ADVERTISEMENT

ಆಂಧ್ರದಿಂದ ದೇವಾಲಯ ಧ್ವಂಸ

ಬಂಗಾರಪೇಟೆ: ಮಲ್ಲಪ್ಪನ ಬೆಟ್ಟದ ಮಲ್ಲೇಶ್ವರಸ್ವಾಮಿ ದೇವಾಲಯದ ವಿವಾದ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 13:00 IST
Last Updated 15 ಜೂನ್ 2018, 13:00 IST

ಬಂಗಾರಪೇಟೆ: ರಾಜ್ಯಗಳ ಗಡಿಯಲ್ಲಿರುವ ಮಲ್ಲಪ್ಪನ ಬೆಟ್ಟದ ಮಲ್ಲೇಶ್ವರಸ್ವಾಮಿ ದೇವಾಲಯದ ಕಟ್ಟಡವನ್ನು ಆಂಧ್ರಪ್ರದೇಶದ ಅಧಿಕಾರಿಗಳು ಇತ್ತೀಚೆಗೆ ನೆಲಸಮ ಮಾಡಿದ್ದಾರೆ. ಗುರುವಾರ ತಹಶೀಲ್ದಾರ್ ಚಂದ್ರಮೌಳೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ದೇವಾಲಯ ಮತ್ತು ಬೆಟ್ಟದ ಪ್ರದೇಶ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ವ್ಯಾಪ್ತಿಗೆ ಬರುತ್ತದೆ. ತಮಿಳುನಾಡು ತಟಸ್ಥವಾಗಿದೆ.

ಗರ್ಭಗುಡಿ ಕರ್ನಾಟಕ್ಕೆ ಸೇರುತ್ತದೆ. ಮಂಟಪ, ದೇವಾಲಯದ ಪಡಸಾಲೆ ಆಂಧ್ರಪ್ರದೇಶಕ್ಕೆ ಸೇರಿದೆ. ಹಲವು ದಶಕಗಳಿಂದಲೂ ದೇವಾಲಯ ಒಡೆತನದ ವಿವಾದ ಎರಡೂ ರಾಜ್ಯಗಳ ಅಧಿಕಾರಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಈ ಹಿಂದೆ ದೇವಾಲಯಕ್ಕೆ ಭೇಟಿ ನೀಡಿದ್ದ ತಾಲ್ಲೂಕಿನ ಅಧಿಕಾರಿಗಳ ವಿರುದ್ಧ ಆಂಧ್ರಪ್ರದೇಶ ಸರ್ಕಾರ ಪ್ರಕರಣ ಸಹ ದಾಖಲಿಸಿತ್ತು.

ADVERTISEMENT

ದೇವಾಲಯವಯ ತನ್ನ ಸುಪರ್ದಿಗೆ ಬರುತ್ತದೆ ಎಂದು ಆಂಧ್ರಪ್ರದೇಶದ ಕುಪ್ಪಂ ಕಂದಾಯ ಇಲಾಖೆ ವಾದಿಸುತ್ತಿದೆ. ಕುಪ್ಪಂ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಪ್ರತಿನಿಧಿಸುವ ಕ್ಷೇತ್ರ. ಮಲ್ಲೇಶ್ವರ ಸ್ವಾಮಿ ದೇಗುಲ ರಾಜ್ಯಕ್ಕೆ ಸೇರಿರುವ ಬಗ್ಗೆ ಭಾರತದ ನಕ್ಷೆಯಲ್ಲಿ ಸ್ಪಷ್ಟವಾಗಿ ನಮೂದಾಗಿದೆ. ರಾಜ್ಯದಿಂದಲೇ ದೇಗುಲಕ್ಕೆ ವಿದ್ಯುತ್‌ ಸಂಪರ್ಕ ಒದಗಿಸಲಾಗಿದೆ. ಪೂಜಾರಿಗೆ ಮುಜರಾಯಿ ಇಲಾಖೆ ವೇತನ ಸಹ ನೀಡುತ್ತಿದೆ.

ಎರಡೂ ಸರ್ಕಾರಗಳು ಜಂಟಿಯಾಗಿ ಸರ್ವೆ ನಡೆಸಿ ಸಮಸ್ಯೆ ಬಗೆಹರಿಸಬಹುದು ಎಂದು ಕರ್ನಾಟಕದ ಅಧಿಕಾರಿಗಳು ಹಲವಾರು ಬಾರಿ ಹೇಳಿದ್ದರು. ಸರ್ವೆ ಅಧಿಕಾರಿಗಳು ಸ್ಥಳಕ್ಕೆ ಹೋದಾಗ ಆಂಧ್ರಪ್ರದೇಶದ ಅಧಿಕಾರಿಗಳು ಅಸಹಕಾರ ತೋರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.