ADVERTISEMENT

ಕನ್ನಡ ಬಳಕೆಗೆ ಮುಜುಗರ ಬೇಡ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 9:23 IST
Last Updated 20 ಡಿಸೆಂಬರ್ 2017, 9:23 IST

ಕೋಲಾರ: ‘ಕನ್ನಡ ಮಾತೃ ಭಾಷೆ ಮಾತ್ರವಲ್ಲ, ನಮ್ಮ ಆಡಳಿತ ಭಾಷೆ. ಅದನ್ನು ಬಳಸಲು ಮುಜುಗರ ಬೇಡ’ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಸಲಹೆ ನೀಡಿದರು. ನಗರದ ಟಿ.ಚನ್ನಯ್ಯ ರಂಗಮಂದಿರದ ‘ಭೂತಾಯಿ ನೆನೆದೇನಾ’ ವೇದಿಕೆಯಲ್ಲಿ ಮಂಗಳವಾರ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿ, ಕನ್ನಡದ ಸಂಸ್ಕೃತಿ ಶ್ರೀಮಂತವಾಗಿದೆ. ಅದನ್ನು ಉಳಿಸಿ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.

ಕನ್ನಡಿಗರು ಶಾಂತಿ ಪ್ರಿಯರು ಮತ್ತು ಹೃದಯವಂತರು ಎಂಬುದಕ್ಕೆ ಬೆಂಗಳೂರಿನ ಬೆಳವಣಿಗೆಯೇ ಸಾಕ್ಷಿ. ದೇಶದ ವಿವಿಧ ರಾಜ್ಯಗಳ ಜನ ಬೆಂಗಳೂರಿಗೆ ಬಂದು ಬದುಕುತ್ತಿದ್ದಾರೆ. ಆದರೆ, ಅವರು ತಮ್ಮದೇ ಭಾಷೆ ಬೆಳೆಸುವ ಕೆಲಸ ಮಾಡುತ್ತಾರೆ. ಅಂತಹವರಿಗೆ ಕನ್ನಡ ಕಲಿಸುವ ಕೆಲಸವಾಗಬೇಕು. ದೆಹಲಿಯಲ್ಲಿ ಸ್ಥಳೀಯರು ಹಿಂದಿ ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲ. ಆದರೆ, ಕನ್ನಡಿಗರು ಅದಕ್ಕೆ ವ್ಯತಿರಿಕ್ತ ಎಂದು ವಿಷಾದಿಸಿದರು.

ಬೆಂಗಳೂರಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಿದೆ. ಅಲ್ಲಿ ಕನ್ನಡಿಗರು ಎಲ್ಲಿದ್ದಾರೆ ಎಂಬುದನ್ನು ಹುಡುಕುವ ಪರಿಸ್ಥಿತಿ ಇದೆ. ತೆಲುಗು, ತಮಿಳು ಭಾಷಿಕರ ಸಂಖ್ಯೆ ಹೆಚ್ಚಿರುವ ಈ ಜಿಲ್ಲೆಯಲ್ಲಿ ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಕನ್ನಡಪರ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಸಲಹೆ ನೀಡಿದರು.

ADVERTISEMENT

ಕುತ್ತು ಬಂದಿಲ್ಲ: ಲೇಖಕ ಮಲ್ಲಿಕಾರ್ಜುನ ವಿಜಯಪುರ ಅವರ ರಚನೆಯ ‘ಪಾರ್ವತಿ ಕಲ್ಯಾಣ’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಎಲ್‌.ಗೋಪಾಲಕೃಷ್ಣ, ‘ಜಿಲ್ಲೆಯಲ್ಲಿ ತೆಲುಗು ಮತ್ತು ತಮಿಳು ಭಾಷೆಯ ಪ್ರಭಾವ ಹೆಚ್ಚಿದ್ದರೂ ಭಾಷಾ ಸಾಮರಸ್ಯಕ್ಕೆ ಕುತ್ತು ಬಂದಿಲ್ಲ’ ಎಂದರು.

‘ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್‌ ನಾಡು ನುಡಿಯ ಬೆಳವಣಿಗೆಗೆ ಸಹಕಾರ ನೀಡುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್‌ಗೆ ಸ್ವಂತ ಕಟ್ಟಡಗಳಿವೆ. ಆದರೆ, ಕೋಲಾರ ಜಿಲ್ಲೆಯಲ್ಲಿ ಕಟ್ಟಡವಿಲ್ಲ. ಜಿಲ್ಲಾಡಳಿತವು ನಿವೇಶನ ನೀಡಿದರೆ ಕಟ್ಟಡ ನಿರ್ಮಿಸಲಾಗುತ್ತದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ವಿಜ್ಞಾನಿ ಮುನಿವೆಂಕಟಪ್ಪ ಸಂಜಪ್ಪ, ಸಾಹಿತಿ ವಿ.ಎಸ್.ಎಸ್.ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ಸಮ್ಮೇಳನಾಧ್ಯಕ್ಷರಾದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ಅವರ ಪತ್ನಿ ಸುಲೋಚನಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಸಲಹೆಗಾರ ಗೋಕುಲ ನಾರಾಯಣಸ್ವಾಮಿ, ನಿಕಟ ಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್‌, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎಸ್‌.ಮುನಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.