ADVERTISEMENT

ಆವಣಿ ರಾಮಲಿಂಗೇಶ್ವರಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 8:20 IST
Last Updated 22 ಫೆಬ್ರುವರಿ 2012, 8:20 IST

ಮುಳಬಾಗಲು: ತಾಲ್ಲೂಕಿನ ಆವಣಿ ಗ್ರಾಮದ ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದ ಬಂದಿದ್ದ ಭಕ್ತರು ರಥಕ್ಕೆ ಬಾಳೆ ಹಣ್ಣು- ಹೂವು ಎಸೆದು ಭಕ್ತಿ ಮೆರೆದರು.

ಆವಣಿ ಶೃಂಗೇರಿ ಮಠದ ಶಂಕರಾ ಚಾರ್ಯರು ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಈ ಬಾರಿ ಬಸ್ಸು ಪ್ರಯಾಣದಿಂದ ಹಿಡಿದು ಜಾತ್ರೆಯಲ್ಲಿ ಊಟ, ಉಪಚಾರ ನೀರು, ಮಜ್ಜಿಗೆ ಎಲ್ಲವೂ ಉಚಿತ, ಆವಣಿಗೆ ಬರುವ ಎಲ್ಲ ಭಕ್ತರು ಬಂದು ಹೋಗಲು ಮುಳಬಾಗಲುನಿಂದ ರಾಜ್ಯ ಸಾರಿಗೆ ವಾಹನವನ್ನು ಶ್ರೀರಾಮ ಚಾರಿಟೆಬಲ್ ಟ್ರಸ್ಟ್‌ನ ಆದಿ ನಾರಾಯಣ್ ವ್ಯವಸ್ಥೆ ಮಾಡಿದ್ದರು. ಕಲ್ಲುಪಲ್ಲಿ ಪ್ರಕಾಶ್, ಕೊತ್ತೂರು ಮಂಜುನಾಥ್ ಹೀಗೆ ಹತ್ತು ಹಲವಾರು ದಾನಿಗಳು ಉಚಿತ ಊಟ, ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಿ ಜಾತ್ರೆಗೆ ಆಗಮಿಸಿದ ಭಕ್ತರ ದಾಹ ನೀಗಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಸ್ತ್ರೀಶಕ್ತಿ ಸಂಘಗಳ ವತಿಯಿಂದ ವಸ್ತುಪ್ರದರ್ಶನ ನಡೆಯಿತು. ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಜನ ಸ್ತೋಮ ಈ ಬಾರಿ ಸೇರಿದ್ದು ಜನರನ್ನು ನಿಯಂತ್ರಿಸಲು ಪೊಲೀಸರು ಹೆಣಗಾಡುತ್ತಿದ್ದರು.

ಶಾಸಕ ಅಮರೇಶ್, ಜಿಲ್ಲಾ ಉಸ್ತು ವಾರಿ ಸಚಿವ ಆರ್.ವರ್ತೂರು ಪ್ರಕಾಶ್,  ಬಳ್ಳಾರಿ ಶಾಸಕ ಶ್ರೀರಾಮುಲು, ಮುಖಂಡರಾದ ಕಲ್ಲುಪಲ್ಲಿ ಪ್ರಕಾಶ್, ಶ್ರೀರಾಮ ಚಾರಿಟೆಬಲ್ ಟ್ರಸ್ಟ್‌ನ ಆದಿನಾರಾಯಣ್, ತಹಶೀಲ್ದಾರ್ ಪಿ. ಜಯಮಾಧವ, ಜಿಲ್ಲಾ ಪಂಚಾಯತಿ ಸದಸ್ಯೆ ಗೀತಮ್ಮ ಆನಂದರೆಡ್ಡಿ, ಮಾಜಿ ಸದಸ್ಯ ಆರ್.ಕೃಷ್ಣಪ್ಪ, ಗ್ರಾಮ ಪಂಚಾ ಯತಿ ಅಧ್ಯಕ್ಷೆ ಶಿವಮ್ಮ, ತಾಲ್ಲೂಕು ಪಂಚಾಯತಿ ಸದಸ್ಯೆ ಸುಬ್ಬಮ್ಮ, ಆವಣಿ ಬಾಬು ರಾಜಸ್ವನಿರೀಕ್ಷಕ ಬಿ.ಆರ್. ಮುನಿವೆಂಕಟಪ್ಪ ಭಾಗವಹಿಸಿದ್ದರು.

ಕಳ್ಳರ ಕೈಚಳಕ: ಜಾತ್ರೆಯಲ್ಲಿ ಹೆಚ್ಚು ನೂಕುನುಗ್ಗಲಿದ್ದ ಪರಿಣಾಮ ಜೇಬು ಗಳ್ಳರು ಮತ್ತು ಸರಗಳ್ಳರೂ ಕೈಚಳಕ ತೋರಿಸಿದರು. ಕೋಲಾರದ ಪಿಸಿ ಬಡಾವಣೆಯ ರುಕ್ಮಿಣಿಯಮ್ಮ ಅವರ ಸುಮಾರು 30 ಗ್ರಾಂ ಚಿನ್ನದ ಸರವನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.