ADVERTISEMENT

ಸಾಲ ಮರುಪಾವತಿಸಿ; ಬ್ಯಾಂಕ್ ವಿಶ್ವಾಸ ಗಳಿಸಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 6:50 IST
Last Updated 10 ಮಾರ್ಚ್ 2012, 6:50 IST

ಕೆಜಿಎಫ್: ಕೃಷಿಯೇತರ ಚಟುವಟಿಕೆಗೆ ಕೊಡುವ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡಿ ಬ್ಯಾಂಕ್‌ಗಳ ವಿಶ್ವಾಸವನ್ನು ರೈತರು ಗಳಿಸಿಕೊಳ್ಳಬೇಕು ಎಂದು ಕೋಮುಲ್ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ತಿಳಿಸಿದರು.

ಸಮೀಪದ ಅರಿಮಾನಹಳ್ಳಿಯಲ್ಲಿ ಶುಕ್ರವಾರ ಕೆನರಾಬ್ಯಾಂಕ್ ವತಿಯಿಂದ 35 ಫಲಾನುಭವಿಗಳಿಗೆ ಹಸು ವಿತರಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಪ್ರಸ್ತುತ ಬರ ಪರಿಸ್ಥಿತಿಯನ್ನು ರೈತರು ಎದುರಿಸುತ್ತಿದ್ದಾರೆ.
ವ್ಯವಸಾಯವನ್ನು ನಂಬಿ ಜೀವನ ನಡೆಸುವ ಹಾಗಿಲ್ಲ.
 
ಇಂತಹ ಸಂದರ್ಭದಲ್ಲಿ ಕೃಷಿಯೇತರ ಚಟುವಟಿಕೆಯೊಂದೇ ರೈತರಿಗೆ ಜೀವನೋಪಾಯಕ್ಕೆ ಮಾರ್ಗವಾಗುತ್ತದೆ ಎಂದರು.ಕೆನರಾಬ್ಯಾಂಕ್‌ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುಲಿಕಟ್ಟಿ ಮಾತನಾಡಿ, ಬ್ಯಾಂಕ್ ಶೇ.18ರಷ್ಟು ಸಾಲವನ್ನು ಕೃಷಿ ಚಟುವಟಿಕೆಗೆ ಮೀಸಲಾಗಿಟ್ಟಿದೆ.
 
ಕೃಷಿಯೇತರ ಚಟುವಟಿಕೆಯಾದ ಹಾಲು ಉತ್ಪಾದನೆಯಿಂದ ಗ್ರಾಮೀಣ ಪ್ರದೇಶದ ರೈತರು ಆರ್ಥಿಕವಾಗಿ ಸಬಲರಾಗಬಹುದು ಎಂಬ ದೃಷ್ಟಿಯಿಂದ ಹಸುಗಳ ಮೇಲೆ ಸಾಲ ವಿತರಿಸಲಾಗುತ್ತಿದೆ ಎಂದರು.

ಹಸು ಪೋಷಿಸಲು ಖನಿಜಭರಿತ ಆಹಾರ ಅಗತ್ಯ. ಈ ಹಿನ್ನೆಲೆಯಲ್ಲಿ ರಾಸುಗಳಿಗೆ ನೀಡಲಾಗುವ ಅಜೋರಾ ಬೆಳೆಗೆ ಹಾಲು ಒಕ್ಕೂಟದ ವತಿಯಿಂದ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಹಾಲು ಒಕ್ಕೂಟದ ವ್ಯವಸ್ಥಾಪಕ ನಾರಾಯಣಸ್ವಾಮಿ ತಿಳಿಸಿದರು.

ಉಪ ವ್ಯವಸ್ಥಾಪಕ ಡಾ.ವೆಂಕಟರಾಂ, ಬ್ಯಾಂಕ್ ವ್ಯವಸ್ಥಾಪಕ ಸುರೇಶ್‌ಕುಮಾರ್, ಅಧಿಕಾರಿಗಳಾದ ಚಂದ್ರಶೇಖರಬಾಬು, ಯಮುನಾದೇವಿ, ಪ್ರದೀಪ್‌ಕುಮಾರ್, ಗ್ರಾಮದ ಹಿರಿಯ ಗೋಪಣ್ಣ ಉಪಸ್ಥಿತರಿದ್ದರು. ದೇವೇಂದ್ರಪ್ಪ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.