ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ನಡುವೆಯೂ ಇಲ್ಲಿನ ಮಹಿಳೆಯರು ಮಳೆಗಾಲದ ಖಾದ್ಯಗಳನ್ನು ತಯಾರಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಸಂಭ್ರಮಿಸಿದರು.
ಗೌಡ ಮಹಿಳಾ ಒಕ್ಕೂಟದ ಕಾರ್ಯಕರ್ತೆಯರು ಇಲ್ಲಿನ ಕೆಳಗಿನ ಗೌಡ ಸಮಾಜದಲ್ಲಿ ಮಂಗಳವಾರ ಆಯೋಜಿಸಿದ್ದ ‘ಆಟಿಹಬ್ಬ’ವು ಗಮನ ಸೆಳೆಯಿತು. ಮಹಿಳೆಯರು ನೂರಾರು ತಿನಿಸುಗಳನ್ನು ಸ್ವಯಂ ತಯಾರಿಸಿ, ಪ್ರದರ್ಶನಕ್ಕೆ ಇಟ್ಟಿದ್ದರು. ಜತೆಗೆ, ಅವುಗಳನ್ನು ತಾವೆ ಹಂಚಿಕೊಂಡು ಸೇವಿಸುವ ಮೂಲಕ ಸಹಭೋಜನ ಮಾಡುವ ಮೂಲಕ ಸೌಹಾರ್ದತೆ ಮೆರೆದರು.
ಇದರೊಂದಿಗೆ ಬಗೆಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಮಹಿಳೆಯರು ತಮ್ಮ ನಿತ್ಯದ ಜಂಜಾಟವನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಮರೆತರು. ಹಾಡು, ಗಾಯನ ಸೇರಿದಂತೆ ಅನೇಕ ಬಗೆಯ ಕಾರ್ಯಕ್ರಮಗಳು ಆಟಿಹಬ್ಬಕ್ಕೆ ಮೆರುಗು ತಂದವು.
ಕಾಡು ಕಲ್ಲೋಟೆ ಕಾಯಿ, ಕಾಡು ಮಾವಿನಹಣ್ಣಿನ ಸಾಂಬರ್, ರವೆಯ ಕಾಡುಕೆಸದ ಪತ್ರೊಡೆ, ಚಗತೆ ಸೊಪ್ಪಿನ ಪಲ್ಯ, ಆಟಿ ಸೊಪ್ಪಿನ ಹಲ್ವ, ಕೈಹುಳಿ ಚಟ್ನಿ, ಗಿಣಿಕೆ ಸೊಪ್ಪಿನ ಪಲ್ಯ, ಬಾಳೆ ದಿಂಡಿನ ಪಲ್ಯ, ಕಣಿಲೆ ಉಪ್ಪಿನಕಾಯಿ, ಓಡುರೊಟ್ಟಿ, ಕಣಿಲೆ ಪಲ್ಯ, ಕಣಿಲೆ ಸಾರು, ಹಲಸಿನ ಹಣ್ಣಿನ ಕೂಗಲೆ ಹಿಟ್ಟು, ಹಲಸಿನಕಾಯಿ ಚಿಪ್ಸ್, ಹಲಸಿನ ಹಣ್ಣಿನ ಕಜ್ಜಾಯ, ಕರಿಕೆಸದ ಎಲೆಯ ಪತ್ರೊಡೆ, ಪತ್ರ ವಡೆ, ಆಟಿ ಸೊಪ್ಪಿನ ಕಾಫಿ, ಮೈದಾ ಕಜ್ಜಾಯ, ಬಾಳೆಹಣ್ಣಿನ ಕೂಗಲಿಟ್ಟು, ಕಡುಬು, ಕಾಡು ಮಾವಿನ ಹಣ್ಣಿನ ಸಾರು, ಆಟಿಸೊಪ್ಪಿನ ಪಲ್ಯ ಹೀಗೆ ಇನ್ನೂ ಹಲವು ಹತ್ತು ಬಗೆಯ ರಸಗವಳಗಳು ಅಲ್ಲಿದ್ದವು.
ಕುಂಜಿಲನ ಮುತ್ತಮ್ಮ ಅಧ್ಯಕ್ಷತೆ ವಹಿಸಿದ್ದರು. ಸದಸ್ಯೆ ಪ್ರೇಮಾ ರಾಘವಯ್ಯ ಪ್ರಾರ್ಥನೆ ಮಾಡಿದರು. ಮುಖಂಡರಾದ ಬೈತಡ್ಕ ಜಾನಕಿ ಬೆಳ್ಳಿಯಪ್ಪ, ದಮಯಂತಿ, ಇಂದಿರಾ, ಸೇರಿದಂತೆ 100ಕ್ಕೂ ಅಧಿಕ ಮಂದಿ ಮಹಿಳೆಯರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.