ADVERTISEMENT

ಶೈಕ್ಷಣಿಕ ಮಾರ್ಗದರ್ಶಿ ಪಾತ್ರ ಮುಖ್ಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 8:50 IST
Last Updated 6 ಜನವರಿ 2012, 8:50 IST

ಕೋಲಾರ: ಸರ್ಕಾರದ ಕಾರ್ಯಕ್ರಮದ ಅನುಷ್ಠಾನದಲ್ಲಿ ಶೈಕ್ಷಣಿಕ ಮಾರ್ಗದರ್ಶಿ ಪಾತ್ರ ಮಹತ್ತರವಾದದ್ದು ಎಂದು ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಕ ಕೆ.ಪಿ.ಹನುಮಂತರಾಯಪ್ಪ ಹೇಳಿದರು.

ತಾಲ್ಲೂಕಿನ ಕದರೀಪುರದಲ್ಲಿ ಈಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಕ್ಷೇತ್ರ ಸಂಪನ್ಮೂಲ ಕೇಂದ್ರ ಏರ್ಪಡಿಸಿದ್ದ ತಾಲ್ಲೂಕು ಸಂಪನ್ಮೂಲ ತಂಡದ ಸಭೆಯಲ್ಲಿ ಅವರು ಮಾತನಾಡಿದರು.

 ಶೈಕ್ಷಣಿಕ ಪ್ರಗತಿ ಪರಿಶೀಲನೆ ಮಾಡುವಾಗ ವಿದ್ಯಾರ್ಥಿಯ ಮಾನಸಿಕ, ಶಾರೀರಿಕ, ಪಠ್ಯ-ಪಠ್ಯೇತರ ವಲಯಗಳ ಬಗ್ಗೆಯೂ ಚಿಂತನೆ ನಡೆಸಬೇಕು. ಪ್ರತಿ ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಗೆ ಕಾರ್ಯಯೋಜನೆ ಮಾಡಿ ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು.

ಪ್ರತಿ ಮಗುವಿನಲ್ಲೂ ವಿಶಿಷ್ಟ ಪ್ರತಿಭೆ ಇರುತ್ತದೆ. ಅದಕ್ಕಾಗಿ ಕ್ಲಸ್ಟರ್ ಮಟ್ಟದಲ್ಲಿ ಮಾಗಝೈನ್, ಪ್ರತಿಭಾ ಕಾರಂಜಿ, ರಸಪ್ರಶ್ನೆ, ಸಮಾಲೋಚನಾ ಸಭೆಯಂತಹ ಕಾರ್ಯಗಳಲ್ಲಿ ಅವಕಾಶ ನೀಡಬೇಕು. ಆಗ ವಿದ್ಯಾರ್ಥಿಯಲ್ಲಿ ಉತ್ಕೃಷ್ಟ ಕಲಿಕೆ ಕಾಣಬಹುದು ಎಂದರು.ಸಾರ್ವಜನಿಕ ಶಿಕ್ಷಣ ಇಲಾಖೆ (ಅಭಿವೃದ್ಧಿ) ಉಪನಿರ್ದೇಶಕ ಮಹಮದ್ ಬಷೀರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಜನವರಿ ಆರಂಭದಿಂದಲೇ ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ಸ್ಪಷ್ಟ ಓದು ಶುದ್ಧ ಬರಹ ಮೂಡಿಸಿ ಜ್ಞಾನದ ಸಂವೃದ್ಧಿ ಮಾಡಲು ಪ್ರಯತ್ನ ಸಾಗುತ್ತಿದೆ. ಅದಕ್ಕಾಗಿ ಪ್ರತಿ ನಾಲ್ಕೂ ಶಾಲೆಗಳಿಗೆ ಓರ್ವ ಶಿಕ್ಷಣ ಮಾರ್ಗದರ್ಶಿಯನ್ನು ನಿಯೋಜಿಸಲಾಗಿದೆ. ಎಲ್ಲ ಶಿಕ್ಷಕರ ಸಹಕಾರ ನೀಡಬೇಕು ಎಂದು ಕೋರಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಿವಲಿಂಗಯ್ಯ, ಶಿಕ್ಷಣ ಸಂಯೋಜಕರಾದ ರಾಮಚಂದ್ರಾರೆಡ್ಡಿ, ಸೊಣ್ಣಯ್ಯ, ರಂಜಿನಿ, ತಾಲ್ಲೂಕು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಉಷಾರಾಣಿ, ತಾಲ್ಲೂಕು ಸರ್ವಶಿಕ್ಷಣ ಅಭಿಯಾನ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಜಿ.ಶ್ರೀನಿವಾಸ್, ಅಶ್ವತ್ಥನಾರಾಯಣಪ್ಪ, ಫೀರ್ ಫಯಾಜ್ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು. ಮದ್ದೇರಿ ಸಿ.ಆರ್.ಪಿ. ವೆಂಕಟೇಶಪ್ಪ ಸ್ವಾಗತಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.