ಮಾಲೂರು: ತಾಲ್ಲೂಕಿನ ಹುಳದೇನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿ-ಯಲ್ಲಿ ಸಮರ್ಪಕವಾಗಿ ಪಡಿತರವನ್ನು ಗ್ರಾಮಸ್ಥರಿಗೆ ವಿತರಿಸದೇ ವಂಚಿಸಲಾಗುತ್ತಿದೆ ಎಂದು ಆರೋಪಿಸಿ ತಿಮ್ಮನಾಯಕನಹಳ್ಳಿ ಗ್ರಾಮಸ್ಥರು ಗುರುವಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಿರಸ್ತೆದಾರ್ ರಾಮಚಂದ್ರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮದ ಮುಖಂಡ ಮುನಿರಾಜು ಮಾತನಾಡಿ ಹುಳದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ನಾಲ್ಕು ಗ್ರಾಮಗಳಾದ ಜಿನಗ ತಿಮ್ಮನಹಳ್ಳಿ, ದೊಡ್ಡಮಲ್ಲೆ, ಚಿಕ್ಕಮಲ್ಲೆ, ಕೂರ್ನಹೊಸ-ಹಳ್ಳಿ ಕೋಟೆ ತಿಮ್ಮನಾಯಕನಹಳ್ಳಿ ಗ್ರಾಮಸ್ಥರಿಗೆ ಪಡಿತರ ವಿತರಣೆ ಸರಿಯಾಗಿ ನಡೆದಿಲ್ಲ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸದೆ ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿ ಕುಟುಂಬಕ್ಕೆ 5 ಲೀಟರ್ ಸೀಮೆ ಎಣ್ಣೆ ಬದಲು ಕೇವಲ 2ರಿಂದ 3 ಲೀಟರ್ ಸೀಮೆಎಣ್ಣೆಯನ್ನು ವಿತರಿಸಲಾಗುತ್ತಿದೆ ಎಂದು ಆಕ್ರೋಶಭರಿತರಾಗಿ ಹೇಳಿದರು.
ಗ್ರಾಮೀಣ ಭಾಗದ ಜನರಿಗೆ ಪಡಿತರ ವಿತರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಅನುಕೂಲ ಕಲ್ಪಿಸುವಂತೆ ಶಿರಸ್ತೆದಾರ್ ರಾಮಚಂದ್ರಪ್ಪ ಅವರಿಗೆ ಮನವಿ ಪತ್ರ ನೀಡಿದರು. ಗ್ರಾಮದ ಮುಖಂಡರಾದ ಮುನಿಸ್ವಾಮಿ, ಆಂಜಿನಪ್ಪ, ಗೋಪಾಲಪ್ಪ, ವೆಂಕಟೇಶ್, ವಿಶ್ವನಾಥ, ಗಿರಿಯಪ್ಪ, ಶಿವಣ್ಣ, ಕುಮಾರ್, ಮುನಿರಾಜು ಮೊದಲಾದವರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.