ಪಾವಗಡ: ಪಾವಗಡ ತಾಲ್ಲೂಕಿನ ಕೊಳವೆ ಬಾವಿಗಳಲ್ಲಿ ಸಿಗುವ ಅಲ್ಪಪ್ರಮಾಣದ ನೀರಿನಿಂದ ತೋಟಗಾರಿಕೆ, ಹಣ್ಣು, ತರಕಾರಿಯನ್ನು ಮಿಶ್ರಬೆಳೆಯಾಗಿ ಸಹಜ ಸಾಗುವಳಿ ಮೂಲಕ ಬೆಳೆದು ಹೆಚ್ಚು ಲಾಭ ಪಡೆಯಬಹುದು ಎಂಬುದನ್ನು ವೈ.ಎನ್.ಹೊಸಕೋಟೆಯ ಟಿ.ವಿ. ವೆಂಕಟೇಶ್ ಸಾಧಿಸಿ ತೋರಿಸಿದ್ದಾರೆ.
ಮೇಗಳಪಾಳ್ಯದ ಬಳಿ ಇರುವ ತಮ್ಮ 21 ಎಕರೆ ಭೂಮಿಯಲ್ಲಿ ಕೊಳವೆ ಬಾವಿಯ ಅತ್ಯಲ್ಪ ನೀರನ್ನು ಹನಿ ನೀರಾವರಿ ಮೂಲಕ ಹರಿಸಿ ತೋಟಗಾರಿಕೆ ಬೆಳೆಯನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. ಇವರ ತೋಟ ನೋಡಿದವರಿಗೆ ಸರಿಯಾಗಿ ನಿರ್ವಹಣೆ ಇಲ್ಲ ಎಂಬ ಭಾವನೆ ಬಂದರೂ ಉಪಯೋಗ ಕಂಡಾಗ ಮೆಚ್ಚುಗೆ ಆಗುತ್ತದೆ.
ಗಿಡದ ಬುಡ ಸ್ವಚ್ಛವಾಗಿ ಗೊಬ್ಬರ ನೀರು ಇದ್ದರೂ ಬೇರೆಡೆ ಬೆಳೆದ ಕಳೆ ಹುಲ್ಲುಗಿಡಗಳು ದನಕರುಗಳಿಗೆ ಹಸಿರು ಮೇವಾಗಿ ಮತ್ತು ಹಸಿರು ಗೊಬ್ಬರವಾಗುತ್ತದೆ. ಪ್ರತಿಯೊಂದು ಗಿಡಗಳ ಸಾಲುಗಳಲ್ಲಿ ದೊಡ್ಡ ಚರಂಡಿ ಇದ್ದು ಮಳೆ ಬಂದಾಗ ನೀರು ನಿಲ್ಲುತ್ತದೆ. ಕಳೆಯಿಂದ ಗೊಬ್ಬರ ತಯಾರಿಸುತ್ತಾರೆ.
ಸಪೋಟ, ಮಾವು, ಆಮ್ಲ ಮತ್ತು ಖರ್ಜೂರ ಬೆಳೆ ಹಾಕಿದ್ದಾರೆ. ಖರ್ಜೂರ ಈ ವರ್ಷ ಬೆಳೆ ಪ್ರಾರಂಭವಾಗಿದೆ. ಹೈದರಾಬಾದ್ನಿಂದ ತಂದು ಹಾಕಿದ ಖರ್ಜೂರ ಇದೀಗ ಫಲಬಿಡಲು ಪ್ರಾರಂಭವಾಗಿದೆ. ಬುಡದಲ್ಲಿ ಬೆಳೆಯುವ ಹೆಚ್ಚುವರಿ ರೆಂಬೆಗಳನ್ನು ತೆಗೆಯಬೇಕು.
