ADVERTISEMENT

ಇಟ್ಟಿಗೆ ಕಾರ್ಖಾನೆ ಮಾಲೀಕರು ನೋಂದಣಿ ಮಾಡಿಸಿಕೊಳ್ಳಿ: ಕೋಲಾರ ಡಿ.ಸಿ ಮಂಜುನಾಥ್

ಇಟ್ಟಿಗೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 11:20 IST
Last Updated 23 ಅಕ್ಟೋಬರ್ 2018, 11:20 IST
ಕೋಲಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಇಟ್ಟಿಗೆ ಕಾರ್ಖಾನೆ ಮಾಲೀಕರ ಸಂಘದ ಸದಸ್ಯರ ಸಭೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿದರು.
ಕೋಲಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಇಟ್ಟಿಗೆ ಕಾರ್ಖಾನೆ ಮಾಲೀಕರ ಸಂಘದ ಸದಸ್ಯರ ಸಭೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿದರು.   

ಕೋಲಾರ: ‘ಇಟ್ಟಿಗೆ ಕಾರ್ಖಾನೆ ಮಾಲೀಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡರೆ ಅಧಿಕೃತವಾಗಿ ಕರ್ಖಾನೆ ನಡೆಸಲು ಅನುಮತಿ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಇಟ್ಟಿಗೆ ಕಾರ್ಖಾನೆ ಮಾಲೀಕರ ಸಂಘದ ಸದಸ್ಯರ ಸಭೆಯಲ್ಲಿ ಮಾತನಾಡಿ, ‘ಈಗ ಎಲ್ಲ ಇಟ್ಟಿಗೆ ಕಾರ್ಖಾನೆಗಳು ಅನಧಿಕೃತವಾಗಿ ನಡೆಯುತ್ತಿವೆ. ಮುಖ್ಯವಾಗಿ ಬೇಕಾಗಿರುವ ಮಣ್ಣನ್ನು ಕೆರೆಗಳಲ್ಲಿ ತೆಗೆಯಲು ಅವಕಾಶವಿಲ್ಲ. ಮೊದಲು ನೋಂದಣಿ ಮಾಡಿಕೊಂಡಾಗ ಮಾತ್ರ ಯೋಜನೆ ರೂಪಿಸಿಕೊಳ್ಳಬಹುದು’ ಎಂದು ಹೇಳಿದರು.

ಕಿರುಕುಳ ತಪ್ಪಿಸಿ: ಸಂಘ ಜಿಲ್ಲಾ ಘಟಕದ ಅಧ್ಯಕ್ಷ ವಕ್ಕಲೇರಿ ರಾಜಪ್ಪ ಮಾತನಾಡಿ, ‘ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಇಟ್ಟಿಗೆ ಕಾರ್ಖಾನೆಗಳು ಇವೆ. ಕೆರೆಗಳಲ್ಲಿ ಮಣ್ಣು ತೆಗೆಯಲು ಕಂದಾಯ, ಪೊಲೀಸ್, ಗಣಿ ಇಲಾಖೆಯವರು ತೊಂದರೆ ನೀಡುತ್ತಿದ್ದು, ಅದನ್ನು ತಪ್ಪಿಸಬೇಕು’ ಎಂದು ಕೋರಿದರು.

ADVERTISEMENT

‘ನಮ್ಮಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸರ್ಕಾರಕ್ಕಿಂತ ಹೆಚ್ಚು ಸಂಬಂಳ ನೀಡುತ್ತಿದ್ದೆವೆ. ವಸತಿ, ಊಟ, ಸರ್ಕಾರದಿಂದ ದೊರೆಯುತ್ತಿರುವ ಕಾರ್ಮಿಕ ಯೋಜನೆಗಳನ್ನು ಸಹ ಕಲ್ಪಿಸಿಕೊಡುತ್ತಿದ್ದೆವೆ. ಆದರೆ ಇಟ್ಟಿಗೆ ತಯಾರಿಸಲು ಮಣ್ಣು ಸಿಗುತ್ತಿಲ್ಲ’ ಎಂದು ಬೇಸರವ್ಯಕ್ತಪಡಿಸಿದರು.

