ಮಾಲೂರು: ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸುವ ತುರ್ತು ಹಿಂದಿನ ದಿನಗಳಿಗಿಂತಲೂ ಇಂದು ಹೆಚ್ಚಾಗಿದೆ ಎಂದು ಶಾಸಕ ಕೆ.ಎಸ್.ಮಂಜುನಾಥ್ ಪತ್ನಿ ಆರಿದ್ರಾ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಭಾನುವಾರ ಚೈತನ್ಯ ಕಲಾನಿಕೇತನ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ, 61ನೇ ತಿಂಗಳ ಸಾಹಿತ್ಯ, ಸಾಂಸ್ಕೃತಿಕ ಸಂಭ್ರಮ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಮಹಿಳೆಯರನ್ನು ಸಮಾನ ಭಾಗಿದಾರರನ್ನಾಗಿ ಪರಿಗಣಿಸಬೇಕು ಎಂಬ ಅರಿವನ್ನು ಸಮಾಜ ಪಡೆಯಬೇಕಿದೆ ಎಂದರು.
ಲೋಕಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ. ರಾಜಕೀಯ ಪಕ್ಷಗಳು ಮಹಿಳೆಗೆ ಸಂಬಂಧಿಸಿ ಕೇವಲ ಬಾಯುಪಚಾರದ ಮಾತುಗಳನ್ನಷ್ಟೇ ಆಡುತ್ತಿವೆ. ಅಭಿವೃದ್ಧಿ ಮಂತ್ರ, ಜಾತಿ ಮತ್ತು ಕೋಮುವಾದಿ ರಾಜಕಾರಣದ ರಹಸ್ಯ ಕಾರ್ಯಸೂಚಿಗಳನ್ನು ಮಹಿಳೆಯರು ಮನಗಾಣಬೇಕು ಎಂದರು.
ದೌರ್ಜನ್ಯದ ಸಂದರ್ಭದಲ್ಲಿ ಮಹಿಳೆಯರು ಪ್ರತಿರೋಧ ವ್ಯಕ್ತಪಡಿಸುವ ಶಕ್ತಿ ಕಳೆದುಕೊಳ್ಳದೆ ಒಗ್ಗಟ್ಟಾಗಿರುವುದು ಅತಿ ಅವಶ್ಯ. ಹೈಟೆಕ್ ತಂತ್ರಜ್ಞಾನದಿಂದ ಹೆಣ್ಣಿನ ಗರ್ಭವು ಮಾರಾಟದ ಸರಕಾಗಿದೆ. ಹೆಣ್ಣು ಶಿಶುವಿಗೆ ತಾಯಿಯ ಗರ್ಭವು ಸುರಕ್ಷಿತ ನೆಲೆಯಾಗಿ ಉಳಿದಿಲ್ಲ ಎಂದು ವಿಷಾದಿಸಿದರು.
ಸೇವೆ ಹೆಸರಿನಲ್ಲಿ ಜೀತಗಾರರಂತೆ ದುಡಿಯುವ ಗಾರ್ಮೆಂಟ್ಸ್ ಮಹಿಳೆಯರು, ಪೌರಕಾರ್ಮಿಕ ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು, ಹೈಟೆಕ್ ಯುಗದ ಕೂಲಿಗಳಾಗಿದ್ದಾರೆ ಎಂದರು.
ಕವಯಿತ್ರಿ ಬೆಂಗಳೂರಿನ ಕೆ.ಷರೀಫ ಅಧ್ಯಕ್ಷತೆ ವಹಿಸಿದ್ದರು. ಚೈತನ್ಯ ಕಲಾನಿಕೇತನದ ಜ.ಮು.ಚಂದ್ರ, ನವ ಸಮಾಜ ಮಹಿಳಾ ಒಕ್ಕೂಟದ ವಿಮಲಮ್ಮ, ಕವಯತ್ರಿಯರಾದ ಎನ್.ಎಸ್.ರಾಜೇಶ್ವರಿ, ವನಿತಾ, ಲಕ್ಷ್ಮಮ್ಮ, ವಿನೋದ್, ಶೀಲಾ, ಮಂಜುಳಾ, ದಾಕ್ಷಾಯಿಣಿ, ರತ್ನಮ್ಮ, ಸುಶೀಲಮ್ಮ, ಬಸಮ್ಮ, ನೊಸಗೆರೆ ಮಂಜುಳಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.