ADVERTISEMENT

ಭೋವಿ ಜನಾಂಗಕ್ಕೆ ಪ್ರಾತಿನಿಧ್ಯ: ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 9:44 IST
Last Updated 21 ಡಿಸೆಂಬರ್ 2012, 9:44 IST
ಮುಳಬಾಗಲು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷ ಭೋವಿ ಜನಾಂಗಕ್ಕೆ ಪ್ರಾತಿನಿಧ್ಯ ನೀಡಿದರೆ, ನಾವೆಲ್ಲ ಒಗ್ಗಟ್ಟಾಗಿ ಜನಾಂಗದ ಅಭ್ಯರ್ಥಿಯನ್ನು ಗೆಲ್ಲಿಸಲು ಬದ್ಧವಾಗಿದ್ದೇವೆ ಎಂದು ಭೋವಿ ಜನಾಂಗದ ಮುಖಂಡರು ಗುರುವಾರ ಇಲ್ಲಿ ಹೇಳಿದರು.

ಪಟ್ಟಣದ ಪಿ.ಎಲ್.ಡಿ ಬ್ಯಾಂಕ್ ಆವರಣದಲ್ಲಿ ಜನಾಂಗದ ಮುಖಂಡರು ಸಭೆ ಸೇರಿದ್ದರು. ತಾಲ್ಲೂಕಿನಲ್ಲಿ ಭೋವಿ ಜನಾಂಗದ ಜನಸಂಖ್ಯೆ 18ರಿಂದ 20 ಸಾವಿರದಷ್ಟಿದೆ. ಈವರೆಗೂ ಯಾವುದೇ ಪಕ್ಷ ಜನಾಂಗದ ಮುಖಂಡರೊಬ್ಬರಿಗೆ ಬಿ ಫಾರಂ ನೀಡಿಲ್ಲ. ಆದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಭೋವಿ ಜನಾಂಗದವರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಭೋವಿ ಜನಾಂಗದ ಮುಖಂಡರಾದ ಗುಡಿಸಿಂಟಿ ರಾಮನ್ನ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾರಪ್ಪ, ತಾಲ್ಲೂಕು ಭೂಬ್ಯಾಂಕ್ ಉಪಾಧ್ಯಕ್ಷ ಗಟ್ಟಪ್ಪ ಮಾತನಾಡಿ, ನಮ್ಮ ಸಮುದಾಯದ ವ್ಯಕ್ತಿಯೊಬ್ಬರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ, ನಾವೆಲ್ಲ ಸೇರಿ ಅವರ ಗೆಲುವಿಗೆ ಶ್ರಮಿಸುತ್ತೇವೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ವರಿಷ್ಠರೊಂದಿಗೆ ಈಗಾಗಲೆ ಮಾತನಾಡಿದ್ದೇವೆ.

ನಮ್ಮ ಜನಾಂಗಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಒಂದು ವೇಳೆ ಯಾವುದೇ ಪಕ್ಷ ನಮ್ಮ ಮನವಿ ಪುರಸ್ಕರಿಸದಿದ್ದರೆ ಜನಾಂಗದ ತಾಲ್ಲೂಕು ಸಮಾವೇಶ ಕರೆದು, ಭೋವಿ ಜನಾಂಗದ ಒಮ್ಮತದ ಅಭ್ಯರ್ಥಿಯೊಬ್ಬರನ್ನು ಆರಿಸುತ್ತೇವೆ. ಸ್ವತಂತ್ರವಾಗಿ ಸ್ಪರ್ಧಿಸುವ ಅವರನ್ನು ಬೆಂಬಲಿಸುತ್ತೇವೆ ಎಂದರು. 

ಪದಕಾಷ್ಟಿ ವೆಂಕಟಮುನಿ, ಗೊಲ್ಲಹಳ್ಳಿ ಚಿಕ್ಕಯಲ್ಲಪ್ಪ, ಗಟ್ಟಪ್ಪ, ಕೀಲುಹೊಳಲಿ ಚಂಗಲರಾಯಪ್ಪ, ಕೆರಸಮಂಗಲ ವೆಂಕಟರಾಮ್, ಅಂಬ್ಲಿಕಲ್ ವೆಂಕಟಪತಿ, ಸಿ.ಪಿ.ಐ ರಾಧಾಕೃಷ್ಣ, ಚಾಮರೆಡ್ಡಿಹಳ್ಳಿ ನಾಗರಾಜ್, ರೆಡ್ಡಪ್ಪ, ಮಲ್ಲನಾಯಕನಹಳ್ಳಿ ನಾರಾಯಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.