ADVERTISEMENT

ಸಂಸದರ ಮನೆ ರಸ್ತೆಗೇ ಡಾಂಬರಿಲ್ಲ!

ದೊಡ್ಡ ಹಳ್ಳಿಯಂತೆ ಕಾಣುವ ಕೋಲಾರ ಜಿಲ್ಲಾ ಕೇಂದ್ರ

​ಪ್ರಜಾವಾಣಿ ವಾರ್ತೆ
Published 20 ಮೇ 2014, 5:35 IST
Last Updated 20 ಮೇ 2014, 5:35 IST
ಸಂಸದ ಕೆ.ಎಚ್.ಮುನಿಯಪ್ಪ ಅವರ ಕೋಲಾರದ ಉದಯಗಿರಿ ಬಡಾವಣೆ­ಯಲ್ಲಿರುವ ಮನೆ ರಸ್ತೆಗೆ ಡಾಂಬರಿಲ್ಲ.
ಸಂಸದ ಕೆ.ಎಚ್.ಮುನಿಯಪ್ಪ ಅವರ ಕೋಲಾರದ ಉದಯಗಿರಿ ಬಡಾವಣೆ­ಯಲ್ಲಿರುವ ಮನೆ ರಸ್ತೆಗೆ ಡಾಂಬರಿಲ್ಲ.   

ಕೋಲಾರ: ‘7 ಬಾರಿ ಲೋಕಸಭೆ ಸದಸ್ಯ­ರಾಗಿ ಆಯ್ಕೆಯಾದ ಪ್ರಭಾವಿ ರಾಜ­ಕಾರಣಿ ಇರುವ ಪ್ರದೇಶ. ಆದರೆ ಇಲ್ಲಿನ ರಸ್ತೆಗಳಿಗೆ ಡಾಂಬರೇ ಇಲ್ಲ. ಮಣ್ಣಿನ ರಸ್ತೆಗಳಲ್ಲೇ ಓಡಾಡುತ್ತಿದ್ದೇವೆ. ನೀರಿನ ಸಮಸ್ಯೆಯೂ ಕಡಿಮೆ ಏನಿಲ್ಲ...’

–ನಗರದ 15 ಮತ್ತು 16ನೇ ವಾರ್ಡ್‌­-­­ನಲ್ಲಿ ಹಂಚಿಹೋಗಿರುವ ಉದಯ­ಗಿರಿ ಬಡಾವಣೆಯ ಜನ ಅಸಮಾಧಾನದಿಂದ ಹೇಳುವ ಮಾತು­ಗಳಿವು. ಅವರ ಮಾತಿಗೆ ತಕ್ಕಂತೆಯೇ ಈ ಬಡಾವಣೆ ಕೊರತೆಗಳಿಂದ ಎದ್ದು ಕಾಣುತ್ತದೆ.

ಅದಕ್ಕೆ ಉತ್ತಮ ನಿದರ್ಶನವೆಂದರೆ, ಏಳನೇ ಬಾರಿ ಸತತವಾಗಿ ಲೋಕಸಭೆಗೆ ಆಯ್ಕೆಯಾದ ಮತ್ತು ಮೂರು ಬಾರಿ ಕೇಂದ್ರ ಸಚಿವರಾಗಿದ್ದ ಕೆ.ಎಚ್.ಮುನಿ­ಯಪ್ಪ ಅವರ ನಗರದ ಮನೆಯ ದಾರಿಗೆ ಈಗಲೂ ಡಾಂಬರು ಇಲ್ಲ. ಇನ್ನಾದರೂ ಅವರು ವಾಸವಿದ್ದಾರೆ ಎಂಬ ಕಾರಣಕ್ಕಾದರೂ ಉದಯಗಿರಿ ಬಡಾವಣೆ ಅಭಿವೃದ್ಧಿ ಆಗುವುದೇ ಎಂಬ ನಿರೀಕ್ಷೆಯಲ್ಲಿ ಇಲ್ಲಿನ ಜನ ಕಾಯುತ್ತಿದ್ದಾರೆ.
ಈ ಬಡಾವಣೆಯನ್ನು ಹಾದು­ಹೋಗುವ, ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ­ಯೊಂದನ್ನು ಹೊರತುಪಡಿಸಿದರೆ ಬೇರಾವ ರಸ್ತೆಗೂ ಡಾಂಬರು ಬಂದಿಲ್ಲ. ಸಂಸದರು ಬಂದಾಗಲೆಲ್ಲ ಈ ರಸ್ತೆಗಳಲ್ಲಿ ಬೆಂಬಲಿಗರು, ಪೊಲೀಸರ ವಾಹನಗಳು ಎಬ್ಬಿಸುವ ದೂಳು ಜನರ ತಾಳ್ಮೆಯನ್ನು ಪರೀಕ್ಷಿಸುತ್ತಲೇ ಇದೆ.