ಇಲ್ಲವಾದರೆ ಗಿಡ ಹೆಚ್ಚು ವರ್ಷ ಬದುಕಲಾರದು. ಯಾವುದೇ ರೋಗ ಹುಳುಗಳ ಕಾಟ ಇಲ್ಲದೆ ಬೆಳೆಯುವ ಬೆಳೆ ಹಾಗೂ ಮಳೆ ಕಡಿಮೆ ಇರುವ ಪ್ರದೇಶಕ್ಕೆ ಹೇಳಿ ಮಾಡಿಸಿದ ಬೆಳೆ ಆಗಿದೆ.
ಆಮ್ಲ ಹೂವಾದಾಗ ನೀರು ಹರಿಸಿದರೆ ಹೆಚ್ಚು ಇಳುವರಿ ಪಡೆಯಬಹುದು. 30ರಿಂದ 40 ಕ್ವಿಂಟಲ್ ಬೆಳೆ ಬರುತ್ತಿದೆ. ಬೆಲೆಯೂ ಕೆಜಿಗೆ ರೂ. 20ವರೆಗೆ ಸಿಗುತ್ತಿರುವುದರಿಂದ ಉತ್ತಮ ಲಾಭ ಇದೆ. ಮತ್ತೊಂದೆಡೆ ಹರಿಸಿನ, ಗುಲಾಬಿ, ಕಾಕಡ ಸೇವಂತಿ, ಸುಗಂದರಾಜ ಹೂ ಬೇಸಾಯದೊಂದಿಗೆ ಟೊಮೆಟೊ, ಬದನೆ, ಬೆಂಡೆ, ಮೆಣಸಿನ ಕಾಯಿ ಮುಂತಾದ ತರಕಾರಿ ಬೆಳೆಯೂ ಇದೆ. ಅಡಿಕೆ, ತೆಂಗು, ವೀಳ್ಳೇದ ಎಲೆ ಬೆಳೆಯುತ್ತಿದ್ದಾರೆ. ಪ್ರತಿ ನಿತ್ಯ ಯಾವುದಾದರು ಕನಿಷ್ಠ ಒಂದು ಬೆಳೆ ಮಾರುಕಟ್ಟೆ ಹೋಗುತ್ತದೆ ಎನ್ನುತ್ತಾರೆ ವೆಂಕಟೇಶ್.
ಜಮೀನಿನ ಬೇಲೆಯಲ್ಲಿಯೂ ಬೇವು, ಹುಳಿಮಾವು, ಜಾಲಿ, ಬೋರೆಹಣ್ಣಿನ ಗಿಡ, ಕತ್ತಾಳಿ, ಸೀಗೆ, ಗಜ್ಜುಗ, ಹುಣಿಸೆ, ತೇಗ, ಹಿಪ್ಪೆ, ನೇರಳೆ ಗಿಡ ಬೆಳೆಸಿದ್ದಾರೆ. ತೋಟಕ್ಕೆ ರಕ್ಷಣೆ ಜೊತೆಗೆ ಗಿಡಗಳೆಲ್ಲವೂ ವಾಣಿಜ್ಯ ಬೆಳೆಗಳಾಗಿವೆ.
ಬೇಲಿಯಲ್ಲಿರುವ ಪ್ರತಿಗಿಡವೂ ಆದಾಯ ತರುತ್ತಿವೆ. ವರ್ಷಕ್ಕೆ ಹಲವಾರು ಕ್ವಿಂಟಲ್ ಸೀಗೆಕಾಯಿ, ಬೋರೆ ಹಣ್ಣು, ಬೇವಿನ ಬೀಜ, ಹುಣಸೆ ಹಣ್ಣು ಸಿಗುತ್ತಿದೆ ಎಂದು ಹೇಳುತ್ತಾರೆ. ಜಿಲ್ಲಾ ಸಾವಯವ ಕೃಷಿ ಪರಿವಾರ ಸಮಿತಿ ಸದಸ್ಯರಾಗಿರುವ ವೆಂಕಟೇಶ್ ಈ ಭಾಗದ ಮಾದರಿ ರೈತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.