ಕೋಲಾರ: ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಕೇಸರಿ ಬಾವುಟಗಳನ್ನು ತೆರವು ಮಾಡುವ ನಗರಸಭೆ ಕಾರ್ಯಾಚರಣೆಗೆ ಅಡ್ಡಿಪಡಿಸಿದ ಭಜರಂಗದಳ ನಾಲ್ವರನ್ನು ನಗರಠಾಣೆ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ. ಮುನಿಯಪ್ಪ, ನಿರಂಜನ್, ಕೃಷ್ಣಪ್ಪ ಮತ್ತು ನರೇಂದ್ರ ಬಂಧಿತ ಆರೋಪಿಗಳು. ಕಾರ್ಯಾಚರಣೆಗೆ ಅಡ್ಡಿಪಡಿಸಿದ ಹಲವು ಮುಖಂಡರ ಬಂಧನಕ್ಕೆ ಪೊಲೀಸ್ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಮೀನಿಗೆ ಅರ್ಜಿ: ತಮ್ಮ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಭಜರಂಗದಳದ ಪ್ರಮುಖರಾದ ಬಾಲಾಜಿ, ಅಪ್ಪಿ, ಬಾಬು ಮತ್ತು ಚಿನ್ನಪ್ಪ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರತಿಭಟನೆ: ಕಾರ್ತೀಕ ಮಾಸದ ಕಡೆಯ ಸೋಮವಾರದಂದು ನಡೆದ ಅಂತರಗಂಗೆ ಜಾತ್ರೆ ಪ್ರಯುಕ್ತ ವೃತ್ತದಲ್ಲಿ ಭಜರಂಗದಳ ಕೇಸರಿ ಬಣ್ಣ ಧ್ವಜಗಳನ್ನು ಅಳವಡಿಸಿತ್ತು. ನಂತರ ಧ್ವಜಗಳನ್ನು ತೆರವುಗೊಳಿಸದ ಕಾರಣ ಪೊಲೀಸ್ ಇಲಾಖೆಯು ನಗರಸಭೆಗೆ ನೋಟಿಸ್ ಜಾರಿ ಮಾಡಿತ್ತು, ಆ ಹಿನ್ನೆಯಲ್ಲಿ ಆರೋಗ್ಯ ನಿರೀಕ್ಷಕ ರಮೇಶ್ ಸಿಬ್ಬಂದಿ ಮೂಲಕ ಬ್ಯಾನರ್ ಹಾಗೂ ಧ್ವಜಗಳನ್ನು ತೆರವುಗೊಳಿಲು ಮುಂದಾದಾಗ ಭಜರಂಗದಳದ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಡಿ.15ರಂದು ಅಂತರಗಂಗೆಯಲ್ಲಿ ಲಕ್ಷದೀಪೋತ್ಸವ ಇರುವುದರಿಂದ ಡಿ. 20ರವರೆಗೂ ಅನುಮತಿ ನೀಡಲು ಕೋರಿ ನ.29ರಂದೇ ನಗರಸಭೆಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೂ ಯಾವುದೇ ಮುನ್ಸೂಚನೆಯೇ ಇಲ್ಲದೆ ಏಕಾಏಕಿ ಧ್ವಜಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಕಾರ್ಯಕರ್ತರು ದ್ವಿಚಕ್ರ ವಾಹನಗಳನ್ನು ರಸ್ತೆಗೆ ಆಡ್ಡಲಾಗಿ ನಿಲ್ಲಿಸಿ ರಸ್ತೆತಡೆಯನ್ನೂ ನಡೆಸಿದ್ದರು.
ಉದ್ವಿಗ್ನಗೊಂಡ ಕೆಲ ಕಾರ್ಯಕರ್ತರು ಯಂತ್ರವಾಹನಕ್ಕೆ ಕಲ್ಲು ತೂರಿದ್ದರು. ವಾಹನದ ಚಕ್ರಗಳ ಗಾಳಿ ತೆಗೆದಿದ್ದರು. ಸ್ಥಳಕ್ಕೆ ಬಂದ ನಗರಸಭೆಯ ಪೌರಾಯುಕ್ತ ಕೆ.ಎನ್.ಜಗದೀಶ್ ಅವರನ್ನು ಕಾರ್ಯಕರ್ತರು ಏಕವಚನದಲ್ಲಿ ಮನಬಂದಂತೆ ನಿಂದಿಸಿದ್ದರು. ಅವರ ಮಾತುಗಳನ್ನು ಕೇಳಲಾಗದೆ ಪೌರಾಯುಕ್ತರು ತಮ್ಮ ಕಿವಿಗಳನ್ನು ಮುಚ್ಚಿಕೊಂಡು ಸಹಿಸಿಕೊಂಡಿದ್ದರು. ನಂತರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.