ADVERTISEMENT

ಶಾಶ್ವತ ನೀರಾವರಿಗಾಗಿ ಮತದಾನ ಬಹಿಷ್ಕಾರ ಸಂಕಲ್ಪ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 9:11 IST
Last Updated 4 ಮಾರ್ಚ್ 2014, 9:11 IST

ಶ್ರೀನಿವಾಸಪುರ: ಸರ್ಕಾರ ಎತ್ತಿನ ಹೊಳೆಯಿಂದ ಶಾಶ್ವತ ನೀರಾವರಿ ಒದಗಿಸುವ ನಾಟಕವಾಡುತ್ತಿದೆ. ಲೋಕ­ಸಭಾ ಚುನಾವಣೆಯನ್ನು ದೃಷ್ಟಿ­ಯಲ್ಲಿಟ್ಟುಕೊಂಡು ಚಿಕ್ಕಬಳ್ಳಾಪುರದಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಚಾಂಪಲ್ಲಿ ಗ್ರಾಮದ ರೈತ ಮುಖಂಡ ಟಿ.ಎಸ್‌.ವೆಂಕಟಾಚಲಪತಿ ಆಪಾದಿಸಿದರು.

ತಾಲ್ಲೂಕಿನ ಚಾಂಪಲ್ಲಿ ಗ್ರಾಮಸ್ಥರು ಪರಮಶಿವಯ್ಯ ವರದಿಗೆ ಆಗ್ರಹಿಸಿ ಸೋಮ­ವಾರ ಪಟ್ಟಣಕ್ಕೆ ಬಂದು ಕಾಲ್ನಡಿಗೆ­­ಯಲ್ಲಿ ಮೆರವಣಿಗೆ ನಡೆಸಿದ ಸಂದರ್ಭ­ದಲ್ಲಿ ಬಸ್‌ ನಿಲ್ದಾಣದ ಸಮೀಪ ಸಾರ್ವ­ಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಎತ್ತಿನ ಹೊಳೆ­ಯಲ್ಲಿ ಶಾಶ್ವತ ನೀರಾವರಿಗೆ ಅಗತ್ಯ­ವಾದ ನೀರಿನ ಲಭ್ಯತೆ ಇಲ್ಲವೆಂದು ತಜ್ಞರು ಹೇಳಿದ್ದರೂ ಸರ್ಕಾರ ಅದನ್ನು ಕೇಳಿಸಿಕೊಳ್ಳುತ್ತಿಲ್ಲ ಎಂದು ಹೇಳಿದರು.

ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಒದ­ಗಿಸಲು ಪರಮಶಿವಯ್ಯ ವರದಿ ಅಂತಿಮ. ಅದನ್ನು ಹೊರತುಪಡಿಸಿ ಬೇರೆ ಕಡೆಯಿಂದ ನೀರು ತರುವುದನ್ನು ಒಪ್ಪುವುದಿಲ್ಲ. ಶುದ್ಧ ಕುಡಿಯುವ ನೀರಿಗೂ ಪರಿತಪಿಸುತ್ತಿರುವ ಜನರಿಗೆ ನೀರು ಕೊಡುವುದು ಸರ್ಕಾರದ ಪ್ರಾಥ­ಮಿಕ ಕರ್ತವ್ಯ. ಆದರೆ ಕಾರ್ಯ­ಸಾಧು­ವಲ್ಲದ ಯೋಜನೆಗಳಿಗೆ ಹಣ ವ್ಯಯಿಸು­ವುದು ಸರಿಯಲ್ಲ ಎಂದು ಹೇಳಿದರು.

ಪರಮಶಿವಯ್ಯ ವರದಿಯಂತೆ ಶಾಶ್ವತ ನೀರಾವರಿ ಯೋಜನೆ ಜಾರಿ­ಗೊಳಿಸುವ ವರೆಗೆ ಚಾಂಪಲ್ಲಿ ಗ್ರಾಮ­ಸ್ಥರು ಯಾವುದೇ ಸಾರ್ವತ್ರಿಕ ಚುನಾ­ವಣೆಯಲ್ಲಿ ಮತ ಚಲಾಯಿಸದಿರುಲು ನಿರ್ಧರಿಸಿದ್ದಾರೆ. ಚುನಾವಣೆ ಬಹಿಷ್ಕಾರ ನಿರ್ಧಾರ ಅಚಲ. ಇದು ಸಾಂಘಿಕವಾಗಿ ಕೈಗೊಂಡಿರುವ ನಿರ್ಧಾರವಾಗಿದೆ. ಜನ ಪ್ರತಿನಿಧಿಗಳು ಈ ನಿರ್ಧಾರನ್ನು ಪಕ್ಷಾ­ತೀತ­ವಾಗಿ ಬೆಂಬಲಿಸಬೇಕು. ಪರಮ­ಶಿವಯ್ಯ ವರದಿ ಜಾರಿಗೆ ಬೆಂಬಲ ನೀಡ­ಬೇಕು ಎಂದು ಮನವಿ ಮಾಡಿದರು.  

ಮುಖಂಡ ನೀಲಟೂರು ಚಂದ್ರ­ಶೇಖರ್‌ ಮಾತನಾಡಿ, ಯಾವುದೇ ಚಳವಳಿ ಯಶಸ್ವಿಯಾಗಲು ಸಾರ್ವ­ಜನಿಕರ ಪಾತ್ರ ಹಿರಿದು. ಮುಖಂಡರನ್ನೇ ನಂಬಿ ಕೂತರೆ ಸಮಸ್ಯೆ ಬಗೆಹರಿಯು­ವುದಿಲ್ಲ. ಸರ್ಕಾರದ ಮೇಲೆ ಬಲವಾದ ಒತ್ತಡ ಹಾಕಬೇಕು. ಸಮಸ್ಯೆ ಕಡೆ ಗಮನ ಹರಿಸುವಂತೆ ಮಾಡಬೇಕು. ಅದಕ್ಕೆ ಸಮಾಜದ ಎಲ್ಲ ವರ್ಗದ ಜನರ ಬೆಂಬಲ ಅಗತ್ಯ ಎಂದು ಹೇಳಿದರು.

ಗ್ರಾಮದ ಮುಖಂಡರಾದ ಸಿ.­ಎನ್‌.ನಾರಾಯಣಸ್ವಾಮಿ, ಜಿ.ಕೃಷ್ಣಪ್ಪ, ಸಿ.ವಿ.ನಾರಾಯಣಸ್ವಾಮಿ, ಶ್ರೀನಿವಾಸ್‌, ಎಸ್‌.ಚೌಡರೆಡ್ಡಿ,  ವಿಜಯಮ್ಮ, ರತ್ನಮ್ಮ, ಕಸ್ತೂರಮ್ಮ, ಸರೋಜಮ್ಮ, ಮುನಿಯಮ್ಮ ಮತ್ತಿತರರು ಜಾಥಾ ನೇತೃತ್ವ ವಹಿಸಿದ್ದರು.
ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಾಲ್ಲೂಕು ಕಚೇರಿ ಅಧಿಕಾರಿ ನಾರಾಯಣರೆಡ್ಡಿ ಅವರಿಗೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.