ADVERTISEMENT

ಕುಗ್ಗದ ಹಳೆಗನ್ನಡ ಪ್ರಭಾವ: ಸ.ರಘುನಾಥ

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 8:24 IST
Last Updated 13 ಜೂನ್ 2013, 8:24 IST

ಉತ್ತನೂರು ರಾಜಮ್ಮ ವೇದಿಕೆ (ಮುಳಬಾಗಲು): ಹಳೆಗನ್ನಡ ಕಾವ್ಯ ಓದಲು ಕಷ್ಟ ಎಂಬ ಅಭಿಪ್ರಾಯದ ನಡುವೆಯೇ ಅದು ತನ್ನ ಪ್ರಭಾವವನ್ನು ಆಧುನಿಕ ಸಂದರ್ಭದಲ್ಲೂ ಉಳಿಸಿಕೊಂಡಿದೆ ಎಂದು ಲೇಖಕ, ಅನುವಾದಕ ಸ.ರಘುನಾಥ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಬುಧವಾರದಿಂದ ಆರಂಭವಾಗಿರುವ ತಾಲ್ಲೂಕು ಮಟ್ಟದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಳೆಗನ್ನಡ ಕಾವ್ಯ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಳೆಗನ್ನಡ ಹುಟ್ಟಿದ್ದು ನಲ್ಮೆಯ ನೆಲೆಯಲ್ಲಿ. ಪಂಪನ ಕಾಲದಲ್ಲಿ ಗಟ್ಟಿ ನೆಲೆ ಕಂಡ ಆ ಕಾವ್ಯದ ಪ್ರಭಾವದಿಂದ ಕುವೆಂಪು, ಗೋಪಾಲಕೃಷ್ಣ ಅಡಿಗ, ರಾಮಚಂದ್ರಶರ್ಮ, ಪುತಿನ ಒಳಗೊಂಡಂತೆ ಕನ್ನಡದ ಎಲ್ಲ ಆಧುನಿಕ ಲೇಖಕರು ಮುಕ್ತರಾಗಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಪ್ರೊ.ಬಿ.ಆರ್.ದೇವರಾಜ್ ಜನ್ನನ ಅಮೃತಮತಿ ಪ್ರಸಂಗದ ಕುರಿತು, ಪ್ರೊ.ಸಿ.ಎ.ರಮೇಶ್ ಹಳೆಗನ್ನಡ ಕಾವ್ಯದ ಓದಿನ ರೀತಿ-ನೀತಿಗಳ ಕುರಿತು ಮಾತನಾಡಿದರು. ನಂತರ ಶ್ರೀನಿವಾಸಪುರ ತಾಲ್ಲೂಕಿನ ಕಶೆಟ್ಟಿಪಲ್ಲಿ ಶಾಲೆ ಮಕ್ಕಳು ಹಳೆಗನ್ನಡ ರೂಪಕ ಪ್ರಸ್ತುತಪಡಿಸಿದರು.

ನಂತರ ನಡೆದ ಸ್ಥಳೀಯ ಸಾಹಿತ್ಯ ಗೋಷ್ಠಿಯಲ್ಲಿ ವಿಜ್ಞಾನ ಲೇಖಕ ವಿ.ಎಸ್.ಎಸ್.ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಡಿವಿಜಿ ಕೃತಿಗಳಲ್ಲಿ ವಿಜ್ಞಾನ ಕುರಿತು ಪ್ರೊ.ಎಂ.ಆರ್.ನಾಗರಾಜ್, ಉತ್ತನೂರು ರಾಜಮ್ಮ ಅವರ ಬದುಕು-ಬರಹ ಕುರಿತು ಮಂಜುಕನ್ನಿಕಾ, ದಾಸಸಾಹಿತ್ಯಕ್ಕೆ ಶ್ರೀಪಾದರಾಜರ ಕೊಡುಗೆ ಕುರಿತು ಉತ್ತನೂರು ನಾರಾಯಣಾಚಾರ್ ಮಾತನಾಡಿದರು. ಸಂಜೆ ನಡೆದ ನಗೆಹಬ್ಬದ ಕಾರ್ಯಕ್ರಮದಲ್ಲಿ  ರಿಚರ್ಡ್ ಲೂಯಿಸ್, ಪ್ರೊ.ಕೃಷ್ಣೇಗೌಡ ಮತ್ತು ಮೈಸೂರು ಆನಂದ್ ತಂಡ ಸಭಿಕರನ್ನು ನಗೆಗಡಲಿನಲ್ಲಿ ಮುಳುಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.