ADVERTISEMENT

ಬಿದ್ದ ಬೆಳೆಯ ಮೇಲೆ ಎದ್ದ ಬೆಳೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 10:40 IST
Last Updated 7 ಸೆಪ್ಟೆಂಬರ್ 2011, 10:40 IST

ಶ್ರೀನಿವಾಸಪುರ: ತಾಲ್ಲೂಕಿನ ರೈತರು ಕಡಿಮೆ ಬಂಡವಾಳದಿಂದ ಹೆಚ್ಚು ಲಾಭ ಗಳಿಸುವ ವಿಧಾನಗಳತ್ತ ವಾಲು ತ್ತಿದ್ದಾರೆ. ಮುಗಿದ ಟೊಮೆಟೊ ತೋಟ ದಲ್ಲಿ ಉಳುಮೆ ಮಾಡದೆ ಬೀನ್ಸ್, ಹೀರೆ, ಸೋರೆ ಅಂತಹ ಬೆಳೆ ಬೆಳೆಯುತ್ತಿರುವುದು ಇದಕ್ಕೆ ಉತ್ತಮ ನಿದರ್ಶನ.

ಈ ಬಾರಿ ಟೊಮೆಟೊ ಬೆಲೆ ಕೈಕೊಟ್ಟಿದೆ. ಈ ಪರಿಸ್ಥಿತಿಯಲ್ಲಿ ತೋಟ ಉಳುಮೆ ಮಾಡಿ ಬೆಳೆ ಇಡುವುದು ಹೆಚ್ಚಿನ ಸಂಖ್ಯೆಯ ರೈತರಿಗೆ ಆಗದ ಮಾತು. ಹಾಗಾಗಿ ಅವರು ಟೊಮೆಟೊಗೆ ನೆಟ್ಟ ಆಧಾರ ಕೋಲು ಬಳಸಿಕೊಂಡು ಬೀನ್ಸ್ ಮತ್ತು ಹೀರೆಕಾಯಿ ಬಿತ್ತನೆ ಮಾಡಿದ್ದಾರೆ.

ಟೊಮೆಟೊ ಮುಗಿಯುವುದಕ್ಕೆ ತುಸು ಮೊದಲೇ ಬಿತ್ತನೆ ಮಾಡುವುದರಿಂದ, ಟೊಮೆಟೊ ಮುಗಿದು ಗಿಡ ಸಾಯುವ ಹೊತ್ತಿಗೆ ಬಳ್ಳಿ ಹಬ್ಬುತ್ತದೆ. ಇವು ಕಡಿಮೆ ಅವಧಿಯ ತರಕಾರಿ ಬೆಳೆಗಳಾಗಿರುವುದರಿಂದ ಬೇಗ ಫಸಲಿಗೆ ಬರುತ್ತವೆ. ಮಾರುಕಟ್ಟೆಯಲ್ಲಿ ಒಳ್ಳೆ ಬೆಲೆ ಸಿಕ್ಕಿದರೆ ನಾಲ್ಕು ಕಾಸು ಸಿಗುತ್ತದೆ. ಬೆಲೆ ಕುಸಿತ ಉಂಟಾದರೂ ನಷ್ಟದ ಮಾತು ಬರುವುದಿಲ್ಲ.

ಈ ವಿಧಾನದಲ್ಲಿ ಶ್ರಮದ ಉಳಿತಾಯ ಇದೆ. ಟೊಮೆಟೊಗೆ ಸಾಕಷ್ಟು ಗೊಬ್ಬರ ನೀಡಿರುವುದರಿಂದ  ಉಪ ಬೆಳೆಗಳು ಗೊಬ್ಬರ ನೀಡದಿದ್ದರೂ ಹುಲುಸಾಗಿ ಬೆಳೆಯುತ್ತವೆ. ಇರುವ ಆಧಾರ ಕಡ್ಡಿಗಳೇ ಬಳಕೆಯಾಗುವುದರಿಂದ ಕಡ್ಡಿ ಕೀಳುವ ಮತ್ತು ಮತ್ತೆ ನೆಟ್ಟು ಕಟ್ಟುವ ಖರ್ಚು ಉಳಿಯುತ್ತದೆ. ಕಾಲಕ್ಕೆ ತಕ್ಕಂತೆ ಬದಲಾಗದಿದ್ದರೆ ಬದುಕು ಕಷ್ಟ ವಾಗುತ್ತದೆ ಎಂದು ರೈತರು ಹೇಳುತ್ತಾರೆ. 

ಹಿಪ್ಪುನೇರಳೆ ನಾಟಿ ಮಾಡುವ ರೈತರು, ಸಸಿಗಳನ್ನು ನಾಟಿ ಮಾಡಿ ಅದರ ಮಧ್ಯದಲ್ಲಿ ಒಂದು ಬೆಳೆ ಟೊಮೆಟೊ ಬೆಳೆಯುತ್ತಿದ್ದಾರೆ. ಟೊಮೆಟೊ ಬೆಳೆ ಯಲ್ಲಿ ಮಿಶ್ರ ಬೆಳೆ ಗಳನ್ನು ಬೆಳೆ ಯುವುದನ್ನೂ ರೂಢಿಸಿ ಕೊಂಡಿದ್ದಾರೆ. ಹಾಗೆ ಮಾಡುವುದರಿಂದ ಬೆಳೆಗೆ ಹಾಕುವ ಬಂಡವಾಳ ಕಡಿಮೆಯಾಗಿ ನಾಲ್ಕು ಕಾಸು ಕೈಗೆ ಬರಬಹುದು ಎಂದು ನಂಬಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.