ಕೋಲಾರ: ಗುರು ಪೂರ್ಣಿಮೆಯನ್ನು ನಗರದ ಸಾಯಿಬಾಬಾ ಮಂದಿರದಲ್ಲಿ ಭಾನುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಗುರು ಪೂರ್ಣಿಮೆ ಪ್ರಯುಕ್ತ ವಿಶೇಷ ಪೂಜೆ, ಹೂವಿನ ಅಲಂಕಾರ ಮತ್ತು ಭಜನೆ ಏರ್ಪಡಿಸಲಾಗಿತ್ತು.
ಬೆಳಿಗ್ಗೆ ಅಭಿಷೇಕ, ಭಜನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮ ಆರಂಭವಾದವು. ಬಾಬಾ ಮೂರ್ತಿ ಹಾಗೂ ದೇವಾಲಯವನ್ನು ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು. ಭಕ್ತರು ನಸುಕಿನಿಂದಲೇ ಬಾಬಾ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದರು. 10 ಸಾವಿರಕ್ಕೂ ಹೆಚ್ಚು ಭಕ್ತರು ಮಂದಿರಕ್ಕೆ ಭೇಟಿ ನೀಡಿದ್ದರು. ದೇವರ ದರ್ಶನದ ನಂತರ ಭಕ್ತರಿಗೆ ವಿಭೂತಿ, ತೀರ್ಥ, ಪ್ರಸಾದ ವಿತರಣೆ ಮಾಡಲಾಯಿತು. ಮೈದಾನದಲ್ಲಿ ಬೃಹತ್ ಪೆಂಡಾಲ್ ನಿರ್ಮಿಸಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಮಂದಿರದ ಮುಂಭಾಗದಲ್ಲಿ ಬ್ಯಾರಿಕೇಡ್ ಹಾಕಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು ಹಾಗೂ ಸ್ವಯಂಸೇವಕರು ಭದ್ರತಾ ಸೇವೆಯಲ್ಲಿ ನಿರತರಾಗಿದ್ದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ. ಗೋವಿಂದಗೌಡ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ರಮೇಶ್, ರುದ್ರಸ್ವಾಮಿ, ಬಾಬು, ರವಿಶಂಕರ ಗುಪ್ತಾ ಸಂತರ್ಪಣೆ ಹಾಗೂ ಪೂಜಾ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ವಿಶೇಷ ಅಭಿಷೇಕ ಟೇಕಲ್: ಗುರುಪೂರ್ಣಿಮೆ ಅಂಗವಾಗಿ ಕೊಂಡಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪನಮಾಕನಹಳ್ಳಿ ಸಾಯಿಬಾಬಾ ಅವರ ಓಂಕಾರಾಶ್ರಮದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಬೆಳಿಗ್ಗೆಯಿಂದಲೇ ಸಾಯಿಬಾಬಾ ಪ್ರತಿಮೆಗೆ ವಿಶೇಷ ಅಲಂಕಾರ, ಏಕದಶವಾರ ರುದ್ರಾಭಿಷೇಕ, ಅಭಿಷೇಕ, ಪುಷ್ಪಾರ್ಚನೆ ಮಾಡಲಾಯಿತು.
ಆಶ್ರಮದ ಮುಖ್ಯ ಪುರೋಹಿತ ಪಿ.ಜಿ. ಸುಬ್ಬರಾವ್ ಮಾತನಾಡಿ, ‘ಧಾರ್ಮಿಕ ಕಾರ್ಯಗಳಿಂದ ಮನುಷ್ಯನಲ್ಲಿ ಒಳ್ಳೆ ಭಾವನೆಗಳು ಬೆಳೆಯುತ್ತವೆ. ಮಾನವನ ಪ್ರತಿಯೊಂದು ಕಾರ್ಯ, ಆಲೋಚನೆಗಳು ಇತರರಿಗೆ ಮಾರ್ಗದರ್ಶನ ಆಗಬೇಕು’ ಎಂದರು.
ದರ್ಶನ ಪಡೆದ ಭಕ್ತರು ದೇವಸ್ಥಾನದ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು. ಪುರೋಹಿತರಾದ ಗೋವಿಂದರಾವ್, ಬಿ.ಜಿ. ಹನುಮಂತರಾವ್, ಶಂಕರನಾರಾಯಣರಾವ್, ಬಿ.ವಿ. ರಾಜೇಂದ್ರ, ಬಿ.ಕೆ. ನಾರಾಯಣಸ್ವಾಮಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.