿವೆ. ಇವುಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾಫಿ ಬೆಳೆಗಾರ ಮಾಚಿಮಾಡ ರವೀಂದ್ರ ಮಾತನಾಡಿ, ‘ಅರಣ್ಯದಿಂದ ಬರುವ ಆನೆಗಳನ್ನು ನಿಯಂತ್ರಿಸಬೇಕು. ಅರಣ್ಯದಂಚಿನಲ್ಲಿ ರೈಲ್ವೆ ಹಳಿಯ ಬ್ಯಾರಿಕೇಡ್ ನಿರ್ಮಿಸಲು ಭೂಮಿ ಪೂಜೆ ಮಾಡಿ 6 ತಿಂಗಳು ಕಳೆದಿದ್ದರೂ ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ. ಕಾಡಾನೆಗಳು ನಾಡಿಗೆ ಬರುವುದನ್ನು ತಪ್ಪಿಸಲು ಅರಣ್ಯ ಇಲಾಖೆ ವಿಫಲವಾಗಿದೆ’ ಎಂದು ಆರೋಪಿಸಿದರು.
ಹುಲಿ ದಾಳಿಗೆ ಬಲಿಯಾಗುತ್ತಿರುವ ಜಾನುವಾರುಗಳಿಗೆ ಪರಿಹಾರ ನೀಡುವುದರ ಬದಲು ಜಾನುವಾರುಗಳನ್ನೇ ನೀಡುವಂತಾಗಬೇಕು ಎಂದು ಒತ್ತಾಯಿಸಿದರು.
ಚೆಪ್ಪುಡೀರ ರಾಕೇಶ್ ದೇವಯ್ಯ, ಚೋಡುಮಾಡ ಶಾಮ್ ವಿಕ್ರಂ, ಸುಬ್ರಮಣಿ, ಮತ್ರಂಡ ಪ್ರವೀಣ್, ಕಾರ್ಯಪ್ಪ, ಸ್ಕಂದ, ರಶಿಕ, ವಿಠಲ, ಅಯ್ಯಪ್ಪ, ನಾಮೇರ ವಾಸು, ಅಚ್ಚಯ್ಯ ಮೊದಲಾದವರು ಪಾಲ್ಗೊಂಡಿದ್ದರು.
ಕುಂದ ಹಳ್ಳಿಗಟ್ಟು ಬಿ.ಶೆಟ್ಟಿಗೇರಿ ಬೇಗೂರು ಭಾಗದಲ್ಲಿ ಹೆಚ್ಚಿರುವ ವನ್ಯಜೀವಿಗಳ ಹಾವಳಿಯನ್ನು ತಡೆಗಟ್ಟದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದುಮಾಚಿಮಾಡ ರವೀಂದ್ರ ಕಾಫಿ ಬೆಳೆಗಾರ
8 ಕಿ.ಮೀ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಟೆಂಡರ್
ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ಎಸಿಎಫ್ ಗೋಪಾಲ್ ಬೇಗೂರು ‘ಚೀನಿವಾಡ ಪ್ರದೇಶಗಳು ಮಡಿಕೇರಿ ವನ್ಯಜೀವಿ ವಿಭಾಗಕ್ಕೆ ಒಳಪಡುತ್ತವೆ. ಈ ಭಾಗದಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಬಗ್ಗೆ ಕ್ರಮಕೈಗೊಳ್ಳಲಾಗಿದೆ. ಬ್ಯಾರಿಕೇಡ್ ಅಳವಡಿಸುವ ಅಧಿಕಾರ ವನ್ಯಜೀವಿ ವಿಭಾಗಕ್ಕೆ ಸೇರಿದೆ. ಇದರ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು. ಸರ್ಕಾರ ಬಿಡುಗಡೆ ಮಾಡಿರುವ ₹21 ಕೋಟಿ ಅನುದಾನದಲ್ಲಿ ಮಾಲ್ದಾರೆ ವ್ಯಾಪ್ತಿಯ ಕಾವೇರಿ ನದಿ ತೀರದಿಂದ ಘಟ್ಟದಳ್ಳದವರೆಗೆ 8 ಕಿಲೋ ದೂರ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಟೆಂಡರ್ ಕರೆಯಲಾಗಿದೆ. ಬಿ.ಶೆಟ್ಟಿಗೇರಿ ಭಾಗದಲ್ಲಿ ಸೋಲಾರ್ ತಂತಿ ಅಳವಡಿಸುವ ಚಿಂತನೆ ಇದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.