ಕೋಲಾರ:- ಕರ್ನಾಟಕ ದರ್ಶನ ಯೋಜನೆಯಡಿ ಮಾ.10ರಿಂದ ನಡೆಯುವ ನಾಲ್ಕು ದಿನಗಳ ಪ್ರವಾಸ ಕಾರ್ಯಕ್ರಮಕ್ಕೆ ಆಯ್ಕೆಯಾಗುವ ಜಿಲ್ಲೆಯ ಪ್ರೌಢಶಾಲೆಗಳ 820 ವಿದ್ಯಾರ್ಥಿಗಳಿಗೆ ಯಾವ ಕೊರತೆಯೂ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ವಿನೋತ್ ಪ್ರಿಯಾ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಶನಿವಾರ ನಡೆದ ಕರ್ನಾಟಕ ದರ್ಶನದ ಜಿಲ್ಲಾ ಸಮನ್ವಯ ಸಮಿತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಆಯ್ಕೆ ಪಾರದರ್ಶಕವಾಗಿದ್ದು ಯಾವುದೇ ಆರೋಪಗಳಿಗೆ ಎಡೆ ಮಾಡಿಕೊಡಬಾರದು ಎಂದರು.
ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಿಂದ ತಲಾ ಇಬ್ಬರು ಪ್ರವಾಸ ಕೈಗೊಳ್ಳಲು ಅವಕಾಶವಿದ್ದು, ಒಟ್ಟಾರೆಯಾಗಿ ಪರಿಶಿಷ್ಟ ಜಾತಿಯ 268, ಪರಿಶಿಷ್ಟ ವರ್ಗದ 102 ಹಾಗೂ ಹಿಂದುಳಿದ, ಅಲ್ಪಸಂಖ್ಯಾತರು, ಸಾಮಾನ್ಯ ವರ್ಗದ 450 ಮಕ್ಕಳನ್ನು ಉತ್ತರ ಕರ್ನಾಟಕ ಪ್ರವಾಸಕ್ಕೆ ಆಯ್ಕೆ ಮಾಡಬೇಕಿದೆ. ಹೆಚ್ಚಿನ ವಿದ್ಯಾರ್ಥಿಗಳು ಆಸಕ್ತಿ ತೋರಿದರೆ ಬಾಲಕ–- ಬಾಲಕಿಯರನ್ನು ಪ್ರತ್ಯೇಕವಾಗಿ ಲಾಟರಿ ಮೂಲಕ ಆಯ್ಕೆ ಮಾಡಬೇಕು ಎಂದರು.
ತಲಾ ₨3500: ಪ್ರತಿ ವಿದ್ಯಾರ್ಥಿಗೆ ತಲಾ ₨3,500 ವಿನಿಯೋಗಿಸಬಹುದು. 200 ಪುಟಗಳ ನೋಟ್ ಪುಸ್ತಕ, ಪೆನ್, ಕಲರ್ ಪೆನ್ಸಿಲ್, ಡ್ರಾಯಿಂಗ್ ಬುಕ್, ಟೂರ್ ಕಿಟ್, ಸರ್ಕಾರದ ಲೋಗೋ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಕೋಲಾರ ಎಂದು ಮುದ್ರಿಸಿದ ಒಂದು ಟೀ ಶರ್ಟ್್, ಗುರುತಿನ ಚೀಟಿ ನೀಡಲಾಗುವುದು ಎಂದರು.
ವಿದ್ಯಾರ್ಥಿಗಳೊಂದಿಗೆ ಪ್ರತಿ ಬಸ್ ನಲ್ಲಿ ಇಬ್ಬರು ಕ್ರಿಯಾಶೀಲ ಶಿಕ್ಷಕರು ಪ್ರವಾಸ ಹೋಗಲಿದ್ದು, ಅವರಲ್ಲಿ ಒಬ್ಬರು ಶಿಕ್ಷಕಿ ಇರಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ವಿ.ಪದ್ಮನಾಭ, ಶಿಕ್ಷಣಾಧಿಕಾರಿ ಎ.ಎನ್.ನಾಗೇಂದ್ರ ಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೋಲಾರದ ಬಿ.ಜಗದೀಶ್, ಮಾಲೂರಿನ ಸುಬ್ರಹ್ಮಣ್ಯಂ, ಮುಳಬಾಗಲುವಿನ ದೇವರಾಜ್, ಕೆಜಿಎಫ್ನ ಕೃಷ್ಣಮೂರ್ತಿ, ಬಂಗಾರಪೇಟೆ ಬಿಆರ್ಸಿ ಯುವ-ರಾಜ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲ ಆಂಜಿನಪ್ಪ, ಉಪ ಸಮನ್ವಯಾಧಿಕಾರಿ ಸಿದ್ದಗಂಗಯ್ಯ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಅಧಿಕಾರಿ ಮಾಧವರೆಡ್ಡಿ, ವಿಷಯ ಪರೀಕ್ಷಕ ವೆಂಕಟಸ್ವಾಮಿ ಮತ್ತಿತರರು ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.