‘ಸರ್ಕಾರ ಕೈಗಾರಿಕೆಗಳ ಸ್ಥಾಪನೆಗೆ ಬಂಡವಾಳಶಾಹಿಗಳಿಗೆ ಭೂಮಿಯನ್ನು ಪರಿವರ್ತನೆ ಸೇರಿದಂತೆ ಎಲ್ಲ ಸೌಕರ್ಯ ಕಲ್ಪಿಸುತ್ತಿದೆ. ಇಟ್ಟಿಗೆ ಕಾರ್ಖಾನೆಗಳಿಗೆ ಸರ್ಕಾರ ಯಾವುದೇ ರೀತಿಯ ಸಹಾಯ ಮಾಡಿಲ್ಲ. ಕನಿಷ್ಠ ಕೆರೆ ಮಣ್ಣು ಬಳಕೆಗಾದರೂ ಅನುಮತಿ ನೀಡಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ‘ಕೆರೆಗಳಲ್ಲಿ ಮಣ್ಣು ತೆಗೆಯಲು ಅವಕಾಶ ನೀಡಲು ಕೆಲ ನಿಯಮಗಳು ಇವೆ. ನೀವು ನೋಂದಣಿ ಮಾಡಿಕೊಂಡರೆ ಜಿಲ್ಲಾ ಪಂಚಾಯಿತಿ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಇಟ್ಟಿಗೆ ಕಾರ್ಖಾನೆಗಳು ಇಲಾಖೆಗೆ ₨ 10 ಸಾವಿರ ಶುಲ್ಕ ಕಟ್ಟಿ ನೊಂದಣಿ ಮಾಡಿಕೊಳ್ಳಬೇಕು. ಸಂಬಂಧಪಟ್ಟ ಇಲಾಖೆಗಳಿಂದನೂ ಅನುಮತಿ ಪಡೆದುಕೊಳ್ಳಬೇಕು. ಅವರಿಗೆ ಕೆರೆ ಮಣ್ಣು ಬೇಕಾಗಿರುವುದರಿಂದ ಕೆರೆಯಲ್ಲಿ ಹೂಳು ತೆಗೆಯುವ ಯೋಜನೆಯಡಿ ಅವಕಾಶ ಕಲ್ಪಿಸಬದಹುದು’ ಎಂದು ಗಣ್ಣಿ ಮತ್ತು ಭೂ ವಿಜ್ಞಾನಾಧಿಕಾರಿ ಲೋಕೇಶ್ ಕುಮಾರ್ ಸಲಹೆ ನೀಡಿದರು.

ವಿವಿಧ ಯೋಜನೆಗಳಡಿ ಅವಕಾಶ: ‘ಕೆರೆಗಳಲ್ಲಿ ಇದೇ ರೀತಿ ಹೂಳು ತೆಯಬೇಕು ಎಂಬ ಮಾನದಂಡಗಳು ಇವೆ. ಒಂದು ಮೀಟರ್ ಆಳ ತೆಗೆಯುವಂತಿಲ್ಲ. ಇದರಿಂದಾಗಿ ಕೆರೆ ಸಂಜೀವಿನಿ, ನರೇಗಾ ಮತ್ತು ಇತರೆ ಯೋಜನೆಗಳಡಿ ಕಾರ್ಖಾನೆಗೆ ಸಮೀಪವಿರುವ ಕೆರೆಗಳಲ್ಲಿ ಗುರು ಹಾಕಿಕೊಡುತ್ತೆವೆ. ಆದರಲ್ಲೆ ಮಣ್ಣು ತೆಗೆದುಕೊಳ್ಳಬೇಕು’ ಎಂದು ಸೂಚಿಸಿದರು.

ಮಾದರಿ ಕೆರೆ ನಿರ್ಮಾಣಕ್ಕೆ ಯೋಜನೆ: ‘ಜಿಲ್ಲೆಯ ಬಹುತೇಕ ಕೆರೆಗಳಿಗೆ ಕೆಸಿ ವ್ಯಾಲಿ ನೀರು ಹರಿಯುವುದರಿಂದ ಹೂಳು ತೆಗೆಯಬೇಕಾದ ಅವಶ್ಯಕತೆಯಿದೆ. ಇದಕ್ಕೆ ನೀವು ಸಹ ಸಹಕಾರ ನೀಡಬೇಕು. ಮೊದಲ ಹಂತದಲ್ಲಿ ಕೋಲಾರಮ್ಮ ಕರೆಯಲ್ಲಿ ಹೂಳು ತೆಗೆಯುವುದರ ಜತೆಗೆ ಮಾದರಿ ಕೆರೆಯನ್ನಾಗಿ ನಿರ್ಮಾಣ ಮಾಡಲು ಯೋಜನೆ ರೂಪಿಸೊಣ್ಣ’ ಎಂದು ಕೋರಿದಾಗ, ಇದಕ್ಕೆ ಇಟ್ಟಿಗೆ ಕಾರ್ಖಾನೆಗಳ ಮಾಲೀಕರು ಒಪ್ಪಿಗೆ ನೀಡಿದರು.

‘ಕಾರ್ಖಾನೆಗೆ ಸಮೀಪವಿರುವ ಕೆರೆಯಲ್ಲೇ ಮಣ್ಣು ತೆಗೆಯಲು ಅವಕಾಶ ನೀಡಲಾಗುವದು. ಮಣ್ಣು ತೆಗೆಯುವುದನ್ನು ಪರಿಶೀಲಿಸಲು ಮೇಲುಸ್ತುವಾರಿ ಸಮಿತಿ ರಚಿಸಲಾಗುತ್ತದೆ. ಸೂಚಿಸಿರುವ ನಿಯಮಗಳನ್ನು ಉಲ್ಲಂಘಿಸಿ ಮಣ್ಣು ತೆಗೆದರೆ ಕ್ರಮಜರುಗಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್, ಜಿಲ್ಲಾ ಕಾರ್ಮಿಕಾಧಿಕಾರಿ ಬಾಲಾಜಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.