ಕೆಜಿಎಫ್: ನಗರದ ರಾಬರ್ಟ್ಸನ್ಪೇಟೆಯಲ್ಲಿ ಚೀಟಿ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬ ರಾತ್ರೋರಾತ್ರಿ ಪರಾರಿಯಾಗಿ ಪೊಲೀಸ ಇಲಾಖೆ ಸಿಬ್ಬಂದಿ ಸೇರಿದಂತೆ ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಘಟನೆ ಗುರುವಾರ ನಡೆದಿದೆ.
ರಾಬರ್ಟ್ಸನ್ಪೇಟೆಯ ಮೂರನೇ ಕ್ರಾಸ್ನಲ್ಲಿ ಆಂಡವರ್ ಚಿಟ್ಸ್ ಎಂಬ ಹೆಸರಿನಲ್ಲಿ ಸಿ.ರಾಜ ಎಂಬುವರು ಕಳೆದ ಆರು ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಿದ್ದರು. ರೂ.1 ಲಕ್ಷ ದಿಂದ 2 ಲಕ್ಷ ರೂಪಾಯಿಗಳ ಚೀಟಿ ವ್ಯವಹಾರ ನಡೆಸುತ್ತಿದ್ದು, ನೂರಾರು ಮಂದಿ ಚೀಟಿ ಕಟ್ಟುತ್ತಿದ್ದರು ಎಂದು ತಿಳಿದು ಬಂದಿದೆ.
ಒಂದು ವರ್ಷಗಳಿಂದ ಚೀಟಿ ವ್ಯವಹಾರ ಕೊಂಚ ಅಸ್ತವ್ಯಸ್ತವಾಗಿದ್ದ ಕಾರಣ ಹಲವು ಜನರು ರಾಜುವಿಗೆ ಹಣ ನೀಡಲು ಸತಾಯಿಸುತ್ತಿದ್ದರು. ಹಣ ಕೇಳುವವರ ಒತ್ತಡ ಹೆಚ್ಚಿದ ಕಾರಣ ಬುಧವಾರ ಕಚೇರಿಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಗಾಗಲೇ ಸುಮಾರು 140ಕ್ಕೂ ಹೆಚ್ಚುಜನ ಅನ್ಯಾಯಕ್ಕೆ ಒಳಗಾಗಿದ್ದು, ಪೊಲೀಸ್ ಠಾಣೆಗೆ ಬಂದು ದೂರು ಹೇಳುತ್ತಿದ್ದಾರೆ. ಇದರ ಸಂಖ್ಯೆ 500 ದಾಟಬಹುದು ಎಂದು ಅಂದಾಜಿಸಲಾಗಿದೆ. ಚೀಟಿದಾರರು ಸುಮಾರು 5 ಕೋಟಿ ರೂಪಾಯಿಗೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಹಣ ಕಳೆದುಕೊಂಡವರಲ್ಲಿ ಬಹುತೇಕ ಮಂದಿ ಪೊಲೀಸ್ ಸಿಬ್ಬಂದಿಯೇ ಹೆಚ್ಚು ಇದ್ದಾರೆ.
ಕಷ್ಟ ಪಟ್ಟು ಸಂಪಾದಿಸಿದ ಹಣ ತೆಗೆದುಕೊಂಡು ಪರಾರಿಯಾದ ಆರೋಪಿ ಶಪಿಸುತ್ತಿದ್ದ ನೂರಾರು ಮಂದಿ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಗೆ ಬಂದು ಕಣ್ಣೀರಿಡುತ್ತಿದ್ದ ದೃಶ್ಯ ಕಂಡು ಬಂತು.
ಜನರನ್ನು ಸಮಾಧಾನ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ಸಹ ಮೋಸದ ಜಾಲದಲ್ಲಿ ಸಿಕ್ಕಿ ಬಿದ್ದಿರುವುದರಿಂದ ಅವರಲ್ಲಿಯೂ ದುಗುಡ ಎದ್ದು ಕಾಣುತ್ತಿತ್ತು. ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.