ಬಂಗಾರಪೇಟೆ: ತಾಲ್ಲೂಕು ಕಚೇರಿಯಲ್ಲಿ ಲಂಚ ನೀಡದೆ ಯಾವುದೇ ಕೆಲಸವಾಗುತ್ತಿಲ್ಲ. ಸರ್ವೇ ಶಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಣ ಪಡೆದೂ ಕೆಲಸ ಮಾಡಿಕೊಡದೇ ಸತಾಯಿಸುತ್ತಿದ್ದಾರೆ. ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಈಚೆಗೆ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿದರು.
ತಾಲ್ಲೂಕಿನ ಬೂರಮಾಕನಹಳ್ಳಿ ಗ್ರಾಮ ನಿವಾಸಿ ವೆಂಕಟರಾಮಪ್ಪ ಎಂಬುವವರು ಸರ್ವೇ ನಂ.47ರಲ್ಲಿ ಇರುವ ತಮ್ಮ 2.7 ಎಕರೆ ಜಮೀನನ್ನು ಸರ್ವೇ ಮಾಡಿಸಲು ಕಳೆದ 3 ವರ್ಷಗಳಿಂದ ಸುತ್ತುತ್ತಿದ್ದಾರೆ. ಸರ್ವೇ ಶಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ರೂ.5 ಸಾವಿರ ಲಂಚವನ್ನೂ ನೀಡಿದ್ದಾರೆ ಎಂದು ಅವರು ಆರೋಪಿಸಿದರು.
ಸಿಬ್ಬಂದಿ ಇಲ್ಲಿಯವರೆಗೆ ಸರ್ವೇ ಮಾಡಿ ಕೊಟ್ಟಿಲ್ಲ. ತಾಲ್ಲೂಕು ಕಚೇರಿಯ ನೋಟೀಸ್ಗೆ ಗಮನ ನೀಡಿಲ್ಲ ಎಂದು ಆರೋಪಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಶಿರಸ್ತೇದಾರ್ ವೆಂಕಟರಾಮಪ್ಪ ಪ್ರತಿಭಟನಾಕಾರರೊಡನೆ ಮಾತನಾಡಿ 1 ವಾರದ ಒಳಗಾಗಿ ಸರ್ವೇ ಮಾಡಿಸುವುದಾಗಿ ಭರವಸೆ ನೀಡಿದರು. ಲಂಚದ ಆರೋಪವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಮುಖಂಡರಾದ ರಾಜಪ್ಪ, ನಾಗರಾಜ್, ರಾಮಪ್ಪ, ದೇವರಾಜ್, ಯಲ್ಲಪ್ಪ, ಅಣ್ಣಾದೊರೈ, ಬಸಪ್ಪ, ನಾರಾಯಣಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.