ADVERTISEMENT

ಕೃಷ್ಣಯ್ಯಶೆಟ್ಟಿ ತಿರಸ್ಕರಿಸಲು ಕೆಜೆಪಿ ಕರೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 4:07 IST
Last Updated 2 ಏಪ್ರಿಲ್ 2013, 4:07 IST

ಮಾಲೂರು: ತಾಲ್ಲೂಕಿನ ಮತದಾರರು ಯಾವುದೇ ರೀತಿಯ ಆಮಿಷಗಳಿಗೆ ಬಲಿಯಾಗದೆ ಇಲ್ಲಿನ ಭ್ರಷ್ಟ ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಅವರನ್ನು ಣೆಯಲ್ಲಿ ತಿರಸ್ಕರಿಸಬೇಕೆಂದು ಕರ್ನಾಟಕ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್.ಎನ್.ಶ್ರೀರಾಮ್ ಹೇಳಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಕೆಜೆಪಿ ತಾಲ್ಲೂಕು ಮಟ್ಟದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಜೆಪಿ ಉದಯವಾಗಿ ಮೂರೇ ತಿಂಗಳಲ್ಲಿ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಿದೆ. ಈಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಲವು ಗೊಂದಲಗಳ ನಡುವೆಯೂ ಪಕ್ಷ ಉತ್ತಮ ಸಾಧನೆ ಮಾಡಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದರು.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇಲ್ಲಿನ ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಕೋಟ್ಯಂತರ ರೂಪಾಯಿ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗೆ ತಂದರು. ನಂತರ ಯಡಿಯೂರಪ್ಪ ಬೆನ್ನಿಗೆ ಚೂರಿ ಹಾಕಿದರು. ಯಡಿಯೂರಪ್ಪ ಭೂ ಹಗರಣಗಳಿಗೆ ಸಿಲುಕಿ ಜೈಲುವಾಸ ಅನುಭವಿಸಲು ಕೃಷ್ಣಯ್ಯಶೆಟ್ಟಿಯೇ ಕಾರಣ ಎಂದು ದೂರಿದರು.

ಜೆಡಿಎಸ್ ತಾಲ್ಲೂಕು ಘಟಕದ ಕಾರ್ಯದರ್ಶಿ ಎಸ್.ಟಿ.ನಾರಾಯಣಪ್ಪ, ಬಿಜೆಪಿ ಮುಖಂಡ ಸತೀಶ್ ಆರಾಧ್ಯ ಮತ್ತು ಅವರ ಬೆಂಬಲಿಗರು ಇದೇ ಸಂದರ್ಭದಲ್ಲಿ ಕೆಜೆಪಿಗೆ ಸೇರ್ಪಡೆಗೊಂಡರು.

ಕೆಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ಮಧುಶ್ರೀ, ಜಿಲ್ಲಾಧ್ಯಕ್ಷ ಬಿ.ವಿ.ಶಿವಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಜಗದೀಶ್ವರಾಚಾರ್, ಕಾರ್ಯದರ್ಶಿಗಳಾದ ನಾರಾಯಣಪ್ಪ, ಸಿ.ಡಿ.ರಾಮಚಂದ್ರೇಗೌಡ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ರಾಜೇಶ್ವರಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಿಸ್ಸಾರ್ ಅಹಮ್ಮದ್, ಜಮೀರ್ ಪಾಷ, ಜಿಲ್ಲಾ ಯುವಮೋರ್ಚಾ ಅದ್ಯಕ್ಷ ಶಿವಕುಮಾರ್, ರೈತ ಮೋರ್ಚಾದ ಚಲಪತಿ, ಮುಖಂಡ ಕೆ.ಶೇಷು, ತಾಲ್ಲೂಕು ಅಧ್ಯಕ್ಷ ಎನ್‌ಹರ್ಷ, ವೆಂಕಟೇಶ್ ನಾರಾಯಣಸ್ವಾಮಿ, ಸೊಣಪ್ಪನಹಟ್ಟಿ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.