ಕೆಜಿಎಫ್: ಸಮೀಪದ ಕ್ಯಾಸಂಬಳ್ಳಿಯಲ್ಲಿ ಹಿಂದೂಗಳಿಗೆ ಆಮಿಷವೊಡ್ಡಿ ಮತಾಂತರ ಮಾಡಲು ಯತ್ನಿಸಿದ್ದ ಹನ್ನೊಂದು ಮಂದಿಗೆ ನಗರದ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
2007ರ ಮೇ ತಿಂಗಳಿನಲ್ಲಿ ಕ್ಯಾಸಂಬಳ್ಳಿ ಗ್ರಾಮದ ಬಳಿ ಸಭೆ ನಡೆಸಿದ ಕ್ರಿಶ್ಚಿಯನ್ ಮಿಷನರಿ, ಹಿಂದೂ ದೇವತೆಗಳಾದ ರಾಮ, ಕೃಷ್ಣ ಮತ್ತು ತಿರುಪತಿ ವೆಂಕಟರಮಣ ಸ್ವಾಮಿಯನ್ನು ನಂಬದೆ ಯೇಸುವನ್ನು ನಂಬಬೇಕು ಎಂದು ಪ್ರಚಾರ ಮಾಡುತ್ತಿದ್ದರು. ಪ್ರಚಾರದ ಸಮಯದಲ್ಲಿ ಗ್ರಾಮಸ್ಥರಿಗೆ ವಿತರಣೆ ಮಾಡಲು ಸ್ಟೀಲ್ ತಟ್ಟೆ, ಬಿಸ್ಕತ್, ಬಟ್ಟೆ ಮತ್ತು ಚಾಕಲೇಟ್ಗಳನ್ನು ವಿತರಣೆ ಮಾಡಿದ್ದರು. ಅವರ ಕೃತ್ಯವನ್ನು ಪ್ರಶ್ನಿಸಿದ ಪುರುಷೋತ್ತಮ ಎಂಬುವರ ಮೇಲೆ ಅಪರಾಧಿಗಳು ಹಲ್ಲೆ ನಡೆಸಿದ್ದರು.
ಈ ಸಂಬಂಧವಾಗಿ ಆಂಡರಸನ್ಪೇಟೆ ಪೊಲೀಸರು ಬೆಂಗಳೂರಿನ ಕಾಕ್ಸ್ಟೌನ್ ಪೀಟರ್ ಚರ್ಚ್ನ ರೋಡ್ರಿಕ್ಸ್, ಬಂಗಾರಪೇಟೆ ತಾಲ್ಲೂಕಿನ ಮುಗಬೆಲೆ ಗ್ರಾಮದ ಎಸ್.ಎಂ.ಬಾಬು, ಆಂಡರಸನ್ಪೇಟೆ ಗೋಣಮಾಕನಹಳ್ಳಿಯ ಪಿ.ವಿಜಯಕುಮಾರಿ, ಜಸಿಂತ, ಪಿ.ಸಾಮ್ಯುಲ್, ಎಲಿಜಬತ್, ಎಸ್. ಜಾಕ್ಲಿನ್, ಪಿ.ಶೈಲಾ, ಪೀಟರ್ ಚರ್ಚ್ನ ರಾಜ, ಜಯಶೀಲಿ, ಆರ್.ಅಲೆನ್ ಮೋಸಸ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದರು.
ಪ್ರಕರಣದ ತನಿಖೆ ನಡೆಸಿದ ಆಂಡರಸನ್ಪೇಟೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕೆ.ವಿ.ವಿಶ್ವನಾಥ್ ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಗೋಪಾಲಕೃಷ್ಣ, ಸೋಮವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.
ಎಲ್ಲಾ ಆರೋಪಿಗಳಿಗೂ ತಲಾ ಒಂದು ವರ್ಷ ಸಾದಾ ಸಜೆ ಮತ್ತು ತಲಾ ಮೂರು ಸಾವಿರ ರೂಪಾಯಿ ಜುಲ್ಮಾನೆ, ಒಂದು ಮತ್ತು ಎರಡನೇ ಅಪರಾಧಿಗಳಾದ ರೋಡ್ರಿಕ್ಸ್, ಎಸ್.ಎಂ.ಬಾಬುಗೆ ಹೆಚ್ಚುವರಿಯಾಗಿ ಆರು ತಿಂಗಳು ಶಿಕ್ಷೆ ಹಾಗೂ ಹೆಚ್ಚುವರಿಯಾಗಿ ತಲಾ ಮೂರು ಸಾವಿರ ರೂಪಾಯಿ ಜುಲ್ಮಾನೆ ವಿಧಿಸಿದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಜಗದೀಶಕುಮಾರ್ ವಾದ ಮಂಡಿಸಿದ್ದರು.
ಇನ್ಸ್ಪೆಕ್ಟರ್ ವಿರುದ್ಧ ತನಿಖೆ
ಬಂಗಾರಪೇಟೆ: ಸುಳ್ಳು ದಾಖಲೆ ಸೃಷ್ಟಿಸಿ ಅಪಘಾತಕ್ಕೆ ಸಂಬಂಧಿಸಿದ ಪ್ರಕರಣ ದಾಖಲು ಮಾಡಿದ ಆರೋಪದ ಮೇಲೆ ಬಂಗಾರಪೇಟೆ ವೃತ್ತದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಸರ್ಕಲ್ ಇನ್ಸ್ ಪೆಕ್ಟರ್ ಎ.ಜೆ.ಕಾರಿಯಪ್ಪ ವಿರುದ್ಧ ಸಿಐಡಿ ತನಿಖೆ ನಡೆಸಲು ಹೈಕೋರ್ಟ್ ತೀರ್ಪು ನೀಡಿದೆ.
2005ರ ಜನವರಿ ತಿಂಗಳಲ್ಲಿ ಪಟ್ಟಣದ ಲೋಕೋಪಯೋಗಿ ಇಲಾಖೆ ಅತಿಥಿಗೃಹದ ಬಳಿ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಈ ಸಂಬಂಧ ಚಾಲಕ ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಅಪಘಾತ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ್ದ ಅಂದಿನ ಪೊಲೀಸ್ ಇನ್ಸ್ ಪೆಕ್ಟರ್ ಎ.ಜೆ.ಕಾರಿಯಪ್ಪ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದರು ಎಂದು ದೂರಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಮತ್ತು ಎಚ್.ಎಸ್.ಕೆಂಪಣ್ಣ, ಇನ್ಸ್ ಪೆಕ್ಟರ್ ವಿರುದ್ಧ ದೂರು ದಾಖಲು ಮಾಡಿಕೊಂಡು ಸಿಐಡಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.
ಗ್ರಾಹಕನ ಮೇಲೆ ಹಲ್ಲೆ
ಕೆಜಿಎಫ್: ಶೀಘ್ರವಾಗಿ ಕ್ಷೌರ ಮಾಡಲು ಒತ್ತಾಯಿಸಿದ ಗ್ರಾಹಕನ ಕುತ್ತಿಗೆಗೆ ಕ್ಷೌರಿಕ ರೇಜರ್ನಿಂದ ಗಾಯಗೊಳಿಸಿದ ಘಟನೆ ಸೋಮವಾರ ನಗರದ ಆಂಡರಸನ್ಪೇಟೆಯಲ್ಲಿ ನಡೆದಿದೆ.
ಗಾಯಗೊಂಡ ಕೇಶವರಾವ್ (50) ಅವರನ್ನು ರಾಬರ್ಟ್ಸನ್ಪೇಟೆಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಕ್ಷೌರದ ಅಂಗಡಿಗೆ ಹೋದ ಕೇಶವರಾವ್ ಶೇವಿಂಗ್ ಮಾಡಿಸಿಕೊಳ್ಳುತ್ತಿದ್ದರು.
ಕೆಲಸದ ನಿಮಿತ್ತ ಬೇರೆಡೆ ಹೋಗಬೇಕು, ಶೀಘ್ರವಾಗಿ ಕ್ಷೌರ ಮಾಡುವಂತೆ ತಿಳಿಸಿದ್ದಾರೆ. ಇದರಿಂದ ಕುಪಿತನಾದ ದಯಾಕರ, ಶೇವಿಂಗ್ ಮಾಡುತ್ತಿದ್ದ ರೇಜರ್ನಿಂದ ಅವರ ಕುತ್ತಿಗೆಯ ಬಲ ಭಾಗವನ್ನು ಗಾಯಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಯನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಆಂಡರಸನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.