ಶ್ರೀನಿವಾಸಪುರ: ಸುಗಟೂರು ಗ್ರಾಮದಲ್ಲಿ ಪುರಾಣ ಪ್ರಸಿದ್ಧ ಗಂಗಾಧರೇಶ್ವರಸ್ವಾಮಿ ದೇವರ ರಾವಣ ವಾಹನೋತ್ಸವವನ್ನು ಬುಧವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಗ್ರಾಮದ ಹಿರಿಯರ ಸಮ್ಮುಖದಲ್ಲಿ ಆಗಮಿಕ ಎ.ಪಿ.ರಾಮನಾಥ ದೀಕ್ಷಿತ್, ಅರ್ಚಕರಾದ ಭೀಮಣ್ಣ, ರಮೇಶ್ ಬಾಬು ರಾವಣ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಉತ್ಸವ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಎಸ್.ವಿ.ನಾರಾಯಣಗೌಡ, ಗೋಪಾಲಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾರಾಯಣಮೂರ್ತಿ, ಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುನಿಕದಿರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಸಂಜೆ ಮತ್ತು ರಾತ್ರಿ ಬೇರೆ ಬೇರೆ ಸೇವಾಕರ್ತರಿಂದ ರಾವಣ ವಾಹ ನೋತ್ಸವ, ಮುತ್ತಿನ ಪಲ್ಲಕಿ ಉತ್ಸವ, ಬಾಣ ಬಿರುಸು ಪ್ರದರ್ಶನ, ದೀಪೋತ್ಸವ ಏರ್ಪಡಿಸಲಾಗಿತ್ತು. ಗ್ರಾಮದ ರಥಬೀದಿ ಸೇರಿದಂತೆ ಗ್ರಾಮದ ಎಲ್ಲ ದೇವಾಲಯಗಳಿಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದೇವರ ವಿಗ್ರಹಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಉತ್ಸವ ಸಾಂಸ್ಕೃತಿಕ ವಿಭಾಗದಿಂದ ಭಾಗವತಾರಣಿ ವರಲಕ್ಷ್ಮಿ ಶವಾಡಿ ಅವರಿಂದ ಭೂ ಕೈಲಾಸ ಎಂಬ ಹರಿಕಥೆ ಏರ್ಪಡಿಸಲಾಗಿತ್ತು. ಸಾಹಿತಿ ಹಾಗೂ ಕಿರುತೆರೆ ಕಲಾವಿದ ಗೋ.ನಾ.ಸ್ವಾಮಿ ಮತ್ತು ಸಂಗಡಿಗರಿಂದ ವಾದ್ಯಗೋಷ್ಠಿ ಏರ್ಪಡಿಸಲಾಗಿತ್ತು. ಮಿಮಿಕ್ರಿ ದಯಾನಂದ್ ಮತ್ತು ಸಂಗೀತ ನಿರ್ದೇಶಕ ಮನೋಹರ್ ತಮ್ಮ ಕಲಾ ಪ್ರದರ್ಶನ ನೀಡಿದರು. ಸುಗಟೂರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಹೆಚ್ಚಿನ ಸಂಖ್ಯೆ ನಾಗರಿಕರು ಉತ್ಸವದಲ್ಲಿ ಭಾಗವಹಿಸಿದ್ದರು.
ಧರ್ಮದರ್ಶಿಗಳಾದ ಎಸ್.ಮುನಿಯಪ್ಪ, ಎಸ್.ವಿ.ನಾರಾಯಣಗೌಡ, ಎಸ್.ವಿ.ಚಿಕ್ಕಣ್ಣಾಚಾರ್, ಎಸ್.ಎನ್.ರಾಮಚಂದ್ರೇಗೌಡ, ಮಂಡಿ ಕೃಷ್ಣಯ್ಯಶೆಟ್ಟಿ, ಎಸ್.ಆರ್.ರಾಮಕೃಷ್ಣಮಾಚಾರ್, ಕೋದಂಡರಾಮರಾಜು, ಲಕ್ಷ್ಮಮ್ಮ, ಮುನಿಕದಿರಪ್ಪ ಉತ್ಸವದ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.