ADVERTISEMENT

ಬಂಗಾರಪೇಟೆ: ರೈಲು ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 6:30 IST
Last Updated 7 ಅಕ್ಟೋಬರ್ 2012, 6:30 IST

ಬಂಗಾರಪೇಟೆ:  ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಶನಿವಾರ ಪಟ್ಟಣದಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಡೆಸಲಾದ ಬಂದ್ ಸಂಪೂರ್ಣ  ಯಶಸ್ವಿಯಾಯಿತು.

ಕನ್ನಡಪರ ಸಂಘಟನೆಗಳು, ರೈತಸಂಘ ಜಂಟಿಯಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಟ್ಟಣದ ಕುವೆಂಪು ವೃತ್ತದಿಂದ ಪ್ರಾರಂಭವಾದ ಮೆರವಣಿಗೆ ಬಸ್‌ನಿಲ್ದಾಣ- ಬೂದಿಕೋಟೆ ವೃತ್ತ- ಆಸ್ಪತ್ರೆ ವೃತ್ತದ ಮಾರ್ಗದಲ್ಲಿ ಸಂಚರಿಸಿತು. ಕುವೆಂಪು ವೃತ್ತದಲ್ಲಿ ತಹಶೀಲ್ದಾರ್ ಎಸ್.ಎಂ.ಮಂಗಳಾ ಅವರಿಗೆ ಮನವಿ ಸಲ್ಲಿಸಲಾಯಿತು.

ಮುಖ್ಯ ಅಂಚೆಕಚೇರಿಯನ್ನು ಮುಚ್ಚಬೇಕೆಂದು ಕನ್ನಡ ಸಂಘದ ಪದಾಧಿಕಾರಿ ರಂಗರಾಮಯ್ಯ ನೇತೃತ್ವದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಲಾಯಿತು.

ರೈತಸಂಘದ ಕಾರ್ಯಕರ್ತರು ಟಿ.ಎನ್.ರಾಮೇಗೌಡ ನೇತೃತ್ವದಲ್ಲಿ ಬೆಂಗಳೂರು- ಮಾರಿಕುಪ್ಪಂ ರೈಲು ತಡೆದರು. ಯುವ ಆತ್ಮವಿಶ್ವಾಸ ವೇದಿಕೆ ವತಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೌನ ಮೆರವಣಿಗೆ ನಡೆಯಿತು.

ಕರವೇ ಪ್ರವೀಣ್ ಶಟ್ಟಿ ಬಣದ ವತಿಯಿಂದ ಪಟ್ಟಣದ ಹೊರವಲಯದಲ್ಲಿರುವ ದೇಶಹಳ್ಳಿಯಲ್ಲಿ ಕೆಲಕಾಲ ರಸ್ತೆತಡೆ ನಡೆಸಲಾಯಿತು. ಜನಜೀವನ ಅಸ್ತವ್ಯಸ್ತಗೊಂಡಿತ್ತು. ಬಸ್‌ಗಳು ಇಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದರು. ಪಟ್ಟಣದಿಂದ ಹೊರಡುವ ವಾಹನಗಳನ್ನು ತಡೆದು ತಮ್ಮನ್ನು ಕೊಂಡೊಯ್ಯುವಂತೆ ಪ್ರಯಾಣಿಕರು ಮನವಿ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು. ಪ್ರಯಾಣಕ್ಕೆ ಬಹುತೇಕ ಮಂದಿ ರೈಲುಗಳನ್ನು ಆಶ್ರಯಿಸಿದ್ದರು.

ಮುಖಂಡರಾದ ಸುಬ್ರಮಣಿ, ರಂಗರಾಮಯ್ಯ, ತಿಮ್ಮೋಪುರ ನಾಗರಾಜು, ಅಶ್ವತ್ಥ್, ಬೇಕರಿ ಶ್ರೀನಿವಾಸ್, ಬಿ.ಸಿ.ಮೂರ್ತಿ  ಹಾಗೂ ದಲಿತ ಸಂಘಟನೆ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವಕೀಲರ ಸಂಘ, ವರ್ತಕರ ಸಂಘ, ಆಟೋ ಮಾಲೀಕರ ಸಂಘದ ಸದಸ್ಯರು ಬಂದ್‌ಗೆ ಬೆಂಬಲ ನೀಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.