ADVERTISEMENT

ಗೊಂದಲದ ಗೂಡಾದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 8:28 IST
Last Updated 13 ಮಾರ್ಚ್ 2018, 8:28 IST

ಕೋಲಾರ: ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಕೆಯುಡಬ್ಲ‍್ಯುಎಸ್‌ಡಿಬಿ) ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ನೈರ್ಮಲ್ಯ ಸಮಿತಿ ಸದಸ್ಯರಿಗಾಗಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಾಗಾರವು ಗೊಂದಲದ ಗೂಡಾಯಿತು.

ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜನೆಯಾಗಿದ್ದ ಕಾರ್ಯಾಗಾರದ ಬಗ್ಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ನೈರ್ಮಲ್ಯ ಸಮಿತಿ ಸದಸ್ಯರಿಗಾಗಿ 10 ದಿನಗಳ ಹಿಂದೆಯೇ ಮಾಹಿತಿ ನೀಡಲಾಗಿತ್ತು. ಆದರೆ, ಒಬ್ಬ ಸದಸ್ಯರು ಸಹ ಕಾರ್ಯಾಗಾರಕ್ಕೆ ಬರಲಿಲ್ಲ.

ಕಾರ್ಯಾಗಾರ ಬೆಳಿಗ್ಗೆ 10.30ಕ್ಕೆ ಆರಂಭವಾಗಬೇಕಿತ್ತು. ಸದಸ್ಯರ ನೋಂದಣಿಗೆ ಸ್ಥಳದಲ್ಲೇ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ, ಮಧ್ಯಾಹ್ನದ ಊಟಕ್ಕೆ ಟೊಮೆಟೊ ಪಲಾವ್‌ ಮತ್ತು ಮೊಸರನ್ನ ವ್ಯವಸ್ಥೆ ಮಾಡಲಾಗಿತ್ತು. ಸದಸ್ಯರು ಬಾರದ ಕಾರಣ ಕೆಯುಡಬ್ಲ್ಯೂಎಸ್‌ಡಿಬಿ ಅಧಿಕಾರಿಗಳು ಮಧ್ಯಾಹ್ನ 2 ಗಂಟೆವರೆಗೂ ರಂಗಮಂದಿರದಲ್ಲೇ ಕಾದು ಕುಳಿತರು.

ADVERTISEMENT

ಆದರೂ ಸದಸ್ಯರು ರಂಗಮಂದಿರದತ್ತ ಸುಳಿಯಲಿಲ್ಲ. ಸುಮಾರು ಮೂರೂವರೆ ತಾಸು ಕಾದು ಹೈರಾಣಾದ ಅಧಿಕಾರಿಗಳು ಅಂತಿಮವಾಗಿ ಕಾರ್ಯಾಗಾರ ಮುಂದೂಡಿದರು.

ಗ್ರಾಮೀಣ ಭಾಗದಲ್ಲಿ ನೀರಿನ ಮಿತ ಬಳಕೆ, ಸ್ವಚ್ಛತೆ ಮತ್ತು ಅಂತರ್ಜಲ ಅಭಿವೃದ್ಧಿ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾ.16ರವರೆಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಆದರೆ, ಮೊದಲ ದಿನವೇ ಸದಸ್ಯರು ನಿರುತ್ಸಾಹ ತೋರಿದರು. ಕಾರ್ಯಾಗಾರದಲ್ಲಿ ಮಾಹಿತಿ ನೀಡಲು ಬಂದಿದ್ದ ಸಂಪನ್ಮೂಲ ವ್ಯಕ್ತಿಗಳು ನಿರಾಸೆಯಿಂದ ಮನೆಯತ್ತ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.