ADVERTISEMENT

ನಿವಾಸಿಗಳ ನರಕಯಾತನೆಯ ಬದುಕು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 8:46 IST
Last Updated 28 ಅಕ್ಟೋಬರ್ 2017, 8:46 IST
ಶ್ರೀನಿವಾಸಪುರದ ಕಟ್ಟೆಕೆಳಗಿನ ಪಾಳ್ಯದ ಕಟ್ಟೆ ಸಮೀಪ ಒಳಚರಂಡಿಯಿಂದ ಹೊರಬಂದಿರುವ ಮಲ ಮಿಶ್ರಿತ ನೀರು
ಶ್ರೀನಿವಾಸಪುರದ ಕಟ್ಟೆಕೆಳಗಿನ ಪಾಳ್ಯದ ಕಟ್ಟೆ ಸಮೀಪ ಒಳಚರಂಡಿಯಿಂದ ಹೊರಬಂದಿರುವ ಮಲ ಮಿಶ್ರಿತ ನೀರು   

ಶ್ರೀನಿವಾಸಪುರ: ಒಳಚರಂಡಿಯಿಂದ ಹರಿದು ಬರುತ್ತಿರುವ ಮಲ ಮಿಶ್ರಿತ ನೀರು ಒಂದೆಡೆಯಾದರೆ. ಇನ್ನೊಂದೆಡೆ ಸಂಗ್ರಹವಾಗಿರುವ ಕೊಳಚೆ ನೀರು. ಕೊಳೆತು ನಾರುತ್ತಿರುವ ಕಸ ಕಡ್ಡಿ, ಬಡಾವಣೆ ಪೂರ್ತಿ ದುರ್ನಾತ. ಇದು ಪಟ್ಟಣದ ಕಟ್ಟೆ ಕೆಳಗಿನ ಪಾಳ್ಯದ ನಾಗರಿಕರ ನರಕಸದೃಶ ಬದುಕಾಗಿದೆ.

ಬಡಾವಣೆಯಲ್ಲಿನ ಒಳಚರಂಡಿಯಿಂದ ಮಲ ಮಿಶ್ರಿತ ನೀರು ಮಾತ್ರ ಹೊರಗೆ ಬರುತ್ತಿದೆ. ಇದರಿಂದಾಗಿ ಇಡೀ ಬಡಾವಣೆ ದುರ್ನಾತ ಬೀರುತ್ತಿದೆ. ಅದರ ಜತೆಗೆ ದಟ್ಟವಾಗಿ ಬೆಳೆದು ನಿಂತಿದ್ದ ಕಳೆಗಳು ಹಾಗೂ ಕಸ ಕಡ್ಡಿ ಕೊಳೆತು ನಾರುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡುವಂತೆ ಮಾಡಿದೆ.

‘ನಿಂತ ನೀರಿನಿಂದಾಗಿ ಸೊಳ್ಳೆಗಳ ಉತ್ಪತಿ ಹೆಚ್ಚಾಗಿದೆ. ಪ್ರತಿ ಮನೆಯಲ್ಲೂ ಡೆಂಗಿ ಹಾಗೂ ಚಿಕೂನ್‌ಗುನ್ಯಾ ರೋಗಿಗಳು ಕಾಣಸಿಗುತ್ತಾರೆ. ಸುತ್ತಲಿನ ಖಾಲಿ ಪ್ರದೇಶದಲ್ಲಿ ಗಿಡಗಳು ಬೆಳೆದಿವೆ. ಅಲ್ಲದೆ ಕೆಲವರು ಗಲೀಜು ಹಾಗೂ ಮಲ ಮೂತ್ರದ ನೀರು ಚರಂಡಿಯಿಂದ ಹರಿದು ಬರುತ್ಇರುವ ಕಾರಣ ಇಡೀ ಪ್ರದೇಶ ದುರ್ನಾತದಿಂದ ಕೂಡಿರುತ್ತದೆ’ ಎಂದು ನಿವಾಸಿ ನಾಗರಾಜ್ ಹೇಳುತ್ತಾರೆ.

ADVERTISEMENT

‘ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ಮಲ ನೀರು ಹರಿದು ಬರುತ್ತಿದೆ. ಇದರಿಂದ ಇಲ್ಲಿನ ನಿವಾಸಿಗಳು ಪರದಾಡುವಂತಾಗಿದೆ. ಜತೆಗೆ ಚರಂಡಿ ವ್ಯವಸ್ಥೆ ಇಲ್ಲದೆ ನೀರು ಸಂಗ್ರಹಗೊಂಡು ದುರ್ವಾಸನೆ ಬೀರುತ್ತಿದೆ. ಇದರಿಂದ ಸೊಳ್ಳೆ ಉತ್ಪತಿಯಾಗಿ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದೆ. ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ’ ನಿವಾಸಿ ಜಯಮ್ಮ ದೂರುತ್ತಾರೆ.

ಕೊಳೆತ ನೀರು ಮನೆ ಬಾಗಿಲುಗಳಲ್ಲಿ ನಿಂತಿದೆ. ನಿರ್ಮಾಣ ಹಂತದಲ್ಲಿರುವ ಕೆಲವು ಕಟ್ಟಡಗಳು ಜಲಾವೃತಗೊಂಡಿವೆ. ಮಕ್ಕಳು ಮನೆಯಿಂದ ಹೊರಗೆ ಬಂದು ನೀರಿಗೆ ಬೀಳುವ ಅಪಾಯ ಕಾಡುತ್ತಿದೆ. ಸಾಂಕ್ರಾಮಿಕ ರೋಗಗಳು ಹರಡಲು ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಇಷ್ಟಾದರೂ ಪುರಸಭೆ ಸಮಸ್ಯೆ ನಿವಾರಣೆಗೆ ಪ್ರಾಮಾ
ಣಿಕ ಪ್ರಯತ್ನ ಮಾಡುತ್ತಿಲ್ಲ ಎಂಬುದು ಅಲ್ಲಿನ ನಿವಾಸಿಗಳು ದೂರುತ್ತಾರೆ.

ಪುರಸಭೆಯ ಅಧಿಕಾರಿಗಳು ಒಳಚರಂಡಿ ತೊಂದರೆ ನಿವಾರಿಸಬೇಕು. ನಿವಾಸಿಗಳಿಗೆ ಎದುರಾಗಿರುವ ಆರೋಗ್ಯ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬಡಾವಣೆಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.