ಬಡಾವಣೆಯ ಮುಖ್ಯರಸ್ತೆಯ ಸ್ವಲ್ಪ ಭಾಗವನ್ನು ಮುನಿಯಪ್ಪನವರ ಸಂಬಂಧಿಕ­ರೊಬ್ಬರು ವರ್ಷಗಳಿಂದ ಒತ್ತುವರಿ ಮಾಡಿಕೊಂಡಿರುವುದನ್ನು ಸಂಪೂರ್ಣವಾಗಿ ತೆರವುಗೊಳಿಸಿ ಡಾಂಬರು ಕಾಮಗಾರಿ ಪೂರ್ಣಗೊಳಿ­ಸಲು ನಗರಭೆಗೆ ಇನ್ನೂ ಸಾಧ್ಯವಾಗಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಯೇ ನಗರಸಭೆ ಪೌರಾ­ಯುಕ್ತರಿಗೆ ನೀಡಿದ ಸೂಚನೆ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ.
ಚುನಾವಣೆ ಕೆಲವೇ ದಿನಗಳಿವೆ ಎನ್ನುವ ಸಂದರ್ಭದಲ್ಲಿ ನಗರಸಭೆ ವತಿಯಿಂದ ಮಣ್ಣಿನ ರಸ್ತೆಗಳಲ್ಲಿ ಮಣ್ಣು ಸುರಿದು ಹಳ್ಳ ಮುಚ್ಚಿದ್ದು ಬಿಟ್ಟರೆ ಅಭಿವೃದ್ಧಿ ಕೆಲಸವಾಗಲೇ ಇಲ್ಲ. ಚುನಾ­ವಣೆ ನೆಪದಲ್ಲಾದರೂ ನಮ್ಮ ರಸ್ತೆಗಳಿಗೆ ಡಾಂಬರು ಬರಬಹುದು ಎಂಬ ನಿರೀಕ್ಷೆ ಇತ್ತು. ಅದೂ ಆಗಲಿಲ್ಲ ಎನ್ನುತ್ತಾರೆ ನಿವಾಸಿಯೊಬ್ಬರು.

ಸಂಸದರೊಬ್ಬರು ನಗರಸಭೆ ಮೇಲೆ ಒತ್ತಡ ತಂದು ಬಡಾವಣೆಗಳನ್ನು ಅಭಿ­ವೃದ್ಧಿಪಡಿಸುವುದು ದೊಡ್ಡ ಕೆಲಸವೂ ಏನಲ್ಲ. ಆದರೂ ಅವರು ಏಕೆ ಮನಸು ಮಾಡಲಿಲ್ಲ ಎಂದು ಕೇಳುತ್ತಾರೆ ಮತ್ತೊಬ್ಬ ನಿವಾಸಿ. 15ನೇ ವಾರ್ಡ್‌ನ ಜನಪ್ರತಿನಿಧಿ ಮಹಾಲಕ್ಷ್ಮಿ ಅವರು ಪ್ರಭಾವಿ ಕಾಂಗ್ರೆಸ್‌ ಪಕ್ಷದವರೇ ಆಗಿದ್ದೂ ಪ್ರಯೋಜನವಾಗಿಲ್ಲ. 16ನೇ ವಾರ್ಡ್‌ನ ಪಕ್ಷೇತರ ಸದಸ್ಯ ಟಿ.ಎಂ.­ಶಂಷೀರ್‌ ಅವರೂ ಗಮನ ಹರಿಸುತ್ತಿಲ್ಲ ಎಂಬುದು ಅವರ ಅಸಮಾ­ಧಾನ.

ಪ್ರತಿಭಟನೆ: ಮೂಲಸೌಕರ್ಯ ಕಲ್ಪಿಸ­ಬೇಕು ಎಂದು  ಬಡಾವಣೆಯ ಹಿರಿಯ ನಾಗರಿಕರು ಸೇರಿದಂತೆ ಹಲವರು ನಗರ­ಸಭೆಗೆ ಮನವಿಗಳನ್ನು ಸಲ್ಲಿಸುತ್ತಲೇ ಇದ್ದಾರೆ. ಧರಣಿ, ಪ್ರತಿಭಟನೆಗಳು ನಡೆ­ಯುತ್ತಿವೆ. ‘ಸಂಸದರೇ ಇದ್ದರೂ ನಮ್ಮ ಸ್ಥಿತಿಯಲ್ಲಿ ಬದಲಾವಣೆ ಆಗಲೇ ಇಲ್ಲ’ ಎಂಬುದು ಇಲ್ಲಿನ ನಿವಾಸಿಗಳ ಅಳಲು.

‘ಸಾವಿರಾರು ಕೋಟಿ ರೂಪಾಯಿ ವೆಚ್ಚದ ರೈಲ್ವೆ ಕೋಚ್‌ ಕಾರ್ಖಾನೆ ಜಿಲ್ಲೆಗೆ ಬರಲಿದೆ. ಆದರೆ ನಮ್ಮ ಬಡಾವಣೆಗೆ ಡಾಂಬರು ಯಾವಾಗ ಬರುತ್ತದೆ ಎಂಬ ಪ್ರಶ್ನೆಗೆ ಉತ್ತರ ಹೇಳು­ವವರು ಕ್ಷೇತ್ರದಲ್ಲಿ ಇಲ್ಲವಾಗಿದ್ದಾರೆ’ ಎನ್ನುತ್ತಿದ್ದಾರೆ ನಿವಾಸಿಗಳು.

ಬೆಂಗಳೂರಿಗೆ ಸಮೀಪದಲ್ಲೇ ಇದ್ದರೂ ಜಿಲ್ಲೆಯ ಪಟ್ಟಣಗಳು ಮತ್ತು ಜಿಲ್ಲಾ ಕೇಂದ್ರ ಈಗಲೂ ಸುಧಾರಣೆ ಹಾದಿಯಲ್ಲಿರುವ ಹಳ್ಳಿಗಳಂತೆಯೇ ಕಾಣುತ್ತದೆ.

ನಗರದ ಹಲವು ಬಡಾವಣೆಗಳಲ್ಲಿ ಮಣ್ಣಿನ ರಸ್ತೆಗಳಿವೆ. ನಗರೋತ್ಥಾನ ಯೋಜನೆ, ಕೆಎಂಆರ್‌ಪಿ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಕೋಟ್ಯಂತರ ರೂಪಾಯಿ ಹರಿದು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದ ಬಹಳಷ್ಟು ಮಣ್ಣಿನ ರಸ್ತೆಗಳು ಇತ್ತೀಚೆಗಷ್ಟೇ ಡಾಂಬರು, ಕಾಂಕ್ರೀಟ್‌ ಕಾಣುತ್ತಿವೆ.  ಜನರ ನಿರೀಕ್ಷೆಗಳು ದೊಡ್ಡ­ದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.