ADVERTISEMENT

ಕಾವ್ಯ ಮತ್ತು ಅಧ್ಯಾತ್ಮ ಜಿಎಸ್‌ಎಸ್‌ ಸಾಹಿತ್ಯ ಶಕ್ತಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2013, 5:51 IST
Last Updated 25 ಡಿಸೆಂಬರ್ 2013, 5:51 IST

ಶ್ರೀನಿವಾಸಪುರ: ಕಾವ್ಯ ಮತ್ತು ಅಧ್ಯಾತ್ಮ ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಅವರ ಶಕ್ತಿಯಾಗಿತ್ತು. ಬದುಕು ಹಾಗೂ ಬದುಕಿನ ಸೌಂದರ್ಯ ರೂಪಿಸುವುದು ಅವರ ಕಾವ್ಯದ ಉದ್ದೇಶವಾಗಿತ್ತು ಎಂದು ಸಾಹಿತಿ ಸ.ರಘುನಾಥ ಹೇಳಿದರು.

ಪಟ್ಟಣದ ವೆಂಕಟೇಶ್ವರ ನರ್ಸಿಂಗ್‌ ಹೋಂ  ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಗುಲಿ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಸೋಮವಾರ ನಿಧನರಾದ ಕವಿ ಜಿ.ಎಸ್‌.ಶಿವರುದ್ರಪ್ಪ ಗೌರವಾರ್ಥ ಮಂಗಳವಾರ  ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಜಿಎಸ್‌ಎಸ್‌ ಮಾರ್ಗ ನಿರ್ಮಾಪಕರಾಗದೆ ಮಾರ್ಗದ ಕವಿಯಾಗಿದ್ದರು. ಅವರ ಸಾಹಿತ್ಯದ ಪ್ರಕಾರವನ್ನು ಗುರುತಿಸಲಾಗದ ಕೆಲವು ವಿಮರ್ಶಕರು ಅವರನ್ನು ಸಮನ್ವಯ ಕವಿ ಎಂದು ಕರೆದರು. ಆದರೆ ಅವರನ್ನು ಹಾಗೆ ಕರೆಯುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಜಿಎಸ್‌ಎಸ್‌ ಚಳವಳಿಗಳನ್ನು ಕಾವ್ಯದಲ್ಲಿ ತರಲಿಲ್ಲ. ಆದರೆ ಅವರ ಕಾವ್ಯ ಮನೋಧರ್ಮದಲ್ಲಿ ದಲಿತ ಆಶಯಗಳು ಹುಟ್ಟಿಕೊಂಡಿದ್ದವು. ನಲುಮೆಯನ್ನು ಕಾವ್ಯದ ಧಾತುವನ್ನಾಗಿ ಸ್ವೀಕರಿಸಿ ಕಾವ್ಯ ರಚನೆ ಮಾಡಿದರು. ಅನುರಕ್ತಿಯಲ್ಲಿ ವಿಭಕ್ತ ಭಾವ ಹೊಂದಿದ್ದರು. ಮಧುರ ಮೈಥುನ ಕಾವ್ಯ ಅವರದಾಗಿತ್ತು. ಅವರ ನಿಧನದಿಂದಾಗಿ ಕನ್ನಡ ಭಾಷೆ ಹಲವು ಪ್ರಶಸ್ತಿಗಳಿಂದ ವಂಚಿತವಾಗಿದೆ. ಅವರ ಅಗಲಿಕೆ ಕನ್ನಡಿಗರಿಗೆ ನೋವು ತಂದಿದೆ ಎಂದು ಹೇಳಿದರು.

ಡಾ.ವೆಂಕಟಾಚಲ, ಉಪನ್ಯಾಸಕ ಕುಬೇರಗೌಡ, ಕವಿ ಚಾಂಪಲ್ಲಿ ಚಂದ್ರ­ಶೇಖರಯ್ಯ, ಸಮಾಜ ಸೇವಕ ಇ.ಶಿವಣ್ಣ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮುನಿವೆಂಕಟೇಗೌಡ, ಕಾರ್ಯದರ್ಶಿ ಜಿ.ಎಸ್‌.ಚಂದ್ರಶೇಖರ್‌ ಜಿಎಸ್‌ಎಸ್‌ ಅವರ ಬದುಕು ಹಾಗೂ ಬರಹದ ಬಗ್ಗೆ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕ ಆರ್‌.ರವಿಕುಮಾರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.