ADVERTISEMENT

ಮುಗಿಲು ಮುಟ್ಟಿದ ರೋದನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 8:55 IST
Last Updated 17 ಜನವರಿ 2011, 8:55 IST

ಮಾಲೂರು : ಶಬರಿಮಲೆಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ದುರಂತಕ್ಕೆ ಬಲಿಯಾದವರಲ್ಲಿ ತಾಲ್ಲೂಕಿನ ಚೊಕ್ಕಂಡಹಳ್ಳಿ ಗ್ರಾಮದ ಮಂಜುನಾಥ್ (30) ಅವರು ಕೂಡಾ ಒಬ್ಬರಾಗಿದ್ದಾರೆ.ತನ್ನ ಭಾವಮೈದ ಚೆನ್ನಪ್ಪನ ಜೊತೆ ಮೊದಲನೇ ಬಾರಿಗೆ ಮಂಜುನಾಥ್ ಅಯ್ಯಪ್ಪನ ಜ್ಯೋತಿ ದರ್ಶನಕ್ಕೆ ತೆರಳಿದ್ದರು. ಅಯ್ಯಪ್ಪ ಜ್ಯೋತಿ ದರ್ಶನಕ್ಕೆ ಕರೆದುಕೊಂಡು ಹೋಗುವಂತೆ ಚೆನ್ನಪ್ಪ ಅವರಿಗೆ ಒತ್ತಡ ಹಾಕುತ್ತಿದ್ದ ಮಂಜುನಾಥ ಈ ಬಾರಿ ಮೇಡಹಳ್ಳಿಯಲ್ಲಿ ಮಾಲೆ ಧರಿಸಿದ 25 ಮಂದಿ ಗುಂಪಿನಲ್ಲಿ ಇವರು ಸಹ ಒಬ್ಬರಾಗಿದ್ದರು.  

ಶುಕ್ರವಾರ ಸಂಜೆ ಪುಲ್ಲುಮೇಡು ಕಡೆಯಿಂದ ಜ್ಯೋತಿ ದರ್ಶನ ಪಡೆದು ತಮ್ಮ ವಾಹನಗಳತ್ತ ಧಾವಿಸಿದ ಸಂದರ್ಭದಲ್ಲಿ ಏನಾಗುತ್ತಿದೆ ಎಂದು ತಿಳಿಯುವ ವೇಳೆಗೆ ಜನ ದಿಕ್ಕಾಪಾಲಾಗಿ ಓಡುವುದು ಗಮನಕ್ಕೆ ಬಂದಿತು. ಕಣ್ಣಮುಂದೆಯೇ ಕ್ಷಣಮಾತ್ರದಲ್ಲಿ ಮಂಜುನಾಥ್ ಕಾಲ್ತುಳಿತಕ್ಕೆ ಬಲಿಯಾದುದನ್ನು ಕರಾಳ ನೆನಪಿಸಿಕೊಂಡು  ಚೆನ್ನಪ್ಪ ಮೌನವಾದರು.

ಮಂಜುನಾಥ್ ಪಟ್ಟಣದ ಪೆಟ್ರೋಲ್ ಬಂಕ್‌ವೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮೃತರ ಮನೆಯಲ್ಲಿ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರ ರೋದನ ಮುಗಿಲು ಮುಟ್ಟಿದೆ.ಮಂಜುನಾಥ ಅವರ ಮೃತ ದೇಹವನ್ನು ಸ್ವಗ್ರಾಮಕ್ಕೆ ಭಾನುವಾರ ಬೆಳಿಗ್ಗೆ ತರಲಾಗಿದೆ.ಪತ್ನಿ ,ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ  ಇದ್ದಾರೆ.

ತಾಲ್ಲೂಕು ಆಡಳಿತ ವತಿಯಿಂದ ಮೃತರ ಶವಸಂಸ್ಕಾರಕ್ಕೆ ಒಂದು ಸಾವಿರ ರೂ. ಪರಿಹಾರ ನೀಡಿದೆ.ಜಿ.ಪಂ. ಸದಸ್ಯೆ ಎಲ್ಲಮ್ಮ, ತಾ.ಪಂ. ಸದಸ್ಯ ಎಸ್.ವಿ.ಲೋಕೇಶ್, ಕೆ.ಪಿ.ಸಿ.ಸಿ ಮಾಜಿ ಸದಸ್ಯ ಎಸ್.ಎನ್.ರಘುನಾಥ್, ಮಡಿವಾಳ ಗ್ರಾ.ಪಂ ಅಧ್ಯಕ್ಷ ಬಾಬು ಸಿಂಗ್, ಸದಸ್ಯ ಪಿ.ಚಂದ್ರಶೇಖರ್, ಕಾಂಗ್ರೆಸ್ ಮುಖಂಡ ವೆಂಕಟೇಶ್ ಮೃತರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.