ಕೋಲಾರ: ಪರಿಶಿಷ್ಟ ಜಾತಿ ಮತ್ತು ಸಮುದಾಯವರೆಂದು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸೌಲಭ್ಯ ಪಡೆಯುವುದನ್ನು ತಡೆಯುವ ನಿಟ್ಟಿನಲ್ಲಿ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಡಿಜಿಪಿ ಕೆಸಿಎನ್ ಚಿಕ್ಕೆರೂರ್ ತಿಳಿಸಿದರು.
ನಗರಕ್ಕೆ ಗುರುವಾರ ಭೇಟಿ ನೀಡಿ ಅಧಿಕಾರಿಗಳೊಡನೆ ಚರ್ಚಿಸಿದ ಬಳಿಕ ಅವರು `ಪ್ರಜಾವಾಣಿ~ಯೊಡನೆ ಮಾತನಾಡಿ, ಪರಿಶಿಷ್ಟ ಸಮುದಾಯ ದವರೆಂದು ಬೇರೆ ಸಮುದಾಯದವರು ಸುಳ್ಳು ಪ್ರಮಾಣಪತ್ರ ನೀಡಿ ಸೌಕರ್ಯ ಪಡೆಯುವುದರಿಂದ, ನಿಜವಾದ ಫಲಾನುಭವಿಗೆ ಅದರಿಂದ ಹೆಚ್ಚು ತೊಂದರೆಯಾಗುತ್ತದೆ.
ಅದನ್ನು ತಡೆಯುವುದೇ ನಿರ್ದೇಶನಾಲಯದ ಆದ್ಯತೆ ಎಂದು ನುಡಿದರು.
ಪೊಲೀಸ್ ಇಲಾಖೆಯಲ್ಲಿಯೂ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ನೀಡಿ ಕೆಲಸ ಪಡೆದಿರುವವರು ಇದ್ದಾರೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗುವುದು. ಮೊದಲಿಗೆ ಪರಿಶೀಲನೆ ನಡೆಸಲಾಗುವುದು. ಸುಳ್ಳು ಪತ್ತೆ ಯಾದಲ್ಲಿ ಗಂಭೀರ ಕ್ರಮಕೈಗೊಳ್ಳ ಲಾಗುವುದು ಎಂದು ಹೇಳಿದರು.
ಅಧಿಕಾರ ವಹಿಸಿಕೊಂಡು ಕೇವಲ 10 ದಿನಗಳಾಗಿವೆ. ನಿರ್ದೇಶನಾಲಯ ಮತ್ತು ಅದರ ಕಾರ್ಯವ್ಯಾಪ್ತಿಯನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ. ಪರಿ ಶಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಗಳಿಗೆ ಆದ್ಯತೆ ಮೇರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ನಿರ್ಧರಿಸಿರುವೆ. ಕೋಲಾರದ ನಾನು ಭೇಟಿ ನೀಡಿದ ಮೊದಲ ಜಿಲ್ಲೆ. ನಂತರ ಗುಲ್ಬರ್ಗಾ ಮತ್ತು ಬೀದರ್ ಜಿಲ್ಲೆಗೆ ಭೇಟಿ ನೀಡಲು ನಿರ್ಧರಿಸಿರುವೆ ಎಂದು ತಿಳಿಸಿದರು.
ಇದೇ ವೇಳೆ ನಿರ್ದೇಶನಾಲಯದ ಬೆಂಗಳೂರು ಪ್ರಾದೇಶಿಕ ಎಸ್ಪಿ ರೇಣುಕಾ ಕೆ.ಸುಕುಮಾರ್, ಇನ್ಸ್ಪೆಕ್ಟರ್ ವೀರೇಂದ್ರ ಪ್ರಸಾದ್ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.