ADVERTISEMENT

ಬಯಲು ಸೀಮೆಯ ಖರ್ಜೂರ ಬಯಲು ಸೀಮೆಯ ಖರ್ಜೂರ

​ಪ್ರಜಾವಾಣಿ ವಾರ್ತೆ
Published 9 ಮೇ 2012, 5:55 IST
Last Updated 9 ಮೇ 2012, 5:55 IST

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಈಚಲು ಮರಗಳು ಕಾಯಿಬಿಟ್ಟು ತೂಗುತ್ತಿವೆ. ಹಸಿರು ಮತ್ತು ಹಳದಿ ಬಣ್ಣದಿಂದ ಕಂಗೊಳಿಸುವ ಗೊಂಚಲುಗಳು ಮಕ್ಕಳ ಬಾಯಲ್ಲಿ ನೀರೂರಿಸುತ್ತಿವೆ.

ಈಚಲು ಸುಗ್ಗಿ ಬಂತೆಂದರೆ ಗ್ರಾಮೀಣ ಮಕ್ಕಳು ಈಚಲು ಮರಗಳ ಕಡೆ ಹೆಜ್ಜೆ ಹಾಕುತ್ತಾರೆ. ಮರದ ಕೆಳಗೆ ಉದುರಿದ ಕಾಫಿ ಬಣ್ಣದ ಹಣ್ಣನ್ನು ಆರಿಸಿ ಜೇಬಿಗೆ ತುಂಬಿಸಿಕೊಂಡು ತಿಂದು ಸಂತೋಷಪಡುತ್ತಾರೆ. ಕೆಲವರು ಗೊಂಚಲುಗಳಿಗೆ ಕಲ್ಲೆಸೆದು ಉದುರಿಸಿ ಆದುಕೊಳ್ಳುವುದುಂಟು. ಇನ್ನೂ ಕೆಲವರು ಹಿರಿಯರ ಸಹಾಯದಿಂದ ಹಳದಿ ಬಣ್ಣದ ಗೊಂಚಲನ್ನು ಕೊಯ್ದು ಮನೆಗೆ ಕೊಂಡೊಯ್ದು ನೀರಿನಲ್ಲಿಟ್ಟು ಹಣ್ಣು ಮಾಡಿ ತಿನ್ನುತ್ತಾರೆ.

ಈಚಲು ಕಾಯಿಯನ್ನು `ಬಯಲು ಸೀಮೆಯ ಖರ್ಜೂರ~ ಎಂದು ಕರೆಯುತ್ತಾರೆ. ಈಚಲು ಕಾಯಿಯೆಂದರೆ ಎಲ್ಲ ವಯೋಮಾನದ ಜನರಿಗೂ ಇಷ್ಟ. ಆದ್ದರಿಂದಲೇ ಕೆಲವರು ಈಚಲು ಕಾಯಿಯನ್ನು ಸಂಗ್ರಹಿಸಿ ಶಾಲೆಗಳು ಹಾಗೂ ದೇವಾಲಯಗಳ ಸಮೀಪ ಮಾರಿ ಹೊಟ್ಟೆ ಹೊರೆದುಕೊಳ್ಳುತ್ತಾರೆ.

ಇಷ್ಟಾದರೂ ಈಚಲು ಮರದ ಕೆಳಗೆ ಹೋಗುವ ಮಕ್ಕಳು ಮುಳ್ಳಿನ ಬಗ್ಗೆ ಎಚ್ಚರ ವಹಿಸಬೇಕು. ಈಚಲು ಮುಳ್ಳು ವಿಷ ಎಂದು ಗ್ರಾಮೀಣ ಪ್ರದೇಶದ ಹಿರಿಯರು ಹೇಳುತ್ತಾರೆ. ಏಕೆಂದರೆ ಈಚಲು ಮುಳ್ಳು ತಗುಲಿದರೆ ಹೆಚ್ಚು ನೋವು ಕೊಡುತ್ತದೆ ಮತ್ತು ಬೇಗ ವಾಸಿಯಾಗುವುದಿಲ್ಲ. ಮಕ್ಕಳು ಗೊಂಚಲಿಗೆ ಎಸೆದ ಕಲ್ಲುಗಳು ಮರದ ಸಿಕ್ಕಿನಲ್ಲಿ ಸಿಕ್ಕಿಕೊಂಡು ಗಾಳಿ ಬೀಸಿದಾಗ ಕೆಳಗೆ ಉದುರುವುದುಂಟು. ಕಾಯಿ ಆಯುವಾಗ ಕಲ್ಲು ತಲೆ ಮೇಲೆ ಬೀಳುವ ಸಾಧ್ಯತೆ ಇರುತ್ತದೆ.

ಹಿಂದೆ ಈಚಲು ತೋಪುಗಳು ಇದ್ದವು. ಈಗ ತೋಪು ಕಂಡುಬರುವುದಿಲ್ಲ. ಬಿಡಿ ಮರಗಳು ಬೆಳೆದು ನಿಂತಿವೆ. ಈಚಲು ಗಡ್ಡೆಗಾಗಿ, ಚಾಪೆ ಹೆಣೆಯಲು, ಎಲೆ, ಬುಟ್ಟಿ ತಯಾರಿಕೆಯಲ್ಲಿ ಎಲೆಯ ದಂಟನ್ನು     ಬಳಸುವುದರಿಂದ ಗಿಡ ಬೆಳವಣಿಗೆ ಕುಂಠಿತಗೊಂಡಿದೆ. ಸುಗ್ಗಿ ಕಾಲದಲ್ಲಿ ಕಾಯಿಗೆ ಬರವಿಲ್ಲ.

ಎಸ್‌ಎಫ್‌ಐ ಪ್ರತಿಭಟನೆ
ಚಿಕ್ಕಬಳ್ಳಾಪುರ: ಖಾಸಗಿ ಶಾಲೆಗಳಲ್ಲಿ ವಂತಿಗೆ ಹಾವಳಿ ತಪ್ಪಿಸುವುದು, ಜಿಲ್ಲಾ ಶಿಕ್ಷಣ ನಿಯಂತ್ರಣ ಕಾಯ್ದೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ) ಸದಸ್ಯರು ಮಂಗಳವಾರ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.