ADVERTISEMENT

ಗುಂಪು ಸಂಘರ್ಷ ಕೊನೆಗೊಳಿಸಿ-ಐಜಿಪಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 9:06 IST
Last Updated 20 ಡಿಸೆಂಬರ್ 2012, 9:06 IST

ಕೆಜಿಎಫ್: ಬೇತಮಂಗಲದಲ್ಲಿ ಎರಡು ಗುಂಪುಗಳ ನಡುವೆ ನಡೆಯುತ್ತಿರುವ ಸಂಘರ್ಷ ಕೊನೆಗೊಳ್ಳಬೇಕು. ಎರಡೂ ಗುಂಪಿನ ಮುಖಂಡರ ಜತೆ ಮಾತನಾಡಿ ಉತ್ತಮ ವಾತಾವರಣ ನಿರ್ಮಿಸಲು ಯತ್ನಿಸಬೇಕು ಎಂದು ಕೇಂದ್ರ ವಲಯದ ಐಜಿಪಿ ಅಮರ್‌ಕುಮಾರ್ ಪಾಂಡೆ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೇತಮಂಗಲ ಸಮಸ್ಯೆ ನಿವಾರಿಸಲು ಮುಖಂಡರು ಜವಾಬ್ದಾರಿ ತೆಗೆದುಕೊಳ್ಳಬೇಕು. ಪೊಲೀಸರಿಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.

ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಅಪರಾಧ ಪ್ರಕರಣ ಕಡಿಮೆಯಾಗಿದೆ. ಒಂದೆರಡು ರೌಡಿ ಚಟುವಟಿಕೆ ಹೊರೆತುಪಡಿಸಿ ಪರಿಸ್ಥಿತಿ ಶಾಂತಿಯುತವಾಗಿದೆ. 12 ಕೊಲೆ, 7 ದರೋಡೆ, ಒಂದು ಡಕಾಯಿತಿ ಪ್ರಕರಣ ಪತ್ತೆ ಹಚ್ಚಲಾಗಿದೆ.

ಅಪರಾಧ ಪ್ರಕರಣಗಳಲ್ಲಿ ತೊಡಗಿರುವವರಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಲು ಪೂರಕ ವಾತಾವರಣ ನಿರ್ಮಿಸಬೇಕಿದೆ. ಈ ದಿಸೆಯಲ್ಲಿ ಡಿ.26ರಂದು ತುಮಕೂರಿನಲ್ಲಿ ನಡೆಯುವ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದರು.

ಚಿನ್ನದ ಗಣಿಯಲ್ಲಿ ನಡೆಯುತ್ತಿರುವ ಕಳ್ಳತನ ತಡೆಗಟ್ಟಲು ಪೊಲೀಸರು ಗಣಿ ಭದ್ರತಾ ಸಿಬ್ಬಂದಿಗೆ ಸಹಕಾರ ನೀಡಲಾಗುವುದು. ಗಣಿಯೊಳಗಿನ ವಸ್ತುಗಳನ್ನು ಕಾಪಾಡುವುದು ಗಣಿ ಭದ್ರತಾ ಸಿಬ್ಬಂದಿಗೆ ಸೇರಿದ್ದು ಎಂದು ಪಾಂಡೆ ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್ ಸಪೆಟ್ ಈ ಸಂದರ್ಭ ಹಾಜರಿದ್ದರು.

ದೂರು: ಶಾಸಕ ವೈ.ಸಂಪಂಗಿ ಕೆಜಿಎಫ್ ನಗರಕ್ಕೆ ಭೇಟಿ ನೀಡುವ ಸಂದರ್ಭ ಪೊಲೀಸ್ ಸಬ್        ಇನ್ಸ್‌ಪೆಕ್ಟರ್ ಬೆಂಗಾವಲು ನೀಡುತ್ತಿರುವುದು ಕಾನೂನು ವಿರೋಧವಾಗಿದ್ದು, ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಎಂ.ಭಕ್ತವತ್ಸಲಂ ಕೇಂದ್ರ ವಲಯದ ಐಜಿಪಿಗೆ ಮನವಿ ಮಾಡಿದರು.

ಶಾಸಕರಿಗೆ ಸರ್ಕಾರ ಇಬ್ಬರು ಗನ್‌ಮೆನ್ ಒದಗಿಸಿದೆ. ನಗರದಲ್ಲಿ ಯಾವುದೇ ಅಶಾಂತಿ ವಾತಾವರಣ ಇಲ್ಲ. ಆದರೂ ಸಚಿವರಿಗೆ ನೀಡುವ ರೀತಿಯಲ್ಲಿ ಪೊಲೀಸರು ಎಸ್ಕಾರ್ಟ್ ನೀಡುತ್ತಿದ್ದಾರೆ ಎಂದು ಅವರು ದೂರಿದರು.

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅವರನ್ನು ಭೇಟಿ ಮಾಡಿದ ಅವರು, ಬೇತಮಂಗಲದಲ್ಲಿ ಈಚೆಗೆ ಜಲಮಂಡಳಿಗೆ ಸೇರಿದ ಪ್ರದೇಶದಲ್ಲಿ ರಾಜಕೀಯ ಸಭೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಶಾಸಕರ ವಿರುದ್ಧ ದೂರು ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದರು.ದೂರುಗಳನ್ನು ಪರಿಶೀಲಿಸುವುದಾಗಿ ಐಜಿಪಿ ಪಾಂಡೆ ಭರವಸೆ ನೀಡಿದರು.


ಅಪಘಾತ: ಪಾದಚಾರಿ ಸಾವು
ಕೆಜಿಎಫ್:
ನಗರದ ಸ್ವರ್ಣ ನಗರ-ಪಾರಾಂಡಹಳ್ಳಿ ರಸ್ತೆಯಲ್ಲಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದು ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಸ್ವರ್ಣನಗರ ನಿವಾಸಿ ಚಂದ್ರಶೇಖರ್ (37) ಎಂದು ಗುರುತಿಸಲಾಗಿದೆ. ಬಸ್ ಚಾಲಕ ರವಿಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.