ADVERTISEMENT

ಬೀಡಿ ಕಾರ್ಮಿಕರಿಗೆ ಶೀಘ್ರ ನಿವೇಶನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 5:30 IST
Last Updated 7 ಅಕ್ಟೋಬರ್ 2011, 5:30 IST

ಮುಳಬಾಗಲು: ಪಟ್ಟಣದ ನಿವೇಶನ ರಹಿತ ಬೀಡಿ ಕಾರ್ಮಿಕರಿಗೆ ಸಂಘದಿಂದ ಅತಿ ಶೀಘ್ರದಲ್ಲಿಯೇ ಉಚಿತ ನಿವೇಶನ ನೀಡುವುದಾಗಿ ಪುರಸಭೆ ಅಧ್ಯಕ್ಷ ಡಾ.ರಹಮತುಲ್ಲಾ ಖಾನ್ ಹೇಳಿದರು.

ಪಟ್ಟಣದ ಶಹಬಾಜ್ ಕಲ್ಯಾಣ ಮಂಟಪದಲ್ಲಿ ಈಚೆಗೆ ನಡೆದ ಬೀಡಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘದ  ಸದಸ್ಯರ ಸಭೆಯಲ್ಲಿ ಮಾತನಾಡಿದರು.

 ಪಟ್ಟಣದಲ್ಲಿ ಬಹುತೇಕ ಬೀಡಿ ಕಾರ್ಮಿಕರು ಅರ್ಥಿಕವಾಗಿ ಹಿಂದುಳಿದಿದ್ದು, ಬಡ ಬೀಡಿ ಕಾರ್ಮಿಕರಿಗೆ ಸಂಘದಿಂದ ನಿವೇಶನ ಖರೀದಿಸಿ ಉಚಿತವಾಗಿ ಹಂಚಲಾಗುವುದೆಂದರು. ಈ ಸಂಬಂಧ ಸರ್ವೇ ನಂಬರ್ 768 ಮತ್ತು 824ರಲ್ಲಿ ನಾಲ್ಕು ಎಕರೆ ಜಮೀನು ಸಂಘಕ್ಕೆ ಕ್ರಯ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕ ಷಬೀರ್ ಅಹಮದ್ ಸರ್ಕಾರ್ ಮಾತನಾಡಿ, ತಾಲ್ಲೂಕಿನಲ್ಲಿ ಹಲವು ವರ್ಷದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಬೀಡಿ ತಯಾರಿಸುವ ಕಸುಬನ್ನು ಅವಲಂಭಿಸಿದ್ದು ಸಂಘ ಬೀಡಿ ಕಾರ್ಮಿಕರ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲು ಒತ್ತಾಯಿಸಿದರು.

ಬೀಡಿ ಸಂಘದ ಆಡಳಿತಾಧಿಕಾರಿ ಕೆ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಆಡಳಿತಾಧಿಕಾರಿ ಹೈದರ್ ಅಲಿಖಾನ್, ಮಲ್ಲಿಕಾ ಬೇಗಂ, ಅಮೀರ್‌ಸಾಬ್, ಎ.ಇಕ್ಬಾಲ್, ಕೆ.ಬಾಬು. ಬಷೀರ್ ಖಾನ್, ಜಬೀವುಲ್ಲಾ, ಅಸಿಫ್ ಪಾಷ, ಜಹೀರ್‌ಪಾಷ, ರಿಯಾಜ್‌ಪಾಷ, ನೂಗಲಬಂಡೆ ಬಾಬು